ಬಂಧನ ಭೀತಿ ಇಲ್ಲ : ವರಸೆ ಬದಲಿಸಿದ ಡಿ.ಕೆ.ಶಿವಕುಮಾರ್
ನವದೆಹಲಿ, ಸೆಪ್ಟೆಂಬರ್ 10: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳಿಂದ ಬಂಧನದ ಭೀತಿ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಇಂದು ಏಕಾ-ಏಕಿ ತಮ್ಮ ವರಸೆ ಬದಲಿಸಿದ್ದಾರೆ.
ನಿನ್ನೆಯಷ್ಟೆ, 'ಏನೇ ಆದರೂ ಎದುರಿಸುತ್ತೇನೆ', 'ಬಿಜೆಪಿಯವರು ನನ್ನ ಮೇಲೆ ಕುತಂತ್ರ ಮಾಡಿದ್ದಾರೆ', ಎಂಬ ಮಾತುಗಳನ್ನಾಡಿ ಬಂಧನದ ಭೀತಿ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದ ಡಿ.ಕೆ.ಶಿವಕುಮಾರ್, ಇಂದು ವರಸೆ ಬದಲಾಯಿಸಿ 'ನನಗೆ ಬಂಧನದ ಭೀತಿ ಇಲ್ಲ' ಎಂದಿದ್ದಾರೆ.
ಬಂಧನ ಭೀತಿ: ಡಿ.ಕೆ.ಶಿವಕುಮಾರ್ ಮನೆಯಲ್ಲಿ ಬಿರುಸಿನ ಚಟುವಟಿಕೆ
ಕುಮಾರಸ್ವಾಮಿ, ದೇವೇಗೌಡ ನೇತೃತ್ವದ ನಿಯೋಗದೊಂದಿಗೆ ನವದೆಹಲಿಗೆ ತೆರಳಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಈ ವಿಷಯ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನನಗೆ ಬಂಧನದ ಭೀತಿ ಇಲ್ಲಿ, ಆ ರೀತಿಯ ಯಾವುದೇ ಸೂಚನೆ ನನ್ನ ವರೆಗೆ ಬಂದಿಲ್ಲ ಎಂದಿದ್ದಾರೆ.
'ದೆಹಲಿಯಲ್ಲಿ ಮೂರು ನಿವಾಸ ಇವೆ'
ನನಗೆ ದೆಹಲಿಯಲ್ಲಿ ಮೂರು ನಿವಾಸಗಳಿವೆ ಇಲ್ಲಿಯೇ ಇರುತ್ತೇನೆ, ನಾನು ಎಲ್ಲೂ ತಪ್ಪಿಸಿಕೊಂಡು ಹೋಗುತ್ತಿಲ್ಲ, ಇಡಿ, ಐಟಿ ಅಧಿಕಾರಿಗಳು ಯಾವಾಗ ಬೇಕಾದರೂ ನನ್ನನ್ನು ಭೇಟಿ ಆಗಬಹುದು, ಕಾನೂನಾತ್ಮಕವಾಗಿ ಏನೇ ಬಂದರು ನಾನು ಎದುರಿಸುತ್ತೇನೆ ಎಂದು ಅವರು ತೊಡೆತಟ್ಟಿದ್ದಾರೆ.
'ಹಳೆ ರೋಗಿ ನಾನು, ವೈದ್ಯರಿಗಿಂತಲೂ ನುರಿತ'
ನಿನ್ನೆಯೇ ದೆಹಲಿಗೆ ಆಗಮಿಸಿದ್ದ ಅವರು ಇಲ್ಲಿ ಹಿರಿಯ ವಕೀಲರನ್ನು ಭೇಟಿ ಮಾಡಿರುವ ಸುದ್ದಿ ಇತ್ತು. ಆದರೆ ಇದನ್ನು ಅಲ್ಲಗಳೆದ ಡಿ.ಕೆ.ಶಿವಕುಮಾರ್ ಅವರು, ನಾನು ಇಲ್ಲಿ ಯಾವ ವಕೀಲರನ್ನೂ ಭೇಟಿ ಆಗಿಲ್ಲ, ಅದರ ಅವಶ್ಯಕತೆ ನನಗಿಲ್ಲ. 'ಹಳೆ ರೋಗಿ ನಾನು ವೈದ್ಯರಿಗಿಂತಲೂ ನುರಿತ' ಎಂದರು.
ಡಿಕೆ ಸುರೇಶ್ ಬಿಡುಗಡೆ ಮಾಡಿದ್ದ ಬಿಎಸ್ ವೈ ಹೆಸರಿನ ಪತ್ರ ನಕಲಿ:ಬಿಜೆಪಿ
'ಮೂವತ್ತೇ ವಯಸ್ಸಿಗೆ ಮಾಜಿ ಸಚಿವ ಎನಿಸಿಕೊಂಡಿದ್ದೆ'
ನಾನು ಯಾವ 'ಮನಿ ಲಾಂಡ್ರಿಂಗ್' ಕಾರ್ಯಗಳಲ್ಲಿ ಭಾಗಿ ಆಗಿಲ್ಲ. ಯಾರು ಏನು ಬೇಕಾದರೂ ಕೇಸು ಹಾಕಿಕೊಳ್ಳಲಿ, ಎದುರಿಸಲು ಸಿದ್ಧ ಎಂಬ ಮಾತನ್ನಾಡಿದರು. ಮೂವತ್ತನೇಯ ವಯಸ್ಸಿಗೇ ಮಾಜಿ ಸಚಿವ ಎನಿಸಿಕೊಂಡವನು. ಹಲವು ವರ್ಷ ಮಾಜಿಯಾಗಿಯೇ ಇದ್ದೆ. ಎಲ್ಲ ರೀತಿಯ ರಾಜಕೀಯ ಅನುಭವಗಳನ್ನೂ ಪಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಇಡಿ ಇಲಾಖೆ ಬಂಧಿಸುವ ಸಾಧ್ಯತೆ
ಅಕ್ರಮ ಆಸ್ತಿ ಪ್ರಕರಣದ ಸಂಬಂಧ ಡಿ.ಕೆ.ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯವು ಎಫ್ಐಆರ್ ದಾಖಲಿಸಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುತ್ತದೆ ಎಂಬ ಸುದ್ದಿ ಹರಿಡಿತ್ತು. ಡಿ.ಕೆ.ಶಿವಕುಮಾರ್ ಸಹ ಇದಕ್ಕೆ ಪೂರಕವಾದ ಹೇಳಿಕೆಗಳನ್ನು ನೀಡಿದ್ದರು.