ಚಂಬಲ್ ಸಿನಿಮಾ ಬಿಡುಗಡೆಗೆ ತಡೆಕೋರಿದ ಡಿಕೆ ರವಿ ತಾಯಿ
ಬೆಂಗಳೂರು, ಫೆಬ್ರವರಿ 20: ನೀನಾಸಂ ಸತೀಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಚಂಬಲ್' ಬಿಡುಗಡೆಗೂ ಮುನ್ನವೇ ವಿಘ್ನ ಎದುರಿಸುತ್ತಿದೆ. ಈ ಚಿತ್ರದ ಬಿಡುಗಡೆ, ಪ್ರದರ್ಶನಕ್ಕೆ ತಡೆ ಕೋರಿ ದಿವಂಗತ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ತಾಯಿ ಗೌರಮ್ಮ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಡಿ.ಕೆ. ರವಿ ಅವರ ತಾಯಿ ಗೌರಮ್ಮ ಮತ್ತು ತಂದೆ ಕರಿಯಪ್ಪ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, 'ಚಂಬಲ್' ಚಿತ್ರದಲ್ಲಿ ಡಿ.ಕೆ. ರವಿ ಅವರ ಚಾರಿತ್ರ್ಯಹರಣ ಮಾಡುವ ಅಂಶಗಳನ್ನು ಸೇರಿಸಲಾಗಿದೆ.
ಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐ
ಚಿತ್ರದ ಟ್ರೈಲರ್ ಮತ್ತು ಶೀರ್ಷಿಕೆ ಅವಹೇಳನಕಾರಿಯಾಗಿದ್ದು, ಸೆನ್ಸಾರ್ ಪ್ರಮಾಣ ಪತ್ರ ಹಿಂಪಡೆಯಲು ನಿರ್ದೇಶನ ನೀಡಬೇಕು, ಚಿತ್ರದಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರನ್ನು ಚಿತ್ರದಲ್ಲಿ ಕೆಟ್ಟ ವ್ಯಕ್ತಿಯನ್ನಾಗಿ ಬಿಂಬಿಸಲಾಗಿದೆ, ಇದೆಲ್ಲವೂ ಬದಲಾಗಬೇಕು, ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಗೌರಮ್ಮ ಕೋರಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರ ಪೀಠ, ಕೇಂದ್ರ ಸಾರ್ವಜನಿಕ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಸೆನ್ಸಾರ್ ಮಂಡಳಿ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡದವರಿಗೆ ನೋಟಿಸ್ ಜಾರಿಮಾಡಿ ಫೆಬ್ರವರಿ 21 ಕ್ಕೆ ವಿಚಾರಣೆ ಮುಂದೂಡಲಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಜಾಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರವು ಫೆಬ್ರವರಿ 23ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೂ ಡಿಕೆ ರವಿ ಪೋಷಕರು ದೂರು ನೀಡಿದ್ದಾರೆ.
ಮಾರ್ಚ್ 16. 2015 ರಲ್ಲಿ ತಮ್ಮ ಬೆಂಗಳೂರಿನ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಡಿಕೆ ರವಿಯವರ ಮೃತದೇಹ ಸಿಕ್ಕಿತ್ತು. ಅದರೊಂದಿಗೆ ರಾಜ್ಯದಲ್ಲಷ್ಟೇ ಅಲ್ಲದೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧ ಕೆಲವು ಆರೋಪಗಳೂ ಕೇಳಿ ಬಂದಿದ್ದವು.
ಡಿಕೆ ರವಿಯವರು ದಕ್ಷ ಅಧಿಕಾರಿಯಾಗಿದ್ದರು. ಕೊಲಾರ, ಬೆಂಗಳೂರು ಇತರೆಡೆ ಜನಾನುರಾಗಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದರು. ಈಗ ಸಿಬಿಐ ನೀಡಿದ ವರದಿ ಜನರಲ್ಲಿ ಗೊಂದಲವನ್ನು ಮೂಡಿಸಿದೆ.