ಮುಖವಾಡ ತೊಟ್ಟ ಕಲಾವಿದರ ಬಣ್ಣ ಬಯಲು ಮಾಡುವೆ: ಡಿಕೆಶಿ ಖಡಕ್ ವಾರ್ನಿಂಗ್
Recommended Video
ಬೆಂಗಳೂರು, ಜುಲೈ 6: ಪ್ರತಿಭಟನೆಗೆ ಜಗ್ಗುವವನು ನಾನಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಏನೇನು ಅವ್ಯವಹಾರ ನಡೆಯುತ್ತಿದೆ ಎಂದು ನನಗೆ ತಿಳಿದಿದೆ, ಎಲ್ಲವನ್ನೂ ಬಯಲುಗೆಳೆಯುತ್ತೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನನ್ನ ವಿರುದ್ದ ಪ್ರತಿಭಟನೆ ನಡೆಸಿ, ನನ್ನ ಪ್ರತಿಕೃತಿ ದಹಿಸಿ, ನಾನದಕ್ಕೆ ಬೇಸರಿಸಿಕೊಳ್ಳುವುದಿಲ್ಲ. ಬದಲಿಗೆ, ಅದರಿಂದಾಗುವ ಕಸವನ್ನು ನಾನೇ ಸ್ವಚ್ಚಗೊಳಿಸುತ್ತೇನೆಂದು ಎಂದು ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
'ಸರ್ಕಾರಕ್ಕೆ ತೊಂದರೆ ಇಲ್ಲ, ಶಾಸಕರಿಗೆ ಕುಂದು ಕೊರತೆಗಳಿವೆ' : ಡಿಕೆಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನನ್ನನ್ನು ಬದಲಾಯಿಸಬೇಕು ಎನ್ನುವ ಹೋರಾಟದ ಬಗ್ಗೆ ಮಾತನಾಡುತ್ತಾ ಡಿಕೆಶಿ, ಪ್ರತೀ ವರ್ಷ ನೂರಾರು ಕೋಟಿ ಅವ್ಯವಹಾರ ನಡೆಯುತ್ತಿದೆ. ಕಲಾವಿದರೆಂಬ ವೇಷವನ್ನು ತೊಟ್ಟವರು, ಮಾಡುತ್ತಿರುವ ಅವ್ಯವಹಾರದ ಕೆಲಸವೆಲ್ಲಾ ನನಗೆಲ್ಲಾ ತಿಳಿದಿದೆ ಎಂದು ಡಿಕೆಶಿ, ನಿರ್ದಿಷ್ಟ ಕಲಾವಿದರನ್ನು ಪರೋಕ್ಷವಾಗಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
ನಿಜವಾದ ಕಲಾವಿದರ ಬದುಕು ಹಸನಾಗಬೇಕು ಎನ್ನುವುದು ನನ್ನ ಉದ್ದೇಶ. ಇಲಾಖೆಗಳ ಅಧಿಕಾರಿಗಳನ್ನು ಬೆದರಿಸಿ, ವಿದೇಶ ಪ್ರವಾಸ ಮಾಡುವ ಡೋಂಗಿ ಕಲಾವಿದರ ಬಣ್ಣವನ್ನು ಬಯಲುಗೊಳಿಸುವ ಕಾಲ ಬಂದಿದೆ ಎಂದು ಡಿಕೆಶಿ ಹೇಳಿದ್ದಾರೆ.
ನನ್ನ ವಿರುದ್ದ ಧಿಕ್ಕಾರ ಕೂಗುತ್ತಿರುವವರಿಗೆ, ನನ್ನ ಪ್ರತಿಕೃತಿ ದಹಿಸುತ್ತಿರುವವರಿಗೆ ನಾನು ಹೇಳುವುದಿಷ್ಟೇ.. ಧೈರ್ಯವಿದ್ದರೆ ನನ್ನ ಜೊತೆಗೆ ಚರ್ಚೆಗೆ ಬನ್ನಿ, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆಂದು ಸಚಿವ ಡಿ ಕೆ ಶಿವಕುಮಾರ್ ಸವಾಲೆಸೆದಿದ್ದಾರೆ.
ಎಲ್ಲರ ಆಟ ನನಗೆ ಗೊತ್ತಿದೆ: ಸಚಿವ ಡಿಕೆ ಶಿವಕುಮಾರ್
ಏನಿದು ವಿವಾದ: ವಿವಿಧ ಸಂಘ - ಸಂಸ್ಥೆಗಳಿಗೆ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸರಕಾರ ಹಿಂದಿನಿಂದಲೂ ಅನುದಾನ ನೀಡಿಕೊಂಡು ಬರುತ್ತಿತ್ತು. ಆದರೆ, ಇದರಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪವಿತ್ತು. ಈ ಹಿನ್ನಲೆಯಲ್ಲಿ ಅನುದಾನವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿತ್ತು.
ಇದಕ್ಕೆ ಪರ್ಯಾಯವಾಗಿ, ರಾಜ್ಯದ ಪ್ರತೀ ತಾಲೂಕುಗಳಲ್ಲಿ 'ಕರ್ನಾಟಕ ಸಂಸ್ಕೃತಿ' ಹೆಸರಿನಡಿಯಲಿ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿತ್ತು. ತನಿಖಾ ಸಂಸ್ಥೆಗಳ ವರದಿಯ ಪ್ರಕಾರ, ಕೆಲವೊಂದು ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸರಕಾರದ ಅನುದಾನ ಪಡೆದು ಅವ್ಯವಹಾರ ಎಸಗಿರುವುದು ಕಂಡು ಬಂದಿದೆ.