ನಮ್ಮಪ್ಪನಾಣೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಅಗುವುದಿಲ್ಲ : ಕುಮಾರಸ್ವಾಮಿ
ರಾಮನಗರ, ಜನವರಿ 14: 'ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಅವರಾಪ್ಪನಾಣೆ ಎಚ್ಡಿಕೆ ಮುಖ್ಯಮಂತ್ರಿ ಅಗುವುದಿಲ್ಲ' ಎಂದು ಹೇಳುತ್ತಾರೆ. ಅವರು ಯಾವತ್ತು ಅವರಪ್ಪನ ಮೇಲೆ ಅಣೆಮಾಡುವುದಿಲ್ಲ ನಾನು ನಮ್ಮಪ್ಪನ ಮೇಲೆ ಅಣೆಮಾಡಿ ಹೇಳುತ್ತೇನೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಅಗುವುದಿಲ್ಲ ಎಂದು ಹಾರೋಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜನತೆ ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಧಿಕ್ಕರಿಸಿ ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕನಕಪುರ ತಾಲೂಕಿನ ಹಾರೋಹಳ್ಳಿ ಮರಳವಾಡಿಗಳಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಗುದ್ದಲಿಪೂಜೆ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖವಿದ್ದಂತೆ, ಎರಡು ಪಕ್ಷಗಳು ಒಂದರ ಮೇಲೊಂದು ಕೆಸರೆರೆಚಾಟದಲ್ಲಿ ತೊಡಗಿದ್ದು ಜನರಿಗೆ ಅಸಹ್ಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ರೀತಿಯ ಸಾಲವನ್ನು 24 ಗಂಟೆಯೊಳಗೆ ಸಂಪೂರ್ಣ ಮನ್ನಾ ಮಾಡಲಾಗುವುದು ಮತ್ತು ರೈತರ ಕಲ್ಯಾಣಕ್ಕಾಗಿ ಇತರ ನೂತನ ಯೋಜನೆಗಳನ್ನು ಜಾರಿಗೆ ತಂದು ರೈತರ ಬಾಳು ಹಸನು ಮಾಡುವುದು ನಮ್ಮ ಗುರಿಯಾಗಿದೆ ಯುವಕರಿಗೆ 50 ಲಕ್ಷಕ್ಕೂ ವಿವಿಧ ಉದ್ಯೋಗವನ್ನು ಒದಗಿಸುವುದು ನಮ್ಮ ಮುಖ್ಯವಾದ ಕೆಲಸವಾಗಿದೆ ಎಂದು ಹೇಳಿದರು.
ಬೊಕ್ಕಸದ ಹಣವನ್ನು ಹಾಳು ಮಾಡುತ್ತಿದೆ
ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ಸಾಧನಾ ಸಮಾವೇಶವನ್ನು ಮಾಡುವುದಕ್ಕಾಗಿ ಸಾರ್ವಜನಿಕರ ಮತ್ತು ಬೊಕ್ಕಸದ ಹಣವನ್ನು ಹಾಳು ಮಾಡುತ್ತಿದ್ದು ಇವರ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರದ ದುಡ್ಡನ್ನು ಬಳಸಿಕೊಂಡು ಪೋಲು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣಾಪೂರ್ವ ಸರ್ವೆಗಳು ಕಾಂಗ್ರೆಸ್ ಪಕ್ಷ ಬಹುಮತ ಮತ್ತೆ ಬರುತ್ತದೆ, ಎಂದು ಹೇಳುತ್ತಿರುವುದು ಇದು ಕಾಂಗ್ರೆಸ್ನ ಆಂತರಿಕ ಸರ್ವೆಯಾಗಿದ್ದು ಚುನಾವಣೆ ಮುಗಿದ ಬಳಿಕ ಈ ಎಲ್ಲಾ ಸರ್ವೆಗಳ ಲೆಕ್ಕಾಚಾರ ಬುಡಮೇಲಾಗುತ್ತದೆ, ಸರ್ವೆಗಳ ಬಗ್ಗೆ ಗಮನಹರಿಸದಿರಿ ಎಂದು ಹೇಳಿದರು.
113 ಸೀಟು ನೀಡಿ ಗೆಲ್ಲಿಸಿ
ಬೇರೆ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಕೆಲಸವನ್ನು ದಯವಿಟ್ಟು ಮಾಡಬೇಡಿ, 113 ಸೀಟು ನೀಡಿ ಗೆಲ್ಲಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಪ್ಪು ಮಾಡಿರುವುದರಿಂದ ಇಂದು ಜನತೆ ನಮಗೆ ಅವಕಾಶ ಕೊಡಲು ತಯಾರಿದ್ದಾರೆ, ನಮ್ಮ ಸರ್ಕಾರವಿದ್ದಾಗ ಬಡವರ ಪರವಾಗಿ ಆಡಳಿತ ನಡೆಸಿದ್ದೇ ನಮಗೆ ಇಂದು ವರದಾನವಾಗಿದೆ ಎಂದು ಹೇಳಿದರು.
ಗೆಲ್ಲಿಸುವ ಜವಾಬ್ದಾರಿ ನಿಮ್ಮದು
ಕೇವಲ ನಾಮಪತ್ರ ಸಲ್ಲಿಸುತ್ತೇನೆ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ನಾನು ರಾಜ್ಯದಲ್ಲಿ ಸರ್ಕಾರ ರಚಿಸಲು ಇಡೀ ರಾಜ್ಯದ ಪ್ರವಾಸ ಮಾಡಬೇಕಿರುವುದರಿಂದ ನಿಮ್ಮ ಮನೆ ಮಗನೆಂದು ನನಗೆ ಆಶೀರ್ವದಿಸಬೇಕಿದೆ ಆ ವಿಶ್ವಾಸ ನನಗೆ ಇದ್ದು ಎಲ್ಲಿದ್ದರೂ ನಾನು ರಾಮನಗರದ ಮನೆಮಗ ಯಾವುದೇ ಪಕ್ಷದ ಅಪಪ್ರಚಾರಕ್ಕೆ ಕಿವಿಗೊಡಬೇಡಿ ರೈತ ಪರ ಸರ್ಕಾರ ರಚಿಸಲು ನೀವೆಲ್ಲರೂ ಶ್ರಮಿಸಿ ಎಂದು ಹೇಳಿದರು.