ಪ್ರಾಣ ಹೋದರೂ ಬಿಟ್ಟು ಕೊಡಲ್ಲ: ಬಿಎಸ್ವೈಗೆ ಡಿ.ಕೆ.ಶಿವಕುಮಾರ್ ಚಾಲೆಂಜ್
Recommended Video
ಬೆಂಗಳೂರು, ಅ 29: "ಯಡಿಯೂರಪ್ಪನವರು ನಮ್ಮ ಮನೆಗೆ ಬಂದಿದ್ದರು. ಆಗಬೇಕಾಗಿರುವ ಕೆಲಸದ ಬಗ್ಗೆ ಬೇಡಿಕೆಯನ್ನು ಇಟ್ಟರು. ಎಷ್ಟೋ ಸಾವಿರ ಕೋಟಿಯ ಕಾಮಗಾರಿಗೆ ಅನುಮೋದನೆ ಕೊಟ್ಟೆ ಎನ್ನುವುದು ನನಗೆ ಗೊತ್ತಿದೆ" ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದರು.
"ಅವರೊಬ್ಬ ನಾಯಕರು, ವಿರೋಧ ಪಕ್ಷದ ನಾಯಕರಾಗಿ ನನ್ನ ಮನೆಗೆ ಬಂದಿದ್ದರು. ನಾನಾಗ ರಾಜಕೀಯ ಮಾಡೋಕೆ ಹೋಗಿಲ್ಲ. ಸಿಎಂ ಆಗಿ ಅಧಿಕಾರಕ್ಕೆ ಏರಿದಾಗ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಮಾಡುತ್ತಿರುವುದು ಏನು" ಎಂದು ಡಿಕೆಶಿ ಪ್ರಶ್ನಿಸಿದರು.
ಚುನಾವಣಾ ಅಖಾಡಕ್ಕೆ ಆಹ್ವಾನಿಸಿದ ಎಂಟಿಬಿಗೆ ಡಿಕೆ ಶಿವಕುಮಾರ್ ಕೊಟ್ಟ ಉತ್ತರವೇನು?
"ಕನಕಪುರ ನನ್ನ ರಾಜಕೀಯ ಕರ್ಮಭೂಮಿ. ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ನನ್ನ ಕನಸಿನ ಯೋಜನೆ. ನನ್ನ ಪ್ರಾಣ ಹೋದರೂ ಇದನ್ನು ಬೇರೆ ಊರಿಗೆ ಶಿಫ್ಟ್ ಆಗುವುದಕ್ಕೆ ಬಿಡುವುದಿಲ್ಲ" ಎಂದು, ಮುಖ್ಯಮಂತ್ರಿಗಳಿಗೆ, ಡಿಕೆಶಿ ಚಾಲೆಂಜ್ ಮಾಡಿದರು.
"ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುವುದಕ್ಕೆ ನಾನು ಬಿಡುವುದಿಲ್ಲ" ಎಂದು ಗುಡುಗಿರುವ ಡಿಕೆಶಿ, "ನಾನೇನೂ ಚಿಕ್ಕಬಳ್ಳಾಪುರ ಅಭಿವೃದ್ದಿಗೆ ತಕರಾರು ಎತ್ತುತ್ತಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ. ಅವರು ಸೂಕ್ತವಾಗಿ ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ನನಗಿದೆ" ಎಂದು ಡಿಕೆಶಿ ಆಶಾಭಾವನೆ ವ್ಯಕ್ತಪಡಿಸಿದರು.
ಕಬ್ಬಾಳಮ್ಮ ದೇವಿ ದರ್ಶನ ನಂತರ ಸಿಎಂ ಹುದ್ದೆ ಬಗ್ಗೆ ಡಿಕೆಶಿ ಹೇಳಿದ್ದೇನು?
"ಯಡಿಯೂರಪ್ಪನವರು ಕೂಡಾ ಬಜೆಟ್ ನಲ್ಲಿ ಯಾವುದೇ ಪ್ರಶ್ನೆ ಮಾಡದೇ ಕನಕಪುರ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಿದ್ದರು. ಈಗ ಏಕಾಏಕಿ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಳಿಸುವ ನಿರ್ಧಾರವನ್ನು ನಾನು ಒಪ್ಪುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.