ಮತ್ತೆ ಕನ್ನಡಿಗರಿಗೆ ಅನ್ಯಾಯ: ಕೊಟ್ಟ ಮಾತು ಮರೆತ ಕೇಂದ್ರ ಸರ್ಕಾರ
Recommended Video
ಬೆಂಗಳೂರು, ಸೆಪ್ಟೆಂಬರ್ 13: ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ನೀಡಿದ ಭರವಸೆ ಹುಸಿಯಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (ಐಬಿಪಿಎಸ್) ಗುರುವಾರ ಅರ್ಜಿ ಆಹ್ವಾನಿಸಿದೆ. ರಾಜ್ಯದಲ್ಲಿ 953 ಹುದ್ದೆಗಳು ಖಾಲಿಯಿದ್ದು, ಆನ್ಲೈನ್ನಲ್ಲಿ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆ ತಿಳಿದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆಯಷ್ಟೇ. ಭಾಷೆ ತಿಳಿದಿರುವುದು ಕಡ್ಡಾಯ ಎಂದು ದೃಢಪಡಿಸುವುದಕ್ಕೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ.
12075 ಹುದ್ದೆಗೆ ಅರ್ಜಿ ಆಹ್ವಾನಿಸಿದ ಐಬಿಪಿಎಸ್
ಮುಖ್ಯವಾಗಿ ಈ ಭಾಷೆಯನ್ನು ಬರೆಯಲು ಕನ್ನಡದಲ್ಲಿ ಅವಕಾಶವನ್ನೇ ನೀಡಿಲ್ಲ. ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಬಹುದಾಗಿದೆ. ಈ ಮೂಲಕ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದ ಭರವಸೆ ಈ ಸಲವೂ ಈಡೇರಿಲ್ಲ. ಇದರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ಐಬಿಪಿಎಸ್ ಮೋಸ ಮತ್ತೆ ಮುಂದುವರಿದಿದೆ.
ಎಷ್ಟು ಹುದ್ದೆಗಳಿಗೆ ನೇಮಕಾತಿ?
ಒಟ್ಟು 953 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ 146 ಪರಿಶಿಷ್ಟ ಜಾತಿ, 60 ಪರಿಶಿಷ್ಟ ಪಂಗಡ, 248 ಇತರೆ ಹಿಂದುಳಿದ ವರ್ಗ, 92 ಆರ್ಥಿಕವಾಗಿ ದುರ್ಬಲರು ಮತ್ತು 407 ಸಾಮಾನ್ಯ ವರ್ಗದ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. 2019ರ ಅಕ್ಟೋಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
'ಐಬಿಪಿಎಸ್ ಮೋಸ'ದ ವಿರುದ್ಧ ಹೋರಾಟ
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. 'ಐಬಿಪಿಎಸ್ ಮೋಸ' ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು. ರಾಜ್ಯದಿಂದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕು ಎಂಬ ಒತ್ತಡ ಹೇರಲಾಗಿತ್ತು. ರಾಜ್ಯದ ಸಂಸದರ ನಿಯೋಗವು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್
ಗ್ರಾಮೀಣ ಬ್ಯಾಂಕ್ ನೇಮಕಾತಿಯಲ್ಲೂ ಜಾರಿಯಾಗಿರಲಿಲ್ಲ
ಇದಕ್ಕೆ ನಿರ್ಮಲಾ ಸೀತಾರಾಮನ್ ಅವರು ಸ್ಪಂದಿಸಿದ್ದರು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ನೇಮಕಾತಿಯ ಪರೀಕ್ಷೆಗಳನ್ನು 13 ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆಗಲೂ ಅದು ಈಡೇರಿರಲಿಲ್ಲ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ನೇಮಕಾತಿಯ ಮುಖ್ಯ ಪರೀಕ್ಷೆಯನ್ನು ಮಾತ್ರ ಇಂಗ್ಲಿಷ್ ಹಾಗೂ ಹಿಂದಿಯ ಜತೆಗೆ ಇತರೆ 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿತ್ತು. ಆಗಲೂ ಕೊಟ್ಟ ಮಾತಿಗೆ ಕೇಂದ್ರ ಸರ್ಕಾರ ತಪ್ಪಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಇಷ್ಟೆಲ್ಲಾ ಹೋರಾಟಗಳು ನಡೆದರೂ ಕನ್ನಡಿಗರ ಭಾವನೆಗಳಿಗೆ ಕೇಂದ್ರ ಸರ್ಕಾರ ಕಿಮ್ಮತ್ತು ನೀಡಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಈಗ ರಾಷ್ಟ್ರೀಕೃತ ಬ್ಯಾಂಕ್ಗಳ ನೇಮಕಾತಿಯಲ್ಲಿ ಕೂಡ ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳನ್ನು ಪುನಃ ಕಡೆಗಣಿಸಲಾಗಿದೆ.
ರಾಜ್ಯದ ಸಂಸದರಿಂದ ಮನವಿ
ಐಬಿಪಿಎಸ್ ಆರ್ಆರ್ಬಿ (ಸ್ಥಳೀಯ ಮತ್ತು ಗ್ರಾಮೀಣ ಬ್ಯಾಂಕ್ ನೇಮಕಾತಿ) ಅರ್ಜಿ ಸಲ್ಲಿಸುವವರು 10ನೇ ತರಗತಿಯವರೆಗೆ ತಮ್ಮ ಮಾತೃಭಾಷೆಯಲ್ಲಿ ಅಭ್ಯಾಸ ಮಾಡಿರಬೇಕು ಎಂದು 2014ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಮತ್ತೆ ಹೊರಡಿಸಬೇಕು ಎಂದು ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಬ್ಯಾಂಕ್ ನೇಮಕಾತಿ:ಕನ್ನಡಿಗರ ಪರ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿ
ಧನ್ಯವಾದ ಸಲ್ಲಿಸಿದ್ದ ತೇಜಸ್ವಿ ಸೂರ್ಯ
ಜುಲೈ 4ರಂದು ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಆರ್ಬಿ, ಐಬಿಪಿಎಸ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವುದಾಗಿ ಪ್ರಕಟಿಸಿದ್ದರು. ಈ ಬಗ್ಗೆ ತೇಜಸ್ವಿ ಸೂರ್ಯ ಅವರು ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ನಿರಂತರ ಹೋರಾಟ ಮಾಡಿದ ಸಂಸದ ಪ್ರತಾಪ್ ಸಿಂಹ ಅವರಿಗೆ ವಿಶೇಷ ಧನ್ಯವಾದ ಹೇಳುವುದಾಗಿ ಸೂರ್ಯ ತಿಳಿಸಿದ್ದರು. ಆದರೆ ಈ ನ್ಯಾಯ ಈಗಲೂ ಮರೀಚಿಕೆಯಾಗಿಯೇ ಉಳಿದಿದೆ.
ಅನ್ಯಾಯ ಸರಿಪಡಿಸಿದ ಬಳಿಕ ಕಾಲಿಡಿ
ಕೇಂದ್ರದಲ್ಲಿ ಕರ್ನಾಟಕದ ಲೋಕಸಭಾ ಸದಸ್ಯರಿಗೆ ಕಿಮ್ಮತ್ತು ಇದ್ದರೆ ತಾನೇ ಕೇಂದ್ರ 'ಕನ್ನಡಕ್ಕೆ' ಕಿಮ್ಮತ್ತು ಕೊಡೋದು? ಅಂದು ನಿರ್ಮಲಾ ಸೀತಾರಾಮನ್ ಕೊಟ್ಟ ಸುಳ್ಳು ಭರವಸೆಯನ್ನೇ ನಂಬಿ ಧನ್ಯವಾದಗಳ ರೂಪದ ವಿಜಯೋತ್ಸವ ಆಚರಿಸಿದವರೆಲ್ಲಾ ಇಂದು ಎಲ್ಲಿ? ನಿರ್ಮಲಾ ಸೀತಾರಾಮನ್ ಅವರೇ ಇನ್ಮುಂದೆ ನೀವು ಕರ್ನಾಟಕಕ್ಕೆ ಕಾಲಿಡಬೇಕಾದರೆ ಈ ಅನ್ಯಾಯ ಸರಿಪಡಿಸಿಯೇ ಕಾಲಿಡಬೇಕು ಎಂದು ಭೀಮಾಶಂಕರ ಪಾಟೀಲ ಎಂಬುವವರು ಕಿಡಿಕಾರಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಎರಡು ದಿನ ಬ್ಯಾಂಕ್ ಮುಷ್ಕರ
ಮಲತಾಯಿ ಧೋರಣೆಗೆ ಕುಮಾರಸ್ವಾಮಿ ಆಕ್ರೋಶ
ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಿಂದಿಯೇತರರಿಗೆ ದೇಶವಲ್ಲ
ಗೆಳೆಯರೇ ಮತ್ತೆ IBPS Notification ಬಂದಿದೆ ಹಿಂದಿಯೇತರರಿಗೆ ಈ ದೇಶವಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ Upsc Army Railway ಸೇರಿದಂತೆ ಒಕ್ಕೂಟದ ಯಾವ ಪರೀಕ್ಷೆಯನ್ನು ಮತ್ತು ಹುದ್ದೆಯನ್ನು ಹಿಂದಿಯೇತರರು ಸೇರಿಕೊಳ್ಳಬಾರದೆಂಬ ಹುನ್ನಾರವಿದು ಸ್ವಾತಂತ್ರ್ಯ ಬಂದಾಗಿನಿಂದ ಇಂತಹ ಅನ್ಯಾಯಗಳು ಸಾಮಾನ್ಯವಾಗಿವೆ ಜೈ ಶ್ರೀ ರಾಮ್ ಎಂದು ಪರಮಾತ್ಮ ಎಸ್. ವ್ಯಂಗ್ಯವಾಗಿ ಹೇಳಿದ್ದಾರೆ.