ಹರಿಹರ ಬ್ರಹ್ಮರೇ ಬರಲಿ ಡೋಂಟ್ ಕೇರ್: ಎಚ್ ವಿಶ್ವನಾಥ್ Vs ಕಾಗಿನೆಲೆ ಮಠ
Recommended Video
ಹಿಂದೂಗಳಲ್ಲಿ ಒಗ್ಗಟ್ಟನ್ನು ಮೂಡಿಸಿ, ಧರ್ಮ ಪ್ರಚಾರದಲ್ಲಿ ತೊಡಬೇಕಾಗಿರುವ ನಾಡಿನ ಕೆಲವು ಪೀಠಾಧಿಪತಿಗಳ ರಾಜಕೀಯ ಹಸ್ತಕ್ಷೇಪ ಮುಂದುವರಿಯುತ್ತಲೇ ಇದೆ. ಅವರವರ ಸಮುದಾಯದ ರಾಜಕೀಯ ಮುಖಂಡರ ಪರವಾಗಿ ನಿಂತು, ಜಾತಿ ರಾಜಕಾರಣ ಕಾವಿತೊಟ್ಟ ಸನ್ಯಾಸಿಗಳಿಂದ ಆಗುತ್ತಿರುವುದು ವಿಷಾದನೀಯ.
ಲಿಂಗಾಯತ, ಒಕ್ಕಲಿಗರ ಪೀಠಾಧಿಪತಿಗಳ ನಂತರ ಕುರುಬ ಸಮುದಾಯದ ನಿರಂಜನನಾನಂದಪುರಿ ಶ್ರೀಗಳು ಮತ್ತು ಅದೇ ಸಮುದಾಯದ ಹುಣಸೂರು ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ನಡುವೆ ಅಧಿಕಾರಿಗಳ ವರ್ಗಾವಣೆ ಸಂಬಂಧ ವಾಕ್ಸಮರ ಮುಂದುವರಿದಿದೆ. ಹರಿಹರ ಬ್ರಹ್ಮರೇ ಬರಲಿ ಡೋಂಟ್ ಕೇರ್ ಎಂದಿದ್ದಾರೆ ಕಾಗಿನೆಲೆ ಶ್ರೀಗಳು.
ಕುಮಾರಸ್ವಾಮಿ ಪಾಲಿಗೆ ಕಾಂಗರೂ ಆದ ಒಕ್ಕಲಿಗ ಮಠದ ನಂಜಾವಧೂತ ಸ್ವಾಮೀಜಿ
ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ನಂತರ, ಜಾತಿ ರಾಜಕೀಯ ಮಾಡುವುದಿದ್ದರೆ ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಚ್ಢಿಕೆ ಹೇಳಿದ್ದರು. ರೈತರ ಸಾಲಮನ್ನಾ ಸಂಬಂಧಿಸಿದಂತೆ ಸಾಣೇಹಳ್ಳಿ ಶ್ರೀಗಳು ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದರು.
ಇದಾದ ನಂತರ, ಕಳೆದ ವಾರ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿಗಳು ಸಮ್ಮಿಶ್ರ ಸರಕಾರವನ್ನು ಅಲ್ಲಾಡಿಸಲು ನೋಡಿದರೆ 'ಹುಷಾರ್' ಎಂದು ಮೋದಿ ಸರಕಾರಕ್ಕೆ ಚಾಲೆಂಜ್ ಮಾಡಿದ್ದರು. 'ನೇರವಾಗಿ ರಾಜಕೀಯಕ್ಕೆ ಬನ್ನಿ' ಎಂದು ಕುಮಾರಸ್ವಾಮಿ ಅಂದು ನೀಡಿದ್ದ ಹೇಳಿಕೆಯನ್ನು ಈ ಬಾರಿ ಪುನರುಚ್ಚಿಸಿರಲಿಲ್ಲ.
ಮೋದಿಗೆ ವಾರ್ನಿಂಗ್ ಕೊಟ್ಟ ನಂಜಾವಧೂತ ಶ್ರೀಗಳಿಗೆ ಐದು ಪ್ರಶ್ನೆಗಳು
ಸಮ್ಮಿಶ್ರ ಸರಕಾರದಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ, ಅಧಿಕಾರಿಗಳ ವರ್ಗಾವಣೆ, ಸಿದ್ದರಾಮಯ್ಯನವರಿಗೆ ಅನ್ಯಾಯವಾಗುತ್ತಿದೆ ಎಂದು ಕಾಗಿನೆಲೆ ಪೀಠದ ನಿರಂಜನನಾನಂದಪುರಿ ಶ್ರೀಗಳು, ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದರು. ನನಗೆ ಅನ್ಯಾಯವಾದಾಗ ಯಾಕೆ ಸುಮ್ಮನಿದ್ರಿ ಎಂದು ಎಚ್ ವಿಶ್ವನಾಥ್, ಶ್ರೀಗಳ ವಿರುದ್ದ ಕಿಡಿಕಾರಿದ್ದರಿಂದ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತಲೇ ಇದೆ.. ಮುಂದೆ ಓದಿ
ಪೀಠಾಧಿಪತಿಗಳ ' ರಾಜಕೀಯ ಹಸ್ತಕ್ಷೇಪ' ಹೆಚ್ಚಾಗುವ ಲಕ್ಷಣ
ನಂಜಾವಧೂತ ಸ್ವಾಮೀಜಿಗಳು, ಎಚ್ಡಿಕೆ ಮತ್ತು ಡಿಕೆಶಿ ಪರವಾಗಿ ನಿಂತ ಬೆನ್ನಲ್ಲೇ , ಕಾಗಿನೆಲೆ ಪೀಠದ ಶ್ರೀಗಳು ತಮ್ಮ ಸಮುದಾಯದ ಪರವಾಗಿ ಮಾತನಾಡಿದ್ದರಿಂದ, ಮುಂದಿನ ದಿನಗಳಲ್ಲಿ ಪೀಠಾಧಿಪತಿಗಳ ' ರಾಜಕೀಯ ಹಸ್ತಕ್ಷೇಪ' ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ರಾಜಕೀಯದಲ್ಲಿ ತೆಲೆಹಾಕುವ ಬದಲು, ರೈತರ ಆತ್ಮಹತ್ಯೆ, ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಸುಧಾರಣೆಯ ಬಗ್ಗೆ ಮಠಾಧೀಶರು ಹೆಚ್ಚು ತಲೆಕೆಡಿಸಿಕೊಂಡರೆ, ನಾಡು ಸುಭಿಕ್ಷವಾಗಲು ಸಹಾಯವಾಗುತ್ತಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದ್ವೇಷ ಸಾಧಿಸುತ್ತಿದೆ
ಕುಮಾರಸ್ವಾಮಿ ಸರಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದ್ವೇಷ ಸಾಧಿಸುತ್ತಿದೆ. ಆರಂಭದಲ್ಲಿ ನಮ್ಮ ಮುಖಂಡ ಸಿದ್ದರಾಮಯ್ಯನವರನ್ನು ಕಡೆಗಣಿಸುವ ಕೆಲಸ ನಿಮ್ಮ ಸರಕಾರದಿಂದ ಆಗಿದೆ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಕುರುಬ ಸಮುದಾಯದ ಪಾತ್ರ ಬಹುಮುಖ್ಯ ಎನ್ನುವುದನ್ನು ಮರೆಯಬೇಡಿ, ನಮ್ಮ ಸಮಾಜ ಕಡೆಗಣಿಸಿದರೆ ಹೋರಾಟ ಮಾಡಬೇಕಾದೀತು ಎಂದು ಕಾಗಿನೆಲೆ ಪೀಠಾಧಿಪತಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು.
ನನ್ನನ್ನು ಕಡೆಗಣಿಸಿದಾಗ ನಿಮ್ಮ ಜಾತಿ ಪ್ರೇಮ ಎಲ್ಲಿಗೆ ಹೋಗಿತ್ತು?
ಕಾಗಿನೆಲೆ ಶ್ರೀಗಳ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಎಚ್ ವಿಶ್ವನಾಥ್, ಇದೇ ಸಿದ್ದರಾಮಯ್ಯ ನನ್ನನ್ನು ಕಡೆಗಣಿಸಿದಾಗ ನಿಮ್ಮ ಜಾತಿ ಪ್ರೇಮ ಎಲ್ಲಿಗೆ ಹೋಗಿತ್ತು? ನನಗೆ ಕೊಡಬಾರದ ತೊಂದರೆಯನ್ನು ಸಿದ್ದರಾಮಯ್ಯ ಕೊಟ್ಟರು, ಆಗ ವಿರೋಧಿಸದ ನೀವು ಈಗ ಯಾಕೆ ವಿರೋಧಿಸುತ್ತಿದ್ದೀರಾ? ನೀವು ಕುರುಬ ಸಮುದಾಯಕ್ಕೆ ಶ್ರೀಗಳಾ ಅಥವಾ ಸಿದ್ದರಾಮಯ್ಯನವರಿಗೆ ಮಾತ್ರ ಶ್ರೀಗಳಾ ಎನ್ನುವ ಪ್ರಶ್ನೆಯನ್ನು ವಿಶ್ವನಾಥ್ ಕೇಳಿದ್ದರು.
ಸ್ನಾನ ಮಾಡಿ ಬರುವ ಆನೆ, ತನ್ನ ಮೈಮೇಲೆ ತಾನೇ ಮಣ್ಣು ಹಾಕಿಕೊಳ್ಳುತ್ತದೆ
ವಿಶ್ವನಾಥ್ ಅವರ ಹೇಳಿಕೆಗೆ ತಮ್ಮ ಶಾಖಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಕಾಗಿನೆಲೆ ಶ್ರೀಗಳು, ನದಿಕೆರೆಯಲ್ಲಿ ಸ್ನಾನ ಮಾಡಿ ದಡಕ್ಕೆ ಬರುವ ಆನೆ, ನಂತರ ತನ್ನ ಮೈಮೇಲೆ ತಾನೇ ಮಣ್ಣು ಹಾಕಿಕೊಳ್ಳುತ್ತದೆ. ತಮ್ಮ ಸಮುದಾಯವನ್ನು ತಾನೇ ನಿಂದಿಸುವ ಮೂಲಕ ವಿಶ್ವನಾಥ್ ತಮ್ಮ ರಾಜಕೀಯದಲ್ಲಿ ಅಂತದ್ದೇ ಕೆಲಸವನ್ನು ಮಾಡುತ್ತಿದ್ದಾರೆ - ಕಾಗಿನೆಲೆ ಶ್ರೀಗಳು.
ಹರಿಹರ ಬ್ರಹ್ಮರೇ ಬರಲಿ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ
ಕಾಗಿನೆಲೆ ಶ್ರೀಗಳ ತಿರುಗೇಟಿಗೆ ವಿಶ್ವನಾಥ್ ಅವರಿಂದ ಇನ್ನೂ ಏನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜೊತೆಗೆ, ಸಿದ್ದರಾಮಯ್ಯನವರೂ ಈ ಬಗ್ಗೆ ಚಕಾರವೆತ್ತಿಲ್ಲ. ಹರಿಹರ ಬ್ರಹ್ಮರೇ ಬರಲಿ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ, ಇದೇ ವಿಶ್ವನಾಥ್ ಮತ್ತು ಈಶ್ವರಪ್ಪನವರ ಪರವಾಗಿ ನಾನು ನಿಂತಿದ್ದೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಲಿ. ಆದರೂ, ನನ್ನ ಬಗ್ಗೆ ಮಾತನಾಡಿದರೆ ವಿಶ್ವನಾಥ್ ಅವರಿಗೆ ಸಂತೋಷ ಸಿಗುವುದಿದ್ದರೆ ಮಾತನಾಡಲಿ - ಕಾಗಿನೆಲೆ ಶ್ರೀಗಳು.