ಯಡಿಯೂರಪ್ಪ ವಿರುದ್ಧ ಶಿಕಾರಿಪುರದಲ್ಲಿ ಸ್ಪರ್ಧೆ: ಕೆಜೆಪಿ ಪದ್ಮನಾಭ
ಬಾಗಲಕೋಟೆ, ಜನವರಿ 27: ಶಿಕಾರಿಪುರ ಹಾಗೂ ಬಾಗಲಕೋಟೆಯ ತೇರದಾಳ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಹೇಳಿದರು. ಅಂದಹಾಗೆ ಶಿಕಾರಿಪುರದಿಂದ ಮಾಜಿ ಕೆಜೆಪಿ ಅಧ್ಯಕ್ಷ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ತೇರದಾಳದಿಂದ ಸಚಿವೆ ಉಮಾಶ್ರೀ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಸನ್ನ ಕುಮಾರ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.
ಗೋವಾದವರು ದಂಧೆಕೋರರು: ಪದ್ಮನಾಭ ಪ್ರಸನ್ನ ನಿಂದನೆ
ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಶೀಘ್ರವೇ ಹುಬ್ಬಳ್ಳಿಯಲ್ಲಿ ಮನೆ ಮಾಡುವೆ ಎಂದು ಹೇಳಿದ ಅವರು, ಯಡಿಯೂರಪ್ಪ ಕೆಜೆಪಿಯಲ್ಲಿಯೇ ಇದ್ದಿದ್ದರೆ ಈ ಬಾರಿ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಪಕ್ಷದ ಇವತ್ತಿನ ಪರಿಸ್ಥಿತಿ ಮತ್ತು ಯಡಿಯೂರಪ್ಪ ಹಾಳಾಗಲು ಶೋಭಾ ಕರಂದ್ಲಾಜೆಯವರೇ ಕಾರಣ. ಯಡಿಯೂರಪ್ಪ ಒಳ್ಳೆಯ ಮನುಷ್ಯ. ಆದರೆ ಕರಂದ್ಲಾಜೆಯೇ ಅವರನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕೇರಳದ ಭಗವತಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆ ಸಿಡಿ ನನ್ನ ಬಳಿ ಇದೆ. ಅದನ್ನು ನಾನು ಬಿಡುಗಡೆ ಮಾಡಲು ಹೊರಟಿದ್ದೇ ನನ್ನ ಮೇಲೆ ಹಲ್ಲೆಯಾಗಲು ಕಾರಣ. ಈಗಲೂ ನನಗೆ ಜೀವ ಬೆದರಿಕೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಭದ್ರತೆ ನೀಡಿದರೆ ನಾನು ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಪ್ರಸನ್ನಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು
ಪತ್ರಿಕಾಗೋಷ್ಠಿಯಲ್ಲಿ ಪದ್ಮನಾಭ ಪ್ರಸನ್ನಕುಮಾರ್ ಕಣ್ಣೀರಿಟ್ಟ ಘಟನೆಯೂ ನಡೆಯಿತು. ನನಗೆ ಕರಂದ್ಲಾಜೆಯಿಂದ ಜೀವ ಭಯವಿದೆ. ನನಗೇನಾದರೂ ಆದರೆ ನನ್ನ ಕುಟುಂಬದ ಗತಿ ಏನು? ಎಂದು ಅವರು ಕಣ್ಣೀರಿಟ್ಟರು. ಇದೇ ವೇಳೆ ಶೋಭಾ ಕರಂದ್ಲಾಜೆ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದರು.