ಲಾಕ್ಡೌನ್ ಸಂಪೂರ್ಣ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ ಡಿಕೆಶಿ
ಬೆಂಗಳೂರು, ಮೇ 19: ''ಲಾಕ್ ಡೌನ್ ಸಂಪೂರ್ಣ ತೆರವಾದ ನಂತರ ರಾಜ್ಯದ ಮೂಲೆಮೂಲೆಗೂ ಪ್ರವಾಸ ಕೈಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗ, ಧರ್ಮದ ಜನರ ಕುಂದು ಕೊರತೆಗಳನ್ನು ಆಲಿಸುತ್ತೇನೆ, ಅವರ ಧ್ವನಿಯಾಗಿ ಅವರ ಬೆನ್ನಿಗೆ ನಿಲ್ಲುತ್ತೇನೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ತಿಳಿಸಿದ್ದಾರೆ.
Recommended Video
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ''ಮೇ 31ರವರೆಗೂ ಸರ್ಕಾರ ಲಾಕ್ ಡೌನ್ ವಿಸ್ತರಿಸಿದ್ದು, ಇದಾದ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.
ಲಾಕ್ಡೌನ್ 4.0: ಕಚೇರಿ ಕಾರ್ಯ ನಿರ್ವಹಣೆಗೆ ಮಾರ್ಗಸೂಚಿ
ಲಾಕ್ ಡೌನ್ ಮುಗಿದ ತಕ್ಷಣ ಕೋವಿಡ್ ಸಮಸ್ಯೆಯಿಂದ ಎದುರಾಗಿರು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಸರ್ಕಾರಕ್ಕೆ ನಾವು ಸಹಕಾರ ನೀಡಿದರು, ಕೆಲವು ವಿಚಾರಗಳಲ್ಲಿ ಹೊರತುಪಡಿಸಿ ಬಹುತೇಕ ವಿಚಾರಗಳಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಬೆಳೆ ಖರೀದಿಯಿಂದ ವಲಸೆ ಕಾರ್ಮಿಕರ ಸಂಕಷ್ಟದವರೆಗೂ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಅಧಿಕಾರ ದುರುಪಯೋಗ, ತಮ್ಮ ಮತದಾರರಿಗೆ ಮಾತ್ರ ಸೌಲಭ್ಯ ಕಲ್ಪಿಸಿದೆ. ಡಿಕೆಶಿ ಅವರು ಪತ್ರಿಕಾಗೋಷ್ಟಿಯ ಪ್ರಮುಖಾಂಶಗಳು ಇಲ್ಲಿವೆ...
ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ
''ಕೇಂದ್ರ ಸರ್ಕಾರ 21 ಲಕ್ಷ ಕೋಟಿ ಪರಿಹಾರ ಘೋಷಿಸಿದೆ. ಇದರ ಬಗ್ಗೆ ಆರ್ಥಿಕ ತಜ್ಞರು ಹಾಕಿರುವ ಲೆಕ್ಕಾಚಾರದ ಪ್ರಕಾರ ಕೇವಲ 2 ಲಕ್ಷ ಕೋಟಿ ಮಾತ್ರ ಸರ್ಕಾರಕ್ಕೆ ಹೊರೆಯಾಗಿದ್ದು, ಉಳಿದೆಲ್ಲವು ಬ್ಯಾಂಕ್ ಮೂಲಕ ಸಾಲವಾಗಿ ನೀಡಲು ನಿರ್ಧಾರವಾಗಿದೆ. ಇಂದು ಮೋದಿ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ. ಆರಂಭದಲ್ಲಿ ಆರ್ಥಿಕ ನೆರವು ನೀಡುವ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಲ್ಲಿದ್ದಲು, ವಿಮಾನಯಾನ ಕ್ಷೇತ್ರಗಳು ಖಾಸಗೀಕರಣಕ್ಕೂ, ಜನರ ಸಂಕಷ್ಟ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲ''
ಒಂದು ರೂಪಾಯಿ ನೀಡಲು ಸಾಧ್ಯವಾಗಿಲ್ಲ
''ಮುಖ್ಯಮಂತ್ರಿಗಳೇ (ಯಡಿಯೂರಪ್ಪ) ನೀವು ಘೋಷಿಸಿರುವ 1610 ಕೋಟಿ ಪ್ಯಾಕೇಜ್ ನಲ್ಲಿ ಈವರೆಗೂ ಒಬ್ಬರಿಗೂ ಒಂದು ರೂಪಾಯಿ ನೀಡಲು ಸಾಧ್ಯವಾಗಿಲ್ಲ. ಪೀಣ್ಯ ಕೈಗಾರಿಕ ಪ್ರದೇಶದಲ್ಲಿ ನಾಲ್ಕೂವರೆ ಲಕ್ಷ ಮತದಾರರಿದ್ದು, ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸರ್ಕಾರ ಈ ಕ್ಷೇತ್ರಕ್ಕೆ ನೀಡಿದ ಆಹಾರ ಪ್ಯಾಕೇಟ್ ಗಳು ಮಾತ್ರ ಕೇವಲ 3 ಸಾವಿರ. ಇದಕ್ಕೆ ದಾಖಲೆಗಳು ಬಿಬಿಎಂಪಿ ಕಾರ್ಮಿಕ ವಿಭಾಗದಲ್ಲಿ ಉಳಿದುಕೊಂಡಿದೆ''
ರಕ್ತ ಹರಿಸಿದವರಿಗೆ ನೀವು ಅಪಮಾನ ಮಾಡಿದ್ದೀರಿ
''ನಿಮಗೆ ನಿಜವಾಗಿ ಕಾಳಜಿ ಇದ್ದಿದ್ದರೆ, ನಮ್ಮ ರಾಜ್ಯ ಕಟ್ಟುತ್ತಿರುವ ಕಾರ್ಮಿಕರನ್ನು ಸರಿಯಾಗಿ ನೋಡಿಕೊಂಡಿದ್ದರೆ, ಅವರು ಇಂದು ತಮ್ಮ ಊರಿಗೆ ಮರಳುತ್ತಿರಲಿಲ್ಲ. ಈ ದೇಶಕ್ಕಾಗಿ ಬೆವರು, ರಕ್ತ ಹರಿಸಿದವರಿಗೆ ನೀವು (ಯಡಿಯೂರಪ್ಪ) ಅಪಮಾನ ಮಾಡಿದ್ದೀರಿ. ನೀವು ಲಾಕ್ ಡೌನ್ ಸಡಿಲ ಮಾಡಿದ ನಂತರ ರಾಜ್ಯದ ಪ್ರವಾಸ ಮಾಡುತ್ತೇನೆ. ಇದು ಪಕ್ಷದ ಕಾರ್ಯಕ್ರಮವಲ್ಲ. ನನ್ನ ಅಣ್ಣ ತಮ್ಮಂದಿರು, ನೊಂದು ಬೆಂದವರವರೆಗೆ ಸಾಂತ್ವಾನ ಹೇಳಲು ಹೋಗುತ್ತೇನೆ. ಎಲ್ಲ ವರ್ಗ, ಧರ್ಮದ ಜನರನ್ನು ಭೇಟಿ ಮಾಡಿ ಅವರ ಜತೆ ನಿಲ್ಲುತ್ತೇವೆ''
ರಾಜಕೀಯಕ್ಕೆ ಕಾರ್ಯಕ್ರಮ ಮಾಡುತ್ತಿಲ್ಲ
''ನಮ್ಮ ಪಕ್ಷಕ್ಕೆ ಇತಿಹಾಸ, ಚರಿತ್ರೆ ಇದೆ. ಅಧಿಕಾರ, ರಾಜಕೀಯಕ್ಕೆ ಕಾರ್ಯಕ್ರಮ ಮಾಡುತ್ತಿಲ್ಲ. ಇದು ಮಾನವೀಯ ಸೇವೆ. ಅದಕ್ಕೆ ನಾನು ಎಲ್ಲರ ಸಹಕಾರವನ್ನು ಬೇಡುತ್ತೇನೆ. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಿದ್ದೇವೆ. ಪ್ರತಿ ಕ್ಷೇತ್ರ, ವಾರ್ಡ್ ನಲ್ಲಿ ಸಂಘಟನೆ ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ''
ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿಲ್ಲ
''ದೇಶ ಹಾಗೂ ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಲು ಕಾರಣ, ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ಸರ್ಕಾರ ಕೇವಲ ಯೂಟರ್ನ್ ನಿರ್ಧಾರಗಳನ್ನೇ ನೀಡುತ್ತಿವೆ. ಈ ಗೊಂದಲಗಳು ಈ ವೈಫಲ್ಯಕ್ಕೆ ಕಾರಣ. ನಾವು ರಾಜಕಾರಣ ಮಾಡಬಾರದು ಅಂತಾ ಸುಮ್ಮನಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ''
ಸರಿಯಾಗಿ ಮುಂದಾಲೋಚನೆ ಇಲ್ಲ
''ಸರ್ಕಾರ ಸರಿಯಾಗಿ ಮುಂದಾಲೋಚನೆ ಇಲ್ಲ, ಸಮನ್ವಯತೆ, ನಂಬಿಕೆ ಇಲ್ಲ. ಹೀಗಾಗಿ ಪರಿಣಾಮಕಾರಿ ಯೋಜನೆಗಳು ಇಲ್ಲದೆ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಈಗ ತೆಗೆದುಕೊಂಡಿರುವ ನರೇಗಾ ಹಾಗೂ ಇತರೆ ಉತ್ತಮ ನಿರ್ಧಾರಗಳನ್ನು ನಮ್ಮ ಪುಸ್ತಕದಿಂದಲೇ ತೆಗೆದುಕೊಂಡಿದ್ದಾರೆ. ಹೂವು, ಹಣ್ಣು, ತರಕಾರಿ ರೈತರಿಗೆ 6 ಸಾವಿರ ಕೊಡುತ್ತಾರೆ ಇದು ಯಾವ ರೀತಿಯ ಪರಿಹಾರ? ಸರ್ಕಾರಕ್ಕೆ ನಾಚಿಕೆಯಾಗಬೇಕು. ಯಾವ ಚಾಲಕನಿಗೆ, ಯಾವ ಕ್ಷೌರಿಕರಿಗೆ ಹಣ ಸಿಕ್ಕಿದೆ? ನಾವು ಅದಿಕಾರದಲ್ಲಿದ್ದರೆ ಇಷ್ಟು ಹೊತ್ತಿಗಾಗಲೇ ಜನರ ಮನೆ ಬಾಗಿಲಿಗೆ ಚೆಕ್ ತಲುಪುತಿತ್ತು''
ಲಾಕ್ ಡೌನ್ ಅವೈಜ್ಞಾನಿಕ
''ಈಗ ಹೇರಲಾಗಿರುವ ಲಾಕ್ ಡೌನ್ ಅವೈಜ್ಞಾನಿಕವಾಗಿದ್ದು, ಯಾವುದೇ ಸಾಮಾನ್ಯ ವ್ಯಕ್ತಿಯ ಅಭಿಪ್ರಾಯವನ್ನೂ ಪಡೆದಿಲ್ಲ. ಇದು ಸರ್ವಾಧಿಕಾರ ಧೋರಣೆ. ನಾವು ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಿದೆವು. ಕರೆದು ಚರ್ಚಿಸಿದ್ದರೆ, ನಿಮಗೆ ನೆರವಾಗಲು ಆರ್ಥಿಕ ನಿರ್ಣಯಗಳಿಗೆ ಸಹಕಾರ ನೀಡುತ್ತಿದ್ದೆವು''