ಮಾಧ್ಯಮದವರಿಗೆ ಬೈದಿಲ್ಲ, ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದೆ: ಸಿಎಂ
ಬೆಂಗಳೂರು, ಜುಲೈ 31: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಮಾಡುತ್ತಿರುವ ಹೋರಾಟಕ್ಕೆ ಮಾಧ್ಯಮಗಳು ಇಂಬು ನೀಡಿವೆ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದ ಕುಮಾರಸ್ವಾಮಿ ಇಂದು ತಮ್ಮ ವರಸೆ ಬದಲಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳ ಬಗ್ಗೆ ಮತ್ತೆ ಮಾತನಾಡಿದರು ಆದರೆ ಇಂದು ಮಾಧ್ಯಮಗಳ ಬಗ್ಗೆ ಮೃದುವಾಗಿ ಮಾತನಾಡಿದರು.
ಪ್ರತ್ಯೇಕ ರಾಜ್ಯದ ಕೂಗು, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ!
'ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆಗೆ ಮಾಧ್ಯಮಗಳೇ ಕಾರಣ. ನಿಮಗೆ ಚರ್ಚೆ ಮಾಡೋಕೆ ಬೇರೆ ವಿಷಯವಿಲ್ಲ. ಒಂದು ವಾರದಿಂದ ಅದಕ್ಕಾಗಿ ಇಂತಹ ಸುದ್ದಿ ಮಾಡುತ್ತಿದ್ದೀರಿ' ಎಂದು ಸಿಎಂ ಅವರು ಮೊನ್ನೆಯಷ್ಟೆ ಕೋಪ ಹೊರಹಾಕಿದ್ದರು.
ಆದರೆ ಇಂದು ಮಾತನಾಡಿದ ಅವರು, ನಾನು ಮಾಧ್ಯಮದವರನ್ನು ಬೈದಿಲ್ಲ, ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದೆ ಅಷ್ಟೆ ಎಂದರು. ನಾನು ಏನಾದರೂ ಹೇಳಿದರೆ ಮಾಧ್ಯಮದವರು ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಸೋದರ ಪ್ರೀತಿಯನ್ನೂ ತೋರಿದ್ದಾರೆ.
ಉತ್ತರ ಕರ್ನಾಟಕ ಮುಖಂಡರ ಜೊತೆ ಸಿಎಂ ಸಭೆ, ಹಳೆ ಹೇಳಿಕೆಗಳಿಗೆ ತೇಪೆ
ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದ ರೈತರನ್ನೂ ತಾವು ಬೈದಿಲ್ಲ ಎಂದು ವರಸೆ ಬದಲಿಸಿದ ಸಿಎಂ, ಚುನಾವಣೆ ಸಮಯದಲ್ಲಿ ನನ್ನ ನೆನಪು ಬರಲಿಲ್ಲವಾ ಎಂದು ಕೇಳಿದ್ದೆನೆ ಹೊರತು ಬೈದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.