ಸಿದ್ದರಾಮಯ್ಯ ಅವ್ರನ್ನು ನಮ್ಮ ತಾಯಿ ಸತ್ಯವಾಗ್ಲೂ ಕರೆದಿದ್ದೇನೆ: ಈಶ್ವರಪ್ಪ
ಬೆಂಗಳೂರು, ಡಿ. 02: ಕುರುಬ ಎಸ್ಟಿ ಹೋರಾಟವೀಗ ಅದೇ ಸಮುದಾಯದ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕುರುಬ ಎಸ್ಟಿ ಹೋರಾಟಕ್ಕೆ ನನ್ನನ್ನು ಈಶ್ವರಪ್ಪ ಕರೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೆರಳಿಸಿದೆ. ಈ ಕುರಿತು ಚಿಕ್ಕಮಗಳೂರಿನ ಬಿರೂರಿನಲ್ಲಿ ಮಾತನಾಡಿರುವ ಈಶ್ವರಪ್ಪ ಅವರು ಸಿದ್ದರಾಮಯ್ಯರ ಮೇಲೆ ಹರಿಹಾಯ್ದಿದ್ದಾರೆ.
ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ಪಡೆಯುವ ಹೋರಾಟಕ್ಕೆ ಸಿದ್ದರಾಮಯ್ಯ ಅವರನ್ನು ನಾನು ಕರೆದಿದ್ದೇನೆ. ನಮ್ಮ ತಾಯಿ ಸತ್ಯವಾಗ್ಲೂ ಕರೆದಿದ್ದೇನೆ, ನನ್ನ ಮಕ್ಕಳಾಣೆಗೂ ಅವರನ್ನು ಕರೆದಿದ್ದೇನೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ನಾನು ಇನ್ನೂ ಯಾವ ಭಾಷೆಯಲ್ಲಿ ಹೇಳಲಿ? ಸಮುದಾಯದ ಸ್ವಾಮೀಜಿಗಳು ಅವರ ಮನೆಗೆ ಹೋಗಿ ಕುಳಿತು ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಬಂದಿದ್ದಾರೆ. ಸಿದ್ದರಾಮಯ್ಯ ಈ ವಿಚಾರದಲ್ಲಿ ಯಾಕೆ ರಾಜಕಾರಣ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.
ಕುರುಬ ಸಮುದಾಯದ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡ?
ಬೆಂಗಳೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾವು ಕರೆದರೂ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಅವರು ನನ್ನನ್ನು ಕರೆದಿಲ್ಲ. ಬರುತ್ತೇನೆ ಅಥವಾ ಬರುವುದಿಲ್ಲ ಎಂದು ನಾನೂ ಅವರಿಗೆ ಹೇಳಿಲ್ಲ. ಈಶ್ವರಪ್ಪ ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದರು.