ಸರ್, ದಯವಿಟ್ಟು ಧರಣಿ ಬೇಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ!
ಬೆಂಗಳೂರು, ಜೂ. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಮುಂದೆ ಧರಣಿ ಮಾಡುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಎಚ್ಚರಿಸಿ ಪತ್ರ ಬರೆದಿದ್ದರು. ಇದೇ ಜೂನ್ 29 ರಂದು ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದ ಎದುರು ಧರಣಿ ಸತ್ಯಾಗ್ರಹ ಕೂಡುವುದಾಗಿ ಎಚ್ಚರಿಕೆ ನೀಡಿದ್ದರು.
ಮಾಜಿ ಪ್ರಧಾನಿ ದೇವೇಗೌಡರು ಧರಣಿ ಮಾಡುತ್ತೇನೆ ಎಂದಿದ್ದು ಮಂಡ್ಯ ಜಿಲ್ಲೆಯ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಸ್.ಟಿ. ಮಂಜು ಎಂಬುವರ ವಿಚಾರವಾಗಿ. ಅದು ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ. ಪ್ರಧಾನಿಯಾಗಿದ್ದವರು ಇಷ್ಟೊಂದು ಸಣ್ಣ ವಿಚಾರಕ್ಕೆ ಧರಣಿ ಸತ್ಯಾಗ್ರಹ ಮಾಡಬೇಕಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿತ್ತು. ಆದರೆ ದೇವೇಗೌಡ ಅವರು ಹಾಗೇ ಸಿಎಂಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದರ ಹಿಂದೆ ಬಲವಾದ ಕಾರಣವಿದೆ.
ಸಚಿವ ಕೆ.ಸಿ. ನಾರಾಯಣಗೌಡ
ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರ ಹೆಸರನ್ನು ಪ್ರಸ್ತಾಪಿಸದೇ ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ದೇವೇಗೌಡ್ರ ಧರಣಿ
ಸಂಬಂಧಿಸಿದ ಇಲಾಖೆಗಳಿಂದ ಜೆಡಿಎಸ್ ಪಕ್ಷದ ಎಸ್.ಟಿ. ಮಂಜು ಎಂಬುವರು ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ನಾರಾಯಣಗೌಡರು ತೊಂದರೆ ಕೊಡುತ್ತಾರೆ ಎಂಬುದು ದೇವೇಗೌಡರ ಪತ್ರದ ಸಾರಾಂಶವಾಗಿತ್ತು. ಇದೀಗ ಸಚಿವ ನಾರಾಯಣಗೌಡರೇ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಲು ಮುಂದಾಗಿದ್ದಾರೆ.
ದೇವೇಗೌಡರ ಭೇಟಿಗೆ ಸಿದ್ಧ
ಸಿಎಂ ಮನೆ ಎದುರು ದೇವೇಗೌಡರಿಂದ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್. ಪೇಟೆಯಲ್ಲಿ ಮಾತನಾಡಿರುವ ಸಚಿವ ಕೆ.ಸಿ. ನಾರಾಯಣಗೌಡ ಅವರು, ಸರ್ ದಯವಿಟ್ಟು ಪ್ರತಿಭಟನೆಗೆ ಹೋಗಬೇಡಿ ಎಂದು ಮಾಜಿ ಪ್ರಧಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನೀವು ಅವಕಾಶ ಕೊಟ್ಟರೆ ಎಲ್ಲಾ ದಾಖಲೆ ಕೊಡುವೆ. ಅಧಿಕಾರಿಗಳನ್ನೂ ಜೊತೆಯಲ್ಲಿ ಕರೆತರುವೆ. ದಯವಿಟ್ಟು ಸತ್ಯಕ್ಕೆ ವಿರುದ್ಧವಾದ ವಿಷಯ ನಂಬಬೇಡಿ.
ನಿಮ್ಮನ್ನ ಯಾರೋ ದಿಕ್ಕು ತಪ್ಪಿಸುತ್ತಿದ್ದಾರೆ. ವಾರದೊಳಗೆ ಸಮಗ್ರ ಮಾಹಿತಿ ಕೊಡ್ತೀನಿ. ಇಂದೇ ಅಧಿಕಾರಿಗಳ ಭೇಟಿಯಾಗುತ್ತೇನೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ನಿಮ್ಮ ಮುಂದೆ ಇಡುತ್ತೇನೆ ಎಂದಿದ್ದಾರೆ.
ನಾನು ಜೆಡಿಎಸ್ನಲ್ಲಿದ್ದವನೇ
ನನ್ನ ವಿರುದ್ಧ ದೇವೇಗೌಡರು ನೇರವಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಆದರೂ ಪರವಾಗಿಲ್ಲ. ನಾನು ಅವರ ಪಾರ್ಟಿಯಲ್ಲಿದ್ದವನು. ತಂದೆ ಸಮಾನದಲ್ಲಿ ದೇವೇಗೌಡರನ್ನು ನೋಡುತ್ತಿದ್ದವನು. ಈಗಲೂ ನನಗೆ ಅದೇ ಭಾವನೆ ಇದೆ. ಗಣಿಗಾರಿಕೆಯನ್ನ ನಾನು ನಿಲ್ಲಿಸಿಲ್ಲ. ಈ ಹಿಂದೆ ಕಾಂಗ್ರೆಸ್ ನವರ ಜೊತೆ ಕ್ವಾರಿ ಮೈನಿಂಗ್ ಮಾಡುವ ಎಸ್.ಟಿ. ಮಂಜು ಹೊಡೆದಾಡಿಕೊಂಡಿದ್ದರು.
ಆದರಿಂದ ಹಿಂದಿನ ಕಾಂಗ್ರೆಸ್ ಹಿಂದಿನ ಸರ್ಕಾರ ಕ್ವಾರಿ ಮೈನಿಂಗ್ ನಿಷೇಧ ಮಾಡಿದೆ. ಗಣಿಗಾರಿಕೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಒಡೆದಿತ್ತು. ಎಚ್.ಡಿ. ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲೇ ಒಂಭತ್ತೂವರೆ ಕೋಟಿ ದಂಡ ವಸೂಲಿಗೆ ಸೂಚಿಸಿತ್ತು. ಕೋಟ್ಯಂತರ ರೂ. ಸಂಪಾದನೆ, ವ್ಯವಹಾರ ಮಾಡ್ತಿದ್ದಾರೆ.
ಆದರೂ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ಕಟ್ಟಿಲ್ಲ. ಅಷ್ಟೆಲ್ಲ ವ್ಯವಹಾರ ಮಾಡೋರಿಗೆ ತೆರಿಗೆ ಪಾವತಿಸೋಕೆ ಆಗಲ್ವಾ? ಎಂದು ದೇವೇಗೌಡರನ್ನು ಸಚಿವ ನಾರಾಯಣಗೌಡ ಪ್ರಶ್ನೆ ಮಾಡಿದ್ದಾರೆ.
ಮಾಜಿ ಪ್ರಧಾನಿಗಳಿಗೆ ಬೇಕಿತ್ತಾ?
ಇನ್ನು ಪಕ್ಷದ ಕಾರ್ಯರ್ತನೊಬ್ಬನ ಪರವಾಗಿ ಧರಣಿ ಕೂಡುತ್ತೇನೆ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರ ಪತ್ರದ ವಿಚಾರ ಬಹಳಷ್ಟು ಚರ್ಚೆ ಆಗುತ್ತಿದೆ. ಕಲ್ಲು ಕ್ವಾರಿ ಮೈನಿಂಗ್ ಮಾಡುವವರ ಪರವಾಗಿ ಧರಣಿ ಸತ್ಯಾಗ್ರಹಕ್ಕೆ ದೇವೇಗೌಡರು ಮುಂದಾಗಿದ್ದು ಸರಿಯಾ? ಗಣಿಗಾರಿಕೆಯಿಂದ ರೈತರ ಹೊಲಕ್ಕೆ ನೀರು ಹಾಯಿಸುವ ನಾಲೆ ಒಡೆದಿದ್ದು ದೇವೇಗೌಡರಿಗೆ ಗೊತ್ತಿಲ್ಲವಾ? ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟದೇ ಧರಣಿ ಸತ್ಯಾಗ್ರಹದ ಬೆದರಿಕೆ ಹಾಕುವುದು ಎಷ್ಟು ಸರಿ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ.