ಇದೇ ಕ್ಷೇತ್ರದಲ್ಲಿ ನಾನು ಚುನಾವಣೆ ಸ್ಪರ್ಧೆ ಮಾಡುತ್ತೇನೆ: ಬಿ.ವೈ. ವಿಜಯೇಂದ್ರ ಸ್ಪಷ್ಟನೆ!
ಬೆಂಗಳೂರು, ಆ. 05: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಯಾವ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ? ಎಂಬ ಕುತೂಹಲ ಇಡೀ ನಾಡಿನ ಜನತೆಗೆ ಇರುವುದು ಸುಳ್ಳಲ್ಲ. ಈ ಹಿಂದೆ 2018ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಿಂದ ಶುರುವಾಗಿ ಈಗ ಎರಡು ಕ್ಷೇತ್ರಗಳಿಗೆ ನಡೆಯಬೇಕಿರುವ ಉಪ ಚುನಾವಣೆಯೂ ಸೇರಿದಂತೆ ವಿಜಯೇಂದ್ರ ಅವರ ಸ್ಪರ್ಧೆಯ ವಿಚಾರ ಚರ್ಚೆಗೆ ಬರುತ್ತದೆ. ಹೀಗಾಗಿ ಬಿ.ವೈ. ವಿಜಯೇಂದ್ರ ಅವರು ಯಾವ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ನಾಡಿನ ಜನರಿಗೆ ಇದ್ದೆ ಇದೆ. ಈ ಎಲ್ಲ ಕುತೂಹಲಕ್ಕೆ ವಿಜಯೇಂದ್ರ ಗುರುವಾರ ಬೆಂಗಳೂರಿನಲ್ಲಿ ತೆರೆ ಎಳೆದಿದ್ದಾರೆ.
ನಿನ್ನೆ ಮೊನ್ನೆಯ ವರೆಗೆ ಬಿಜೆಪಿಯಲ್ಲಿ ನಡೆಯುತ್ತಿದ್ದ ಚರ್ಚೆಗಳೇ ಬೇರೆಯಾಗಿದ್ದವು. ಬಿ.ವೈ. ವಿಜಯೇಂದ್ರ ಇನ್ನೇನು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಿಬಿಟ್ಟರು ಎಂಬಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿತ್ತು. ಜೊತೆಗೆ ವಿಜಯೇಂದ್ರ ಸಂಪುಟ ಸೇರುವುದು ಕಗ್ಗಂಟಾಗಿರುವುದರಿಂದಲೇ ಬಿಜೆಪಿ ಹೈಕಮಾಂಡ್ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅನುಮತಿ ಕೊಟ್ಟಿಲ್ಲ ಎಂಬ ಚರ್ಚೆಗಳೂ ಬಿಜೆಪಿ ವಲಯದಿಂದಲೇ ಕೇಳಿ ಬಂದಿದ್ದವು.
ಅದೇ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಕೂಡ ದೆಹಲಿಗೆ ತೆರಳಿದ್ದರು. ಅದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಪುತ್ರನಿಗೆ ಮಂತ್ರಿ ಪದವಿ ಕೊಡಿಸಲು ಮಾಜಿ ಸಿಎಂ ಯಡಿಯೂರಪ್ಪ ಅವರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಮತ್ತೊಂದು ಹಂತದ ಬೆಳವಣಿಗೆ ಬಿಜೆಪಿಯಲ್ಲಿ ಆಗಲಿದೆ ಎಂಬ ವಿಶ್ಲೇಷಣೆಗಳು ರಾಜ್ಯದಲ್ಲಿ ನಡೆದಿದ್ದವು.
ಈ ಎಲ್ಲ ಆರೋಪ, ಹೇಳಿಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಲಿಂಗಾಯತ ಸಮುದಾಯವನ್ನು ಹೈಕಮಾಂಡ್ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಬಗ್ಗೆಯೂ ವಿಜಯೇಂದ್ರ ಮಹತ್ವದ ಮಾತುಗಳನ್ನಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ.
ಹಿಂಬಾಗಿಲಿನ ಮೂಲಕ ರಾಜಕೀಯ ಪ್ರವೇಶ ಇಲ್ಲ
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಬಿ.ವೈ. ವಿಜಯೇಂದ್ರ ಅವರು ಹಿಂಬಾಗಿಲಿನ ಮೂಲಕ ರಾಜಕೀಯ ಪ್ರವೇಶ ನಿರಾಕರಿಸಿದ್ದಾರೆ ಎಂಬ ಮಾತಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂಬ ಸಲಹೆಯನ್ನೂ ಮಾಜಿ ಸಿಎಂ ಯಡಿಯೂರಪ್ಪ ಅವರು ಪುತ್ರನಿಗೆ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾತನಾಡಿರುವ ಬಿ.ವೈ. ವಿಜಯೇಂದ್ರ ಅವರು ಈ ಎಲ್ಲದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿ.ವೈ. ವಿಜಯೇಂದ್ರ ಯಾವ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆ ಮಾಡಲು ಬಯಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ನಾನು ಪಕ್ಷದ ಉಪಾಧ್ಯಕ್ಷನಾಗಿ ಇಡೀ ರಾಜ್ಯ ಸುತ್ತಬೇಕಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಅದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ. ಜೊತೆಗೆ ನನ್ನನ್ನು ಗುರಿತಿಸಿರುವ ಕ್ಷೇತ್ರ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ. ಹೀಗಾಗಿ ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ. ಆದರೆ ಟಿಕೆಟ್ ಕೊಡುವುದು, ಬ ಬಿಡುವುದು ಪಕ್ಷದ ವರಿಸ್ಠರಿಗೆ ಬಿಟ್ಟಿದ್ದು" ಎಂದು ವಿಯಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ? ಎಂಬ ಪ್ರಶ್ನೆಗೆ, " ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ" ಎಂದಿದ್ದಾರೆ. ಹೀಗಾಗಿ ಹಾಗನಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕಿಂತ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಹೆಚ್ಚಿನ ಗಮನ ಕೊಟ್ಟಿದ್ದಾರೆ. ಇನ್ನು ಲಿಂಗಾಯತ ಸಮುದಾಯವನ್ನು ಬಿಜೆಪಿ ಹೈಕಮಾಂಡ್ ಒಡೆದಿದೆಯಾ ಎಂಬುದಕ್ಕೂ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದು ಮುಂದಿದೆ.
ಲಿಂಗಾಯತ ಸಮುದಾಯದ ಒಗ್ಗಟ್ಟು ಒಡೆದ ಬಿಜೆಪಿ?
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿತ್ತು. ಹೀಗಾಗಿ ಲಿಂಗಾಯದ ಸಮುದಾಯವನ್ನು ವೀರಶೈವ ಮತ್ತು ಲಿಂಗಾಯತ ಎಂದು ಕಾಂಗ್ರೆಸ್ ಪಕ್ಷಯಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೇಳಗಿಳಿಸಲು ಪಂಚಮಸಾಲಿ ಸಮುದಾಯಕ್ಕೆ ಮನ್ನಣೆ ಕೊಡುವ ಮೂಲಕ ಯಡಿಯೂರಪ್ಪ ಅವರ ಬಲ ಕುಂದಿಸಲು ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳು ಬಿಜೆಪಿ ಹೈಕಮಾಂಡ್ ಮೇಲೆ ಕೇಳಿ ಬಂದಿತ್ತು. ಈ ವಿಚಾರಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಜೆಪಿ ಹೈಕಮಾಂಡ್ ಲಿಂಗಾಯತರನ್ನು ಒಡೆದಿದೆಯಾ ಎಂಬ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ವಿಜಯೇಂದ್ರ, "ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ಅದನ್ನೇ ಯಡಿಯೂರಪ್ಪ ಅವರು ಮಾಡಿದ್ದು. ಯಾಕೆ ಇಷ್ಟು ದೊಡ್ಡಮಟ್ಟದಲ್ಲಿ ಪಕ್ಷ ಬೆಳೆದಿದೆ? ಇವತ್ತು ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಕೂಡ ಪಕ್ಷ ಸೇರುತ್ತಿದ್ದಾರೆ. ಎಲ್ಲ ಜಾತಿ, ವರ್ಗಗಳನ್ನು ಕಟ್ಟಿಕೊಂಡು ಹೋಗಬೇಕು. ದಿ. ಮಾಜಿ ಕೇಂದ್ರ ಸಚಿವ ಅನಂತ ಕುಮಾರ್, ದಿ. ಮಾಜಿ ಸಚಿವ ವಿ.ಎಸ್. ಆಚಾರ್ಯ ಎಲ್ಲರೂ ಪಕ್ಷ ಕಟ್ಟಿದ್ದರು. ಪಕ್ಷದ ಆದೇಶವನ್ನು ಯಡಿಯೂರಪ್ಪ ಪಾಲಿಸಿದ್ದಾರೆ. ಅವರನ್ನು ಕೆಳಗಿಳಿಸಿದ್ದಾರೆ ಅನ್ನೋದು ಸರಿಯಲ್ಲ" ಎಂದು ಪರೋಕ್ಷ ಉತ್ತರ ಕೊಟ್ಟಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಲಿಂಗಾಯತ ಸಮುದಾಯವನ್ನು ಒಟ್ಟು ಮಾಡುತ್ತೀರಾ? ಎಂಬ ಪ್ರಶ್ನೆ ವಿಜಯೇಂದ್ರ ಪ್ರತಿಕ್ರಿಯೆ ಹೀಗಿತ್ತು.
ಲಿಂಗಾಯತ ಸಮುದಾಯ ಒಗ್ಗೂಡಿಸುವ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯೆ
ಲಿಂಗಾಯತ ಸಮುದಾಯವನ್ನು ಒಟ್ಟು ಮಾಡುತ್ತೀರಾ? ಎಂಬ ಪ್ರಶ್ನೆಗೆ ವಿಜಯೇಂದ್ರ ನೇರವಾಗಿ ಉತ್ತರಿಸಿದ್ದಾರೆ. "ಹೌದು ಮಾಡುತ್ತೇನೆ, ಯಾಕೆ ಮಾಡಬಾರದು? ಮಾಡುತ್ತೇನೆ. ಆದರೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು" ಎಂದು ವಿವರಿಸಿದ್ದಾರೆ.
ಆ ಮೂಲಕ ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಲಿಂಗಾಯತ ಸಮುದಾಯ ಒಗ್ಗೂಡಿಸುವ ಮೂಲಕ ಆ ಸಮುದಾಯದ ನಾಯಕನಾಗಿ ಬೆಳಯುವ ಪ್ರಯತ್ನ ಮಾಡುವುದನ್ನು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸಂಪುಟ ಸೇರಲು ವಿಜಯೇಂದ್ರ ಪ್ರಯತ್ನ ಪಟ್ಟಿದ್ದರಾ? ಅವರ ಮಾತಿನಲ್ಲಿಯೇ ಅವರು ಹೇಳಿರುವುದು ಮುಂದಿದೆ.
ಡಿಸಿಎಂ ಆಗಲು ವಿಜಯೇಂದ್ರ ಪ್ರಯತ್ನಿಸಿದ್ದರಾ?
ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ತಪ್ಪಿತಾ ಎಂಬುದನ್ನು ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ನನಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲವೆಂಬ ನೋವಿಲ್ಲ. ನನಗೆ ಮಂತ್ರಿಸ್ಥಾನ ಕೊಡಿ ಎಂದು ಯಡಿಯೂರಪ್ಪ ಒತ್ತಡ ಹೇರಿಲ್ಲ. ಯಡಿಯೂರಪ್ಪ ಕಂಡೀಷನ್ ಹಾಕಿದ್ದರು ಅನ್ನೋದು ಸುಳ್ಳು. ಪುತ್ರನಿಗೆ ಡಿಸಿಎಂ ಕೊಡಬೇಕು ಅಂತ ಅವರು ಬೇಡಿಕೆ ಇಟ್ಟಿಲ್ಲ. ಜೊತೆಗೆ ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನು ಈ ಹಂತಕ್ಕೆ ತಂದಿದ್ದಾರೆ. ವಿಜಯೇಂದ್ರ ತೆಗೆದುಕೊಳ್ಳುವಂತೆ ಅವರೂ ಒತ್ತಡ ಹೇರಿಲ್ಲ. ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನವಿಲ್ಲ. ಪಕ್ಷ ಸಂಘಟನೆಗೆ ನನಗೆ ಅವಕಾಶ ಕೊಟ್ಟಿದೆ. ನಾನು ಮುಂದುವರಿಸುತ್ತೇನೆ" ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
Recommended Video
ಅಣ್ಣಾಮಲೈ ಧರಣಿ ಕುರಿತು ವಿಜಯೇಂದ್ರ ಪ್ರತಿಕ್ರಿಯೆ
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಧರಣಿ ಸತ್ಯಾಗ್ರಹ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. "ಬಿ.ಎಸ್. ಯಡಿಯೂರಪ್ಪ ಆ ಬಗ್ಗೆ ಸ್ಪಷ್ಟವಾಗಿ ಹಿಂದೆಯೇ, ಈ ಯೋಜನೆ ರಾಜ್ಯದ ಜನರ ಹಕ್ಕು ಎಂದು ಹೇಳಿದ್ದಾರೆ. ಯಾರೇ ಉಪವಾಸ ಸತ್ಯಾಗ್ರಹ ಮಾಡಲಿ, ನಾವು ಯೋಜನೆಯನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಣ್ಣಾಮಲೈ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೊ ಗೊತ್ತಿಲ್ಲ. ಯೋಜನೆ ಜಾರಿಗೆ ಯಾವುದೇ ಅಡೆ ತಡೆ ಇಲ್ಲ. ಈ ಯೋಜನೆಯನ್ನು ನಮ್ಮ ಸರ್ಕಾರ ಮಾಡಿಯೇ ತೀರುತ್ತದೆ" ಎಂದು ಬಿ.ವೈ. ವಿಜಯೇಂದ್ರ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರ ಕಾಂಗ್ರೆಸ್ ನಾಯಕರ ಮೇಲೆ ಇಡಿ ರೇಡ್ ಯಾಕೆ ಆಗಿದೆ ಅನ್ನೋದು ಗೊತ್ತಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ರೇಡ್ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು ಎಂದಿದ್ದಾರೆ.
ಒಟ್ಟಾರೆ ಈಗಾಗಲೇ ಬಿಜೆಪಿ ಹೈಕಮಾಂಡ್ ಸೂಚನೆ ಕೊಟ್ಟಂತೆ ಬಿ.ವೈ. ವಿಜಯೇಂದ್ರ ಅವರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಜೊತೆಗೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ತಮ್ಮ ರಾಜಕೀಯ ಜೀವನ ರೂಪಿಸಿಕೊಳ್ಳಲು ತಯಾರಾಗಿದ್ದಾರೆ. ಬಹುತೇಕ ಬಿಜೆಪಿ ಹೈಕಮಾಂಡ್ ಕೂಡ ಅದೇ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.