'ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಪೈಪೋಟಿಗೆ ಇಳಿಯುವುದಿಲ್ಲ'
ಬೆಂಗಳೂರು, ಜೂ. 21: ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪೈಪೋಟಿಗೆ ಇಳಿಯುವುದಿಲ್ಲ ಎಂದು ಹೇಳಿದ ಸ್ವಲ್ಪ ಹೊತ್ತಿನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯೂಟರ್ನ್ ಹೊಡೆದಿದ್ದಾರೆ.
Recommended Video
ಹಲವು ಬಾರಿ ಮುಂದೂಡಿಯಾದ ಬಳಿಕ ಇದೀಗ ಜುಲೈ 2 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಮಾಡುತ್ತಿದ್ದಾರೆ. ಬಹಳಷ್ಟು ಪ್ರಯತ್ನ ಪಟ್ಟು ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾಗುವುದಕ್ಕೆ ಸಿದ್ದರಾಮಯ್ಯ ಅವರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಆಪ್ತ ಗುಲಾಂ ನಬಿ ಆಜಾದ್ ಅವರೇ ಎರಡ್ಮೂರು ಬಾರಿ ದೆಹಲಿಯಿಂದ ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಮನವೊಲಿಸಿದ್ದರು.
ಪರಿಷತ್ ಚುನಾವಣೆ ಅಭ್ಯರ್ಥಿ: ಕಾಂಗ್ರೆಸ್ ಪಡಶಾಲೆಯಲ್ಲಿ ಮತ್ತೆ 'ಘರ್ಜಿಸಿದ್ದು' ಇವರೇ?
ಅದಾದ ಬಳಿಕ ಮೂಲ-ವಲಸೆ ಕಾಂಗ್ರೆಸ್ ನಾಯಕರ ಮಧ್ಯದ ಅಂತರ ಕಡಿಮೆ ಆಗಿತ್ತು. ಇದೀಗ ಮತ್ತೆ ಡಿ.ಕೆ. ಶಿವಕುಮಾರ್ ಅವರ ಟ್ವೀಟ್ ಹೊಸ ಚರ್ಚೆ ಹುಟ್ಟು ಹಾಕಿದೆ.
ಡಿಕೆಶಿ ಯೂಟರ್ನ್
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದ್ದವರು. ಪದಾಧಿಕಾರಿಗಳು, ಶಾಸಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆಯುವಾಗ ಡಿಕೆಶಿ ಯಾರನ್ನೂ ಸಂಪರ್ಕ ಮಾಡದೇ ಒಬ್ಬರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿಯೆ ಕೇಳಿ ಬಂದಿದ್ದವು.
ಹೀಗಾಗಿ ಡಿಕೆಶಿ ಅವರು ಟ್ವಿಟ್ಟರ್ ನಲ್ಲಿ ಈ ಕುರಿತು ಸ್ಪಷ್ಟವಾದ ಸ್ಪಷ್ಟನೆಯನ್ನು ಹಾಕಿದ್ದರು. ಆದರೆ ದಿಢೀರ್ ಯೂಟರ್ನ್ ಹೊಡೆದಿದ್ದಾರೆ.
ಪೈಪೋಟಿ ಇಲ್ಲ
ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಯಾವುದೇ ಪೈಪೋಟಿಗೆ ಇಳಿಯುವುದಿಲ್ಲ ಎಂದು ಟ್ವೀಟ್ಟರ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಇಂದು (ಜೂನ್ 21) ಬೆಳಗ್ಗೆ ಸ್ಪಷ್ಟಪಡಿಸಿದ್ದರು.
ಪರಿಷತ್ ಫೈಟ್; ಸಿದ್ದರಾಮಯ್ಯ ಭೇಟಿಯಾದ ಡಿಕೆಶಿ
ಕಾಂಗ್ರೆಸ್ ಪಕ್ಷವೇ ಒಂದು ಶಕ್ತಿ. ನಾನು ಅಧ್ಯಕ್ಷ ಹುದ್ದೆಯಲ್ಲಿದ್ದರೆ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿದ್ದಾರೆ. ಅವರ ಹಿರಿತನ ಹಾಗೂ ಅನುಭವವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ನಾನು ಅವರ ಜೊತೆ ಪೈಪೋಟಿಗೆ ಇಳಿಯುವುದಿಲ್ಲ ಎಂದು Karanataka Congress ಖಾತೆಯಿಂದ ಬೆಳಗ್ಗೆ ಟ್ವೀಟ್ ಮಾಡಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ಆ ಟ್ವೀಟ್ನ್ನು ಡಿಲೀಟ್ ಮಾಡಲಾಗಿದೆ.
ಪೈಪೋಟಿ ಇದೆಯಾ?
ಪೈಪೋಟಿಗೆ ಇಳಿಯುವುದಿಲ್ಲ ಎಂದು ಟ್ವೀಟ್ ಮಾಡಿ ಅದನ್ನು ಅಳಿಸಿ ಹಾಕಿರುವುದು ಕಾಂಗ್ರೆಸ್ ವಲಯಲ್ಲಿಯೇ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಪೈಪೋಟಿಗೆ ಇಳಿದಿದ್ದರಾ? ಪೈಪೋಟಿಗೆ ಇಳಿದಿರಲಿಲ್ಲ ಎಂದಾದರೇ ಟ್ವೀಟ್ ಮಾಡಿ ಸ್ಪಷ್ಟನೆಯನ್ನು ಕೊಟ್ಟಿದ್ಯಾಕೇ?
ಇನ್ನು ಪೈಪೋಟಿಗೆ ಇಳಿದಿಲ್ಲ ಎಂದು ಹೇಳಿ ಮತ್ತೆ ಟ್ವೀಟ್ನ್ನು ಅಳಿಸಿ ಹಾಕಿರುವುದು ಪೈಪೋಟಿ ಮುಂದುವರೆದಿದೆ ಎಂಬ ಅರ್ಥವಾ? ಹೀಗೆ ಹಲವು ಪ್ರಶ್ನೆಗಳು ಇದೀಗ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಟ್ಟಿಕೊಂಡಿವೆ. ಒಟ್ಟಾರೆ ತಮ್ಮ ನಡೆಯನ್ನು ಟ್ವೀಟ್ನಲ್ಲಿ ಮೊದಲು ವ್ಯಕ್ತಪಡಿಸಿ ಡಿಕೆಶಿ ಯೂಟರ್ನ್ ಹೊಡೆದಿದ್ದಾರೆ.
ಪರದಾಡಿದ್ದ ಡಿಕೆಶಿ
ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂತ್ರಿಯಾಗಲು ಡಿಕೆಶಿ ಪರದಾಡಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಕೊಂಡಿರಲಿಲ್ಲ. ಹೀಗಾಗಿ ಶಪಥ ಮಾಡಿದ್ದ ಡಿಕೆಶಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೇ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದರು.
ಮುಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರಾಜ್ಯದಲ್ಲಿ ಆಶ್ರಯ ಕೊಡುವ ಮೂಲಕ ಆಪರೇಶನ್ ಕಮಲದಿಂದ ಅವರನ್ನು ರಕ್ಷಣೆ ಮಾಡಿದ್ದರು. ಅದರಿಂದಾಗಿ ಕಾಂಗ್ರೆಸ್ ಥಿಂಕ್ ಟ್ಯಾಂಕ್ ಬಳಗದ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆ ಪ್ರವೇಶಿಸುವುದು ಸಾಧ್ಯವಾಗಿತ್ತು. ಅದು ಅಮಿತ್ ಶಾ ಅವರು ಡಿಕೆಶಿ ಮೇಲೆ ಕಂಗೆಣ್ಣು ಬೀರಲು ಕಾರಣವಾಗಿತ್ತು.
ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಜ್ಯ ಕಾಂಗ್ರೆಸ್ನ ಎಲ್ಲ ನಾಯಕರನ್ನೂ ಅವರವರ ಮನೆಗೆ ಹೋಗಿ ಭೇಟಿಯಾಗಿ ಬಂದಿದ್ದ ಡಿಕೆಶಿ ಅವರ ಪೈಪೋಟಿ ಟ್ವೀಟ್ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಹುಟ್ಟು ಹಾಕಿರುವುದಂತೂ ನಿಜ!