ಗೌರಿ ಹತ್ಯೆ ಪ್ರಕರಣ ಸಿಬಿಐಗೆ ನೀಡಿ, ರಾಜ್ಯ ಸರಕಾರದ ಮೇಲೆ ನಂಬಿಕೆ ಇಲ್ಲ : ಇಂದ್ರಜಿತ್
ಬೆಂಗಳೂರು, ಸೆಪ್ಟೆಂಬರ್ 6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿರುವ ಬೆನ್ನಲ್ಲೇ ನನಗೆ ಈ ಸರಕಾರದ ಮೇಲೆ ನಂಬಿಕೆ ಇಲ್ಲ ಎಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
'ರಿಪಬ್ಲಿಕ್ ಟಿವಿ' ಜತೆ ಮಾತನಾಡಿರುವ ಇಂದ್ರಜಿತ್ ಲಂಕೇಶ್, "ನಾನು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇನೆ, ಕಾರಣ ನನಗೆ ಕರ್ನಾಟಕ ರಾಜ್ಯದ ಗೃಹ ಇಲಾಖೆ ಬಗ್ಗೆ ನಂಬಿಕೆ ಇಲ್ಲ," ಎಂದು ಹೇಳಿದ್ದಾರೆ.
"ಡಿವೈಎಸ್ಪಿ ಗಣಪತಿ ಪ್ರಕರಣವೂ ನಡೆಯಿತು. ಎಂಎಂ ಕಲಬುರ್ಗಿಯವರನ್ನು ಎರಡು ವರ್ಷಗಳ ಹಿಂದೆ ಕೊಲ್ಲಲಾಯಿತು. ಇಲ್ಲಿಯವರೆಗೆ ಒಬ್ಬರನ್ನೂ ಬಂಧಿಸಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಳೆದ ಎರಡು ತಿಂಗಳಿಂದ ಗೃಹ ಮಂತ್ರಿ ಹುದ್ದೆಯೂ ಖಾಲಿ ಇತ್ತು. ಇದು ಪೊಲೀಸರ ಸಮಸ್ಯೆಯಲ್ಲ. ಪೊಲೀಸರು ಕೆಲಸ ನಿರ್ವಹಿಸಲು ಸಮರ್ಥರಿದ್ದಾರೆ. ಇದು ಗೃಹ ಇಲಾಖೆಯ ಸಮಸ್ಯೆ," ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, "ಈ ರೀತಿಯ ಟ್ರಾಕ್ ರೆಕಾರ್ಡ್ ಇರುವ ರಾಜ್ಯ ಸರಕಾರದಿಂದ ಕೊಲೆಗಡುಕರನ್ನು ಹಿಡಿಯಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
"ನನ್ನ ಸಹೋದರಿಯ ಸಾವಿಗೆ ನ್ಯಾಯ ಬೇಕು. ಕೊಲೆಗಡುಕರನ್ನು ಹಿಡಿಯಬೇಕು. ಅಷ್ಟನ್ನು ಮಾತ್ರ ನಾನು ಕೇಳುತ್ತಿದ್ದೇನೆ," ಎಂದು ಇಂದ್ರಜಿತ್ ಲಂಕೇಶ್ ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.
#WhoKilledGauri | I'm requesting for a CBI probe because I have no faith in Karnataka's Home Ministry: Indrajeet Lankesh, Gauri's brother pic.twitter.com/Ad7CA6oDyI
— Republic (@republic) September 6, 2017
ಪ್ಲಾನಲ್ ಚರ್ಚೆ ವೇಳೆ ಪದೇ ಪದೇ ಆರ್.ಎಸ್.ಎಸ್ ಮತ್ತು ಬಿಜೆಪಿ ಮೇಲೆ ಹತ್ಯೆಯ ಗೂಬೆ ಕೂರಿಸುತ್ತಾ ಬಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನೂ ಇಂದ್ರಜಿತ್ ಇದೇ ವೇಳೆ ತರಾಟೆಗೆ ತೆಗೆದುಕೊಂಡರು.
ಇಂದು ಸಂಜೆಯಷ್ಟೇ ಗುಪ್ತಚರ ವಿಭಾಗದ ಐಜಿಪಿ ಬಿಕೆ ಸಿಂಗ್ ನೇತೃತ್ವ ಎಸ್ಐಟಿ ತಂಡವನ್ನು ರಚಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.