ನಾನು ಯಾರನ್ನೋ ನಂಬಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಿಲ್ಲ: ಜನಾರ್ಧನ ರೆಡ್ಡಿ
ಮುಂದಿನ ಹತ್ತು ದಿನದಲ್ಲಿ ವಿವಿಧ ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರು ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಜನಾರ್ಧನ್ ರೆಡ್ಡಿ ಹೇಳಿದ್ದಾರೆ.
ರಾಯಚೂರು, ಜನವರಿ27: ನಾನು ಯಾರನ್ನೋ ನಂಬಿ ಪಕ್ಷ ಸ್ಥಾಪಿಸಿಲ್ಲ. ನಾನು ಯಾರಿಗೂ ಹೆದರಿಲ್ಲ ಎಂದು ಪರೋಕ್ಷವಾಗಿ ಸಚಿವ ಶ್ರೀರಾಮುಲುಗೆ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ರಾಯಚೂರಿನ ವಿವಿಧ ಧಾರ್ಮಿಕ ತಾಣಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಯಾರಿಗೂ ಹೆದರಿಲ್ಲ. ನನ್ನ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಎಲ್ಲಾರನ್ನ ಕರೆದು ಕುರ್ಚಿ ಹಾಕಿ ಏನು ಮಾಡುತ್ತಿದ್ದೇನೆ ಎಂದು ಈಗಲೇ ಹೇಳಲಾರೆ ಎಂದು ಹೇಳಿದರು.
Karnataka Assembly Election 2023: ರಾಯಚೂರು ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಶೀಘ್ರ ನಮ್ಮ ಪಕ್ಷದ ಬೃಹತ್ ಸಮಾವೇಶ ರಾಯಚೂರಲ್ಲಿ ಆಯೋಜನೆ ಮಾಡಲಾಗಿದ್ದು, ಮುಂದಿನ ಹತ್ತು ದಿನದಲ್ಲಿ ವಿವಿಧ ಪ್ರಮುಖ ರಾಜಕೀಯ ಪಕ್ಷಗಳ ಪ್ರಮುಖರು ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು. ಇನ್ನೂ 30 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆ. 13 ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನ ಫೆಬ್ರವರಿ 10 ರೊಳಗೆ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಇನ್ನೂ ಆಸ್ತಿ ಮುಟ್ಟುಗೋಲು ಮಾಡಿ ನನ್ನ ಹೆದರಿಸಲು ಸಾಧ್ಯವಿಲ್ಲ. ಇದು ಯಾವುದನ್ನೂ ನಾನು ಲೆಕ್ಕಕ್ಕೆ ಇಟ್ಟಿಲ್ಲ. ಒಂದು ರೂಪಾಯಿ ಜಪ್ತಿ ಮಾಡಿದರೆ 10 ವರ್ಷದಲ್ಲಿ 10 ರೂಪಾಯಿಯಾಗಿ ಮರಳಿ ಬರುತ್ತೆ. ಇನ್ನೂ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರಗಳನ್ನ ಮುಂದಿಟ್ಟುಕೊಂಡು ಹೋಗುತ್ತಿದ್ದೇನೆ. ಬೇರೆ ಪಕ್ಷಗಳ ವಿಚಾರಗಳನ್ನ ಸಾರ್ವಜನಿಕರಿಗೆ ಬಿಡುವೆ ಎಂದು ಹೇಳಿದರು.
ನನ್ನ ಪತ್ನಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಅವರು ಸ್ಪರ್ಧೆ ಮಾಡುವ ಕ್ಷೇತ್ರ ಭವಿಷ್ಯದಲ್ಲಿ ಘೋಷಣೆ ಮಾಡಲಾಗುತ್ತೆದೆ. ಇನ್ನೂ ನನ್ನ ಮಗಳು ಸಕ್ರಿಯ ರಾಜಕೀಯಕ್ಕೆ ಬರಲಿದ್ದಾಳೆ. ಆದರೆ ಈ ಬಾರಿಯ ಚುನಾವಣೆ ಯಲ್ಲಿ ಎಲ್ಲೂ ಸ್ಪರ್ಧೆ ಮಾಡಲ್ಲ ಎಂದ ಜನಾರ್ಧನರೆಡ್ಡಿ ಹೇಳಿದರು.
ಈಗಾಗಲೇ ಬಿಜೆಪಿ ಪಕ್ಷದಿಂದ ಹಿಂದೆ ದೂರು ಉಳಿದು ಹೊಸ ಪಕ್ಷ ಸ್ಥಾಪಿಸಿರುವ ಗಾಲಿ ಜನಾರ್ಧನ ರೆಡ್ಡಿಯವರು ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಬಾರಿ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ. ಈ ಹಿಂದೆ ರೆಡ್ಡಿ ಸಮುದಾಯ ಪ್ರಾಬಲ್ಯ ಹೊಂದಿರುವ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಅರುಣಾ ಲಕ್ಷ್ಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ದೇವರ ಹಿಪ್ಪರಗಿ ಭಾಗದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಮಾತುಕತೆ ಸಹ ನಡೆಸಿದ್ದರು. ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಳ್ಳಾರಿಯಿಂದಲೇ ಅರುಣಾ ಲಕ್ಷ್ಮಿ ಅವರು ಸ್ಪರ್ಧೆ ಮಾಡುವ ಸಾಧ್ಯತೆಗಳಿದೆ ಎನ್ನಲಾಗಿದೆ.