ಸಿಎಲ್ ಪಿ ಸೂಚಿಸಿದರೆ ನಾನು ಸಿಎಂ ಆಗಲು ಸಿದ್ಧ: ಪರಮೇಶ್ವರ್
ವಿಜಯಪುರ, ಫೆಬ್ರವರಿ 23: ಸಿಎಲ್ ಪಿ ಸೂಚಿಸದರೆ ನಾನು ಸಿಎಂ ಆಕಾಂಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.
ಶನಿವಾರ ವಿಜಯಪುರದಲ್ಲಿ ನಡೆಯಲಿರುವ ಮಹಿಳಾ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಸಿಎಂ ಆಗಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದರು. ಮುಂದಿನ ಬಾರಿ ಕೂಡ ಸಿಎಲ್ ಪಿ ಸಿದ್ದರಾಮಯ್ಯ ಅವರನ್ನು ಸೂಚಿಸಿದರೆ ಅದಕ್ಕೂ ನನ್ನ ಸಹಮತವಿದೆ ಎಂದರು.
ಟಿಕೆಟ್ ಬೇಕೊ, ಬೇಡ್ವೊ?: ಇಬ್ಬರು ಶಾಸಕರಿಗೆ ಪರಮೇಶ್ವರ್ ತರಾಟೆ
ದಲಿತರ ಬಗ್ಗೆ ಯಡಿಯೂರಪ್ಪ ಅವರಿಗೆ ಏಕಾಏಕಿ ಪ್ರೀತಿ ಬಂದಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಶೇ24.05 ಹಣ ಬಳಕೆ ಕುರಿತು ಯಡಿಯೂರಪ್ಪ ಅವರಲ್ಲಿ ತಪ್ಪು ಕಲ್ಪನೆ ಇದೆ. ಒಳ ಮೀಸಲಾತಿ ಕುರಿತು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಕುರಿತು ರಾಹುಲ್ ಗಾಂಧಿಯವರ ಸಲಹೆಯನ್ನು ಕೂಡ ಪಡೆಯಲಾಗಿದೆ ಎಂದರು.
ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರು ರಾಹುಲ್ ಗಾಂಧಿಗೆ ಬಚ್ಛಾ ಎಂದು ಕರೆದರೆ ಅವರಿಗೆ ಶೋಭೆ ತರುವಂತಹ ಮಾತಲ್ಲ, ಅವರ ಮಾತುಗಳು ಅವರ ಹಿಡಿತದಲ್ಲಿದ್ದರೆ ಒಳ್ಳಯದು, ಈ ಮಾತಿಗೆ ರಾಜ್ಯದ ಜನತೆಯಲ್ಲಿ ಬಿಎಸ್ವೈ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಮೇಶ್ವರ್ ಎದುರು ಸಿಎಂ ಅಭ್ಯರ್ಥಿ ನಾನೆಂದು ಸಚಿವ ಎಂಬಿ ಪಾಟೀಲ್ ಕೈ ಎತ್ತಿದರು. ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಜಲಜಾ ನಾಯಕ ಅವರು ಡಿ.ಕೆ.ಶಿವಕುಮಾರ್ ಅವರು ಸಿಎಂ ಅಭ್ಯರ್ಥಿ ಎಂದು ಹೇಳಿದರು ಇವರಿಬ್ಬರು ಮಾತಿಗೂ ಪರಮೇಶ್ವರ್ ಮುಗುಳ್ನಕ್ಕು ಸುಮ್ಮನಾದರು.