ನಾನು ತಪ್ಪು ಮಾಡಿದ್ದೇನೆ, ನನ್ನ ವಿರುದ್ಧ ಎಫ್ಐಆರ್ ಹಾಕಿ: ರೇಣುಕಾಚಾರ್ಯ
ಬೆಂಗಳೂರು, ಜ.11: 'ನಾನು ತಪ್ಪು ಮಾಡಿದ್ದೇನೆ. ನನ್ನ ಮೇಲೂ ಎಫ್ಐಆರ್ ಹಾಕಿ' ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಬಲಗುರಿ ಗ್ರಾಮದ ದುರ್ಗಾಂಬಿಕೆ ದೇವಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ರೇಣುಕಾಚಾರ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಿನ್ನೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದ ರೇಣುಕಾಚಾರ್ಯ ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ತಮ್ಮ ವಿರುದ್ಧ ದೂರು ದಾಖಲಿಸುವಂತೆ ಸರ್ಕಾಕ್ಕೆ ಮನವಿ ಮಾಡಿದ್ದಾರೆ.
'ಕೋವಿಡ್ ನಿಯಂತ್ರಣಕ್ಕಾಗಿ ಇಡೀ ಸರ್ಕಾರವೇ ಶ್ರಮ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ನಾನು ಉತ್ಸವದಲ್ಲಿ ಭಾಗಿ ಆಗಿದ್ದೆ. ಇದರಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರ ಆಗಬಾರದು. ಇದರಿಂದ ನನಗೂ ಸಹ ವೈಯಕ್ತಿಕವಾಗಿ ಮುಜುಗರ ಆಗಿದೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಧಾರಾಳವಾಗಿ ನನ್ನ ಮೇಲೆ ಕೇಸು ಹಾಕಬಹುದು' ಎಂದು ಹೇಳಿದರು.
ಕಾಂಗ್ರೆಸ್ನವರಂತೆ ಭಂಡತನ ಪ್ರದರ್ಶಿಸಿಲ್ಲ:
'ನಾನೇನೂ ಕಾಂಗ್ರೆಸ್ನವರಂತೆ ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ನಾನು ಮಾಡಿದ್ದು ತಪ್ಪು ಎಂದು ಅರಿವಿಗೆ ಬಂದ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದೇನೆ. ಅಲ್ಲದೆ, ಹೋರಿ ಬೆದರಿಸುವ ಜಾತ್ರೆಯಲ್ಲಿ ಇದ್ದಂತಹ ಒಬ್ಬರಿಗೂ ಕೋವಿಡ್ ಬಂದಿಲ್ಲ. ಇದನ್ನು ನಾನು ಲಿಖಿತವಾಗಿ ಬರೆದುಕೊಡುತ್ತೇನೆ' ಎಂದು ಸವಾಲು ಹಾಕಿದರು.
ವಿಷಯ ಗೊತ್ತಾದ ತಕ್ಷಣ ನಾನು ನಾಡಿನ ಸಮಸ್ತ ಜನತೆಗೆ ಬಹಿರಂಗ ಕ್ಷಮೆ ಯಾಚಿಸಿದ್ದೇನೆ. ಈ ಕಾರ್ಯಕ್ರಮ ದಿಢೀರ್ ಆಗಿದ್ದಲ್ಲ. 20 ದಿನಗಳ ಹಿಂದೆ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಮುಂದೂಡಿ ಎಂದು ನಾನೂ ಸಂಘಟಕರಿಗೆ ಹೇಳಿದ್ದೆ. ಆದರೆ ಯುವಕರು ಕೇಳಲಿಲ್ಲ. ಉತ್ಸವ ಮಾಡಿದರು. ನನ್ನ ತಪ್ಪಿನ ಅರಿವಾಗಿದೆ. ನಾಡಿನ ಜನತೆ, ಪಕ್ಷದ ಮುಖಂಡರು ಎಲ್ಲರೂ ಇದನ್ನು ಖಂಡಿಸಿದ್ದಾರೆ. ಅದನ್ನು ನಾನು ಒಪ್ಪಿಕೊಂಡಿದ್ದೇನೆ ಎಂದರು.
ಆದರೆ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಬಹಳ ಆತಂಕಕಾರಿಯಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಹೆಚ್ಚಿನ ಮಟ್ಟದಲ್ಲಿ ಕೋವಿಡ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ಜನ ನನ್ನ ಸುತ್ತ ಕೋಟೆ ಕಟ್ಟಿದ್ದಾರೆ
'ಡಿ.ಕೆ. ಶಿವಕುಮಾರ್ ಅವರು ನನ್ನ ವಿರುದ್ಧ ಆರೋಪ ಮಾಡುತ್ತಾ ವಿಡಿಯೋ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಡಿಕೆಶಿ ಅಣ್ಣ ಹೊನ್ನಾಳಿ ಎಂಬುದು ಕೋಟೆ. ಆ ಕೋಟೆ ಬೇಧಿಸೋದಕ್ಕೆ ಸಾಧ್ಯವೇ ಇಲ್ಲ. ಅಂತ ಕೋಟೆಯಲ್ಲಿ ಬಂದು ವೀಡಿಯೋ ಮಾಡಿಸಿದ್ದೇನೆ. ಕೇಸ್ ಹಾಕಿ ಅಂತೀರಲ್ಲ. ಹೊನ್ನಾಳಿ ನ್ಯಾಮತಿ ಜನ ನನ್ನ ಸುತ್ತ ಕೋಟೆ ಕಟ್ಡಿದ್ದಾರೆ' ಎಂದರು.
Recommended Video
ಕ್ಷೇತ್ರದ ಜನ ಹೇಳಿದರೆ ನಾನು ಬಾವಿಗೆ ಬೀಳೋದಕ್ಕೂ ತಯಾರಿದ್ದೇನೆ. ನನ್ನ ಕ್ಷೇತ್ರದ ಜನ ಏನು ಹೇಳುತ್ತಾರೋ ನಾನು ಅದನ್ನು ಮಾಡುವುದಕ್ಕೆ ತಯಾರಾಗಿದ್ದೇನೆ. ರಾಜಕಾರಣ ಮಾಡುವ ಸಂದರ್ಭದಲ್ಲಿ ನಾನೂ ರಾಜಕಾರಣ ಮಾಡುತ್ತೇನೆ' ಎಂದು ತಿರುಗೇಟು ನೀಡಿದರು.