ಜೈಲಿನಲ್ಲೇ ವಿದ್ಯಾರ್ಥಿಯಾಗಿ, ಪದವಿ ಪಡೆದು ಹೊರಬಂದ ಸೈನಿಕ ಮಾಮಾಜಿ
ಬೆಂಗಳೂರು, ಸೆಪ್ಟೆಂಬರ್ 10 : ಇವರು ಸೇನೆಯಲ್ಲಿ ಸೇವೆ ಮಾಡುತ್ತಿದ್ದರು, ತಾಲೂಕು ಪಂಚಾಯಿತಿ ಸದಸ್ಯರಾಗಿದ್ದರು. ಕೋಪದ ಕೈಗೆ ಬುದ್ಧಿ ಕೊಟ್ಟು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜೈಲಿನಲ್ಲಿದ್ದುಕೊಂಡು ಪದವೀಧರರಾಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 79 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಭಾನುವಾರ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಕುಶಾಲನಗರದ ಗಣೇಶ್ ಮಾಮಾಜಿ ಸಹ ಒಬ್ಬರು.
ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಗಣೇಶ್ ಯೋಗ ಮತ್ತು ವ್ಯಾಯಾಮ ಕಲಿತಿದ್ದಾರೆ. ಜೈಲಿನಲ್ಲಿ ಕೈದಿಗಳಿಗೂ ವ್ಯಾಯಾಮ ಹೇಳಿಕೊಡುತ್ತಿದ್ದರು. 62 ವರ್ಷದ ಗಣೇಶ್ ಈಗ ಬಿಡುಗಡೆಯಾಗಿದ್ದು, ಹೊಸ ಜೀವನದ ಕನಸು ಕಾಣುತ್ತಿದ್ದಾರೆ.
ಗಣೇಶ್ ಮಾಮಾಜಿ ಎಸ್ಎಸ್ಎಲ್ಸಿ ಮುಗಿಯುತ್ತಿದ್ದಂತೆ ಸೇನೆ ಸೇರಿದ್ದರು. ಹವಾಲ್ದಾರ್ ಆಗಿದ್ದರು, 1993ರಲ್ಲಿ ಸೇವಾವಧಿ ಮುಗಿಸಿ ಊರಿಗೆ ವಾಪಸ್ ಆಗಿದ್ದರು. ನಂತರ ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಕೋಪದ ಕೈಗೆ ಬುದ್ಧಿಕೊಟ್ಟು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. 14 ವರ್ಷಗಳ ಕಾಲ ಕುಟುಂಬದಿಂದ ದೂರವಾಗಿದ್ದರು. 'ಈಗ ಬದಲಾಗಿದ್ದೇನೆ. ಯಾರೂ ಕೋಪದ ಕೈಗೆ ಬುದ್ಧಿಕೊಡಬೇಡಿ' ಎಂದು ಗಣೇಶ್ ಮಾಮಾಜಿ ಮನವಿ ಮಾಡುತ್ತಾರೆ.
ಕದಿಯದ ಪರ್ಸ್ ಆರೋಪಕ್ಕೆ ಸುಖಾಸುಮ್ಮನೆ 17ವರ್ಷ ಸೆರೆವಾಸ
'ದೇಶ ಸೇವೆ ಮಾಡುತ್ತಿದ್ದ ನಾನು ಜೈಲು ಸೇರಿದಾಗ ತುಂಬಾ ನೋವಾಯಿತು. ಅದಕ್ಕಾಗಿ ಓದಿನ ಕಡೆ ಗಮನ ಹರಿಸಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದೆ' ಎನ್ನುತಾರೆ ಗಣೇಶ್.
'ಯಾರೂ ಸಹ ಕೋಪದಲ್ಲಿ ಅಪರಾಧ ಮಾಡಬಾರದು. ತಾಳ್ಮೆಯಿಂದ ವರ್ತಿಸಬೇಕು' ಎನ್ನುತ್ತಾರೆ ಗಣೇಶ್. ಗಣೇಶ್ ಅವರ ಹೊಸಬಾಳಿಗೆ ಶುಭವಾಗಲಿ.
ಸನ್ನಡತೆ ಆಧಾರದ ಮೇಲೆ ಭಾನುವಾರ ಬೆಂಗಳೂರಿನಿಂದ 28, ಮೈಸೂರಿನಿಂದ 18, ಬೆಳಗಾವಿಯಿಂದ 8, ಕಲಬುರಗಿಯಿಂದ 14, ವಿಜಯಪುರದಿಂದ 4, ಬಳ್ಳಾರಿಯಿಂದ 5 ಮತ್ತು ಧಾರವಾಡ ಜೈಲಿನಿಂದ ಇಬ್ಬರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.