'ರಾಜ್ಯದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ನವರ ಮುಲಾಜಿನಲ್ಲಿದ್ದೇನೆ'
ಬೆಂಗಳೂರು, ಮೇ 27 : 'ಒಂದು ವೇಳೆ ಸಾಲ ಮನ್ನಾ ಮಾಡದಿದ್ದರೆ ರಾಜೀನಾಮೆ ಕೊಡುತ್ತೇನೆ. ಯಾರೂ ಸಹ ರಾಜೀನಾಮೆ ಕೊಡಿ ಎಂದು ಒತ್ತಡ ಹೇರುವ ಅಗತ್ಯವಿಲ್ಲ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಭಾನುವಾರ ವಿಧಾನಸೌಧದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ರೈತರ ಸಾಲ ಮನ್ನಾ ವಿಚಾರದಲ್ಲಿ ನನಗೆ ಒಂದು ವಾರ ಕಾಲಾವಕಾಶ ಕೊಡಿ' ಎಂದರು.
ಮೇ 28ರಂದು ಕರ್ನಾಟಕ ಬಂದ್ ಕರೆ ನೀಡಲ್ಲ : ಯಡಿಯೂರಪ್ಪ
'ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ. ಚುನಾವಣೆ ಸಂದರ್ಭದಲ್ಲಿ ರೈತ ಸಂಘಟನೆಯವರು ಯಾರು-ಯಾರು ಏನೇನು ಮಾಡಿದರು ಎಂಬುದು ನನಗೆ ಗೊತ್ತು' ಎಂದು ಹೇಳಿದರು.
'ನಾನು ಖುರ್ಚಿಗೆ ಅಂಟಿಕೊಂಡು ಕೂರುವವನಲ್ಲ. ಯಡಿಯೂರಪ್ಪ ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ಬೇಡ. ಅವರಿಗೆ ಸಣ್ಣ ಮಾನವೀಯತೆ ಬೇಡವೆ?. ನಮ್ಮ ಮಾತಿನಿಂದ ರೈತ ಕುಟುಂಬಗಳು ಕಂಗಾಲಾಗಿ ರೈತರ ಮಕ್ಕಳು ಅನಾಥರಾದರೆ ಯಾರು ಗತಿ?' ಎಂದರು.
ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಕೇಳಿ ರೈತ ಆತ್ಮಹತ್ಯೆ
'ನಿಮ್ಮಲ್ಲಿ ನಾನೂ ಒಬ್ಬ ರೈತ, ರೈತರು ಕಂಗಾಲಾಗುವ ಅವಶ್ಯಕತೆ ಇಲ್ಲ. ಒಂದು ವಾರ ಸಮಯ ಕೊಡಿ ಎಂದು ರೈತರಲ್ಲಿ ಮನವಿ ಮಾಡುತ್ತೇನೆ' ಎಂದು ಹೇಳಿದರು.