ಕೊಟ್ಟ ಮಾತಿನಂತೆ ಗಡ್ಡ ಬೋಳಿಸಿಕೊಂಡ ಯತ್ನಾಳ್ ಈಗ ಬಸವಣ್ಣ ಅಂತೆ!
ಬೆಂಗಳೂರು, ಜು. 28: ''ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸುತ್ತೇನೆ. ಅಲ್ಲಿಯವರೆಗೂ ಗಡ್ಡ ತೆಗೆಯಲ್ಲ'' ಎಂದು ಶಪಥ ಮಾಡಿದ್ದ ರೆಬಲ್ ಲೀಡರ್ ಬಸವನಗೌಡ ಪಾಟೀಲ್ ಯತ್ನಾಳ್ ಇಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಗಡ್ಡ ತೆಗೆದಿದ್ದಾರೆ.
ಯಡಿಯೂರಪ್ಪ ಅವರ ಕುಟುಂಬ ಹಸ್ತಕ್ಷೇಪದಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬಹಿರಂಗವಾಗಿ ಸಮರ ಸಾರಿದ್ದ ಬಸವನಗೌಡ ಪಾಟೀಲ್ ಯತ್ನಾಳ್. ಯಡಿಯೂರಪ್ಪ ಅವರನ್ನು ಬದಲಿಸುತ್ತೇನೆ ಎಂದೇ ಸವಾಲು ಹಾಕಿದ್ದರು. ಆರಂಭದಲ್ಲಿ ದೊಡ್ಡ ಯತ್ನಾಳ್ ದೊಡ್ಡ ಸುದ್ದಿಯಾದರೂ, ನಂತರದ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿತು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವವರೆಗೂ ನಾನು ಗಡ್ಡ ತೆಗೆಯುವುದಿಲ್ಲ ಎಂದಿದ್ದರು. ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇದೀಗ ಗಡ್ಡ ತೆಗೆದಿದ್ದಾರೆ. ಇದನ್ನು ಸ್ವತಃ ಬಸವನಗೌಡ ಯತ್ನಾಳ್ ಸ್ಪಷ್ಟ ಪಡಿಸಿದ್ದಾರೆ. ''ಗಡ್ಡ ಬಿಟ್ಟಾಗ ಶಿವಾಜಿಯಾಗಿದ್ದೆ. ಇವಾಗ ಗಡ್ಡ ತೆಗೆದು ಬಸವಣ್ಣ ಆಗಿದ್ದೇನೆ'' ಎಂದಿದ್ದಾರೆ.
Recommended Video
ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ. ಸರ್ಕಾರಕ್ಕೆ ಯಾವ ಸಲಹೆ ನೀಡಲ್ಲ. ಹಿಂದುತ್ವ ಪರ ಹಾಗೂ ಭ್ರಷ್ಟಚಾರ ಮುಕ್ತ ಆಡಳಿತ ನಿರೀಕ್ಷೆ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ಅವರು ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪದಿಂದ ಹೊರ ಬಂದು ಎಲ್ಲರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕಿದೆ. ಯಡಿಯೂರಪ್ಪ ಕುಟುಂಬದಿಂದ ದೂರ ಉಳಿದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಯಾವ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅರ್ಹತೆ ಇದ್ದರೆ ಕೊಡಲಿ, ಇಲ್ಲವೇ ಬಸವನಗೌಡ ಪಾಟೀಲ್ ಯತ್ನಾಳ್ ಆಗಿಯೇ ಇರುತ್ತೇನೆ ಎಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.