ಕುಮಾರಸ್ವಾಮಿ ವಿಚಾರದಲ್ಲಿ ಎಲ್ಲವನ್ನೂ ಮುಚ್ಚಿಕೊಂಡಿದ್ದೇನೆ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜ 5: ತಮ್ಮ ವಿರುದ್ದ ಟೀಕೆಗಳನ್ನು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
"ಏನು ಮಾಡುವುದು, ಆವಾಗಾವಾಗ ಕುಮಾರಸ್ವಾಮಿಯವರು ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.ಹಾಗಾಗಿ, ಅವರ ವಿಚಾರದಲ್ಲಿ ಕಣ್ಣು, ಬಾಯಿ, ಕಿವಿ ಸೇರಿದಂತೆ ಎಲ್ಲವನ್ನೂ ಮುಚ್ಚಿಕೊಂಡಿರುತ್ತೇನೆ"ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ, ಡಿಕೆಶಿ ವಿರುದ್ದ ವರಿಷ್ಠರಿಗೆ ಈ ಒಂದು ಕಾರಣಕ್ಕೆ ಸ್ವಪಕ್ಷೀಯರಿಂದಲೇ ದೂರು?
"ನಾವು ಜೆಡಿಎಸ್ಸಿನ ಯಾವುದೇ ಮುಖಂಡರಿಗೆ ಗಾಳ ಹಾಕುತ್ತಿಲ್ಲ ಎನ್ನುವುದನ್ನು ಸಾರಿಸಾರಿಯಾಗಿ ಹೇಳುತ್ತಿದ್ದೇನೆ. ಅವರಾಗಿಯೇ ಕಾಂಗ್ರೆಸ್ಸಿನ ಸಿದ್ದಾಂತವನ್ನು ಒಪ್ಪಿಕೊಂಡು ಬಂದರೆ, ನಾವು ಅಂತವರನ್ನು ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುತ್ತಿದ್ದೇವೆ"ಎಂದು ಡಿಕೆಶಿ ಹೇಳಿದರು.
"ಇದು ರಾಜಕೀಯ.. ಕೆಲವರು ನಮ್ಮ ಪಾರ್ಟಿಗೆ ಬರಬಹುದು, ಕೆಲವರು ಬಿಜೆಪಿಗೆ ಹೋಗಬಹುದು. ನಮ್ಮ ಪಕ್ಷದ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಿಲ್ಲ. ನಾನು ಅವರ ಬಳಿ ಮಾತನಾಡಿದ್ದೇನೆ"ಎಂದು ಡಿಕೆಶಿ ಸ್ಪಷ್ಟನೆಯನ್ನು ನೀಡಿದರು.
"ಜೆಡಿಎಸ್ ಮುಂದಿನ ದಿನಗಳಲ್ಲಿ ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎನ್ನುವುದು ಗೊತ್ತಾಗುತ್ತದೆ. ಆವಾಗಲೂ, ನಾನಂತೂ ಜೆಡಿಎಸ್ ಪಾರ್ಟಿ ಬಿಜೆಪಿಯ ಬಿಟೀಂ ಎಂದು ಹೇಳಲು ಹೋಗುವುದಿಲ್ಲ"ಎಂದು ಡಿಕೆಶಿ ಲೇವಡಿ ಮಾಡಿದರು.
"ರಾಜ್ಯಾದ್ಯಂತ ಪ್ರವಾಸವನ್ನು ಮಾಡುತ್ತಿದ್ದೇನೆ, ಜಿಲ್ಲಾವಾರು ನಮ್ಮ ಪಕ್ಷದ ಮುಖಂಡರ ಬಳಿ ಮಾತುಕತೆ ನಡೆಸುತ್ತಿದ್ದೇನೆ. ಸೋತವರ ಬಳಿಯೂ ಮಾತನಾಡುತ್ತಿದ್ದೇನೆ, ಗೆದ್ದವರನ್ನೂ ಚರ್ಚೆಗೆ ಕರೆದಿದ್ದೇನೆ"ಎಂದು ಡಿಕೆಶಿ ಹೇಳಿದರು.