ಪರಪ್ಪನ ಅಗ್ರಹಾರಕ್ಕೂ ಕಳುಹಿಸಿ, ಐ ಡೋಂಟ್ ಕೇರ್: ಡಿಕೆಶಿ ಬಹಿರಂಗ ಸವಾಲು
ಬೆಂಗಳೂರು, ಫೆ 15: ತೆರೆಯ ಹಿಂದೆ, ತೆರೆಯ ಮುಂದೆ ಯಾರೆಲ್ಲಾ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೆಲ್ಲಾ ತಿಳಿದಿದೆ. ಧರ್ಮ, ನಿಷ್ಠೆಯಿಂದ ಬದುಕುವವನು ನಾನು, ಯಾವುದಕ್ಕೂ ಕ್ಯಾರ್ ಮಾಡುವ ಜಾಯಮಾನ ನನ್ನದಲ್ಲ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಕ್ಷದ ಹೈಕಮಾಂಡಿನ ನಿರ್ದೇಶನದಂತೆ ಅಂದು ಗುಜರಾತ್ ಶಾಸಕರಿಗೆ ಆಶ್ರಯ ಕೊಟ್ಟೆ, ಆಗ ನನ್ನ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ದಾಳಿ ನಡೆಸಲಾಯಿತು. ಈಗ ಜನಾಶೀರ್ವಾದ ಯಾತ್ರೆ ನಡೆಸಿದ್ದಕ್ಕೆ ಮತ್ತೆ ಐಟಿ ಸಮನ್ಸ್ ಬಂದಿದೆ ಎಂದು ಕೇಂದ್ರ ಸರಕಾರದ ವಿರುದ್ದ ಡಿಕೆಶಿ ಕಿಡಿಕಾರಿದ್ದಾರೆ.
ಐಟಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ (ಫೆ 15) ಪ್ರತಿಕ್ರಿಯೆ ನೀಡುತ್ತಾ ಡಿ ಕೆ ಶಿವಕುಮಾರ್, ನನ್ನ ಮೇಲೆ ಐಟಿ, ಇಡಿ ದಾಳಿ ನಡೆಸಿ. ಬೇಕಾದರೆ ಪರಪ್ಪನ ಅಗ್ರಹಾರ ಜೈಲಿಗಾದರೂ ಕಳುಹಿಸಿ. ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡಿಕೆಶಿ ಚಾಲೆಂಜ್ ಮಾಡಿದ್ದಾರೆ.
ಚುನಾವಣೆಯ ವೇಳೆ ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆಂದು ಬೇರೆ ಪಕ್ಷದವರು ಮಾತನಾಡಿಕೊಳ್ಳುತ್ತಿದ್ದಾರೆ. ಹಳ್ಳಿಯಿಂದ ನಡೆದುಕೊಂಡು ಬಂದು ರಾಜಕಾರಣ ಮಾಡಿದವನು ನಾನು. ನಾನೊಬ್ಬ ನಿಷ್ಟಾವಂತ ಟ್ಯಾಕ್ಸ್ ಪೇಯರ್ ಎಂದು ಡಿಕೆಶಿ ಹೇಳಿದ್ದಾರೆ.
ನಾನು ಈ ದೇಶದ ಕಾನೂನನ್ನು ಉಲ್ಲಂಘಿಸಿಲ್ಲ, ನನಗೂ ಕಾನೂನು ಏನೆಂಬುದು ಗೊತ್ತಿದೆ. ಐಟಿ ದಾಳಿಯ ಬಗ್ಗೆ ಈಗ ಹೆಚ್ಚು ಮಾತನಾಡುವುದಿಲ್ಲ, ಎಲ್ಲದಕ್ಕೂ ಕಾಲ ಕೂಡಿಬರಲಿ, ಆಗ ಮಾತನಾಡುತ್ತೇನೆಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ದೈವಭಕ್ತ ಕುಟುಂಬ ನನ್ನದು. ಧರ್ಮದ ಹಾದಿಯಲ್ಲೇ ರಾಜಕಾರಣ ಮಾಡುವವನು. ಬಿಜೆಪಿ ನನ್ನನ್ನು ಮಟ್ಟಹಾಕಲು ಐಟಿ ಇಲಾಖೆಯನ್ನು ಬಳಸುತ್ತಿದೆ ಎಂಬುದು ಊರಿಗೇ ಗೊತ್ತಿರುವ ವಿಚಾರ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್, ಬಿಜೆಪಿ ವಿರುದ್ದ ಗರಂ ಆಗಿದ್ದಾರೆ.