ಬ್ರೇಕಿಂಗ್ ನ್ಯೂಸ್ ಕೊಟ್ಟ ಧನಂಜಯ್ ಕುಮಾರ್!
ಬೆಂಗಳೂರು, ಏಪ್ರಿಲ್ 12 : ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಹಲವು ದಿನಗಳ ಬಳಿಕ ಕಾಣಿಸಿಕೊಂಡಿದ್ದು, ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತರಾದ ಅವರು 'ಬಿಜೆಪಿಗೆ ಬರಲು ಸಿದ್ಧವಾಗಿದ್ದೇನೆ' ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆ ಪಕ್ಷದಲ್ಲಿ ಹಲವು ಚಟುವಟಿಕೆಗಳು ಆರಂಭವಾಗಿವೆ. ವಿವಿಧ ಕಾರಣಗಳಿಗಾಗಿ ಪಕ್ಷದಿಂದ ದೂರಾಗಿದ್ದ ನಾಯಕರು, ಪಕ್ಷದತ್ತ ವಾಪಸ್ ಆಗುತ್ತಿದ್ದಾರೆ. 'ಯಾವ ನಾಯಕರು ಬೇಕಾದರೂ ಪಕ್ಷಕ್ಕೆ ಮರಳಬಹುದು' ಎಂದು ಯಡಿಯೂರಪ್ಪ ಅವರು ಮಂಗಳವಾರ ಮುಕ್ತ ಆಹ್ವಾನ ನೀಡಿದ್ದಾರೆ. [ಧನಂಜಯ್ ಕುಮಾರ್ ಅತಂತ್ರ]
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ವಿ.ಧನಂಜಯ್ ಕುಮಾರ್ ಅವರು, 'ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಸಂತಸ ತಂದಿದೆ. ಬಿಜೆಪಿ ಆರಂಭವಾದಾಗ ಸದಸ್ಯರಾದವರಲ್ಲಿ ನಾನೂ ಒಬ್ಬ. ಪಕ್ಷದಿಂದ ರಾಜ್ಯಸಭಾ ಸದಸ್ಯ, ಮಂತ್ರಿಯಾಗಿದ್ದೇನೆ. ಹಳೇದನ್ನು ನಾನು ಮರೆತಿದ್ದು, ಬಿಜೆಪಿಗೆ ಮರಳಲು ಸಿದ್ಧವಾಗಿದ್ದೇನೆ' ಎಂದು ಹೇಳಿದರು. [ಜೆಡಿಎಸ್ ಸೇರಿದ ಅತೃಪ್ತ ಧನಂಜಯ್ ಕುಮಾರ್]
ಅಂದಹಾಗೆ ಧನಂಜಯ್ ಕುಮಾರ್ ಜೆಡಿಎಸ್ ಪಕ್ಷದಲ್ಲಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 14,895 ಮತಗಳನ್ನು ಪಡೆದಿದ್ದ ಅವರು ಬಿಜೆಪಿ ಅಭ್ಯರ್ಥಿಯಾದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಧನಂಜಯ್ ಕುಮಾರ್ ಅವರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ...... [ಯಡಿಯೂರಪ್ಪಗೆ ಹೈಕಮಾಂಡ್ ನಾಯಕರು ಕೊಟ್ಟ ಸಂದೇಶ ಏನು?]
'ಬಿಎಸ್ವೈ ಒಳ್ಳೆ ನಿರ್ಧಾರ ಕೈಗೊಳ್ಳುತ್ತಾರೆ'
'ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಬಳಿಕ ಅವರ ಬಳಿ ತೆರಳಿ ಅಭಿನಂದನೆ ಸಲ್ಲಿಸಿದ್ದೇನೆ. ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೇನೆ. ಅವರು ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ಎಂದು ಧನಂಜಯ್ ಕುಮಾರ್ ಹೇಳಿದರು.
'ಪಕ್ಷದ ಒಳಗಿನ ವಿಷಯ'
ಹಿಂದೆ ಧನಂಜಯ್ ಕುಮಾರ್ ಪಕ್ಷ ಸೇರ್ಪಡೆಗೆ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಇದು ಪಕ್ಷದ ಆಂತರಿಕ ವಿಚಾರ. ಯಡಿಯೂರಪ್ಪನವರೇ ಪಕ್ಷ ಬಿಟ್ಟು ಹೋಗಿ ಬೇರೆ ಪಕ್ಷ ಕಟ್ಟಿ ವಾಪಸ್ ಬಿಜೆಪಿಗೆ ಬಂದು ಅದ್ಯಕ್ಷರಾಗಿದ್ದಾರೆ. ಅಂದು ನಾನು ಪಕ್ಷದ ಹಿತದೃಷ್ಟಿಯಿಂದ ಕೆಲವು ಮಾತುಗಳನ್ನು ಹೇಳಿರಬಹುದು' ಎಂದರು.
'ವೈಯಕ್ತಿಕ ಆರೋಪ ಮಾಡಿಲ್ಲ'
'ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ನಾನು ವೈಯಕ್ತಿಕ ಆರೋಪಗಳನ್ನು ಮಾಡಿಲ್ಲ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಆದರೆ, ಅಡ್ವಾಣಿ ಅವರ ಹೆಸರನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೆ. ಅಂದಿನ ಪರಿಸ್ಥಿತಿಯಲ್ಲಿ ಅಂತಹ ಮಾತು ಬಂದಿತ್ತು. ಅದನ್ನು ನಾನು ಮರೆತಿದ್ದೇನೆ. ಅವರು ಮರೆತಿರಬಹುದು ಎಂದು ಭಾವಿಸುತ್ತೇನೆ' ಎಂದು ಧನಂಜಯ್ ಕುಮಾರ್ ಹೇಳಿದರು.
'ನಾಯಕತ್ವವನ್ನು ದೂರಿಲ್ಲ'
'ಯಡಿಯೂರಪ್ಪ ಅವರು ಉತ್ತಮ ಸಂಘಟಕರು. ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದು ಹೇಳಿರುವ ಧನಂಜಯ್ ಕುಮಾರ್ ಅವರು, 'ನಾನು ಬೇರೆ ಪಕ್ಷಕ್ಕೆ ಹೋದರು ಯಡಿಯೂರಪ್ಪ ಅವರ ನಾಯಕತ್ವವನ್ನು ನಾನೆಂದೂ ದೂರಿಲ್ಲ. ಅವರೊಬ್ಬ ಜನನಾಯಕ' ಎಂದು ಧನಂಜಯ್ ಕುಮಾರ್ ಹೇಳಿದರು.
ಕೆಜೆಪಿಗೆ ಬಂದಿದ್ದರು
ಅಂದಹಾಗೆ ಯಡಿಯೂರಪ್ಪ ಅವರ ಪರಮಾಪ್ತರಾದ ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರ ಜೊತೆ ಬಿಜೆಪಿ ಬಿಟ್ಟು ಕೆಜೆಪಿ ಸೇರಿದ್ದರು. ಆದರೆ, ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದರೂ ಧನಂಜಯ್ ಕುಮಾರ್ ಅವರಿಗೆ ಬಿಜೆಪಿ ಬಾಗಿಲು ತೆರೆದಿರಲಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸೇರಿದ್ದ ಅವರು, ಈಗ ಪುನಃ ಬಿಜೆಪಿಗೆ ವಾಪಸ್ ಬರುವ ಮಾತನಾಡುತ್ತಿದ್ದಾರೆ.