ಎಲ್ಲಾ ಚರ್ಚೆಗೂ, ತನಿಖೆಗೂ ಸಿದ್ಧ: ಬಿಜೆಪಿಗೆ ಕುಮಾರಸ್ವಾಮಿ ಸವಾಲು
Recommended Video
ಬೆಂಗಳೂರು, ಫೆಬ್ರವರಿ 12: ಸದನದಲ್ಲಿ ಇಂದೂ ಸಹ ಆಡಿಯೋ ಕ್ಲಿಪ್ ಚರ್ಚೆ ಮುಂದುವರೆದಿದೆ. ವಿರೋಧ ಪಕ್ಷದ ಸದಸ್ಯರು ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ, ಆದರೆ ರಮೇಶ್ ಕುಮಾರ್ ಅವರು ಅದಕ್ಕೆ ಒಪ್ಪಿಗೆ ನೀಡಿಲ್ಲ.
ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಎಸ್ಐಟಿ ಬಗ್ಗೆ ವಿರೋಧ ಪಕ್ಷಕ್ಕೆ ಭಯ ಬೇಡ ಎಂದು ಭರವಸೆ ನೀಡಿದರು. ಈ ಹಿಂದೆ ನಾನು ಬಿಜೆಪಿ ಬೆಂಬಲದಲ್ಲಿ ಸಿಎಂ ಆಗಿದ್ದಾಗಲೂ ನನ್ನ ವಿರುದ್ಧ 150 ಕಿಕ್ ಬ್ಯಾಕ್ ಆರೋಪ ಮಾಡಿದ್ದರು ಆಗಲೂ ಸಹ ನಾನು ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ ಎಂದರು.
ಯಡಿಯೂರಪ್ಪ ಪದೇಪದೇ ಎಡವುತ್ತಿರುವುದು ಯಾಕೆ, ಪಕ್ಷದೊಳಗೇ ಇದ್ದಾರಾ ಗೂಢಚಾರಿಗಳು?
ಸಂಪುಟ ಸದಸ್ಯನೊಬ್ಬನನ್ನು ಕೊಲೆ ಮಾಡುವ ಹುನ್ನಾರ ನಡೆಸಿದ್ದೇನೆ ಎಂದು ಸುಳ್ಳು ದೂರು ದಾಖಲಿಸಿದಿರಿ ಆವಾಗಲೂ ಸಹ ನಾನು ಯಾರ ವಿರುದ್ಧವೂ ಕ್ರಮಕ್ಕೆ ಮುಂದಾಗಲಿಲ್ಲ, ನಾನೂ ಎಂದೂ ಸರ್ಕಾರದ ಸಂಸ್ಥೆಗಳನ್ನು ನನ್ನ ಸ್ವ-ಹಿತಾಸಕ್ತಿಗಾಗಲಿ, ರಾಜಕೀಯ ಮಾಡಲಾಗಲಿ ಬಳಸಿಕೊಂಡಿಲ್ಲ ಎಂದು ಹೇಳಿದರು.
ಸಿಡಿ ಬಿಡುಗಡೆ ಬಗ್ಗೆ ಮಾತುಕತೆ
ಬಿಜೆಪಿಯು 2008 ರಲ್ಲಿ ನಡೆದ ಘಟನೆಯ ಸಿಡಿ ಬಿಡುಗಡೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಆ ಬಗ್ಗೆ ನಾನು ಚರ್ಚೆಗೆ ಸಿದ್ಧನಿದ್ದೇನೆ, ಬೇಕಾದರೆ ತನಿಖೆ ಮಾಡಿದರೂ ಸಹ ನಾನು ಎದುರಿಸಲು ಸಿದ್ಧನಿದ್ದೇನೆ, ನಿಮ್ಮ ಹಾಗೆ ಪಲಾಯನ ಮಾಡುವುದಿಲ್ಲ, ಹೇಗೋ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ಲ ಅವರಿಂದಲೇ ತನಿಖೆ ಮಾಡಿಸಿ ಎಂದು ವಿರೋಧ ಪಕ್ಷ ನಾಯಕರಿಗೆ ಹೇಳಿದರು.
ಘಟನೆ ವಿವರ ನೀಡಿದ ಎಚ್ಡಿಕೆ
2008 ರ ಆ ಘಟನೆ ನನ್ನ ಮನೆಯಲ್ಲಿ, ನನ್ನದೇ ಪಕ್ಷದ ವ್ಯಕ್ತಿಯೊಬ್ಬನ ಜೊತೆ ನಡೆದಿದ್ದು, ಒಬ್ಬ ವ್ಯಕ್ತಿಯನ್ನು ಎಂಎಲ್ಸಿ ಮಾಡುವ ಸಂಬಂಧ ನಡೆದಿದ್ದ ಸಂಭಾಷಣೆ ಅದು, ಅದು ನನ್ನ ಪಕ್ಷದ ವಿಷಯ ಬೇಕಿದ್ದರೆ ಅದನ್ನೂ ಚರ್ಚೆಗೆ ತನ್ನಿ ಮಾತನಾಡುತ್ತೇನೆ, ಆದರೆ ಈ ವಿಷಯವನ್ನು ಅದಕ್ಕೆ ಬೆರೆಸಬೇಡಿ ಎಂದು ಕುಮಾರಸ್ವಾಮಿ ಹೇಳಿದರು.
ಆಡಿಯೋ ಬಿಡುಗಡೆ ಕೇಸ್ : ಎಚ್ಡಿಕೆ ವಿರುದ್ಧದ ದೂರು, ಕಾನೂನು ತಜ್ಞರ ಮೊರೆ
ಆಪರೇಷನ್ ಕಮಲದ ಬಗ್ಗೆ ಚರ್ಚೆ
ನನ್ನ ಪಕ್ಷದ ಒಬ್ಬ ಶಾಸಕ ಸಹ ಅಲ್ಲಿಗೆ (ಮುಂಬೈ) ಹೋಗಿದ್ದಾರೆ, ಅದರ ಬಗ್ಗೆ ನಾನು ಇಲ್ಲಿಯವರೆಗೆ ಸದನದಲ್ಲಿ ಚರ್ಚಿಸಲು ಹೋಗಿಲ್ಲ, ಅವರ ಪರಿಸ್ಥಿತಿ ಅಲ್ಲಿ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಸಿಎಂ ಅವರು ಮುಂಬೈ ವಿಷಯ ತೆಗೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಪ್ರಾರಂಭಿಸಿದರು.
ಕಲಾಪ ಮುಂದೂಡಿಕೆ
ಆಗ ಕೆರಳಿದ ಸಿಎಂ ನೀವು ಎರಡು ದಿನದಿಂದ ಮಾತನಾಡುತ್ತಲೇ ಇದ್ದೀರಿ ನಾವು ಸುಮ್ಮನೇ ಕೇಳಿದ್ದೇವೆ ಎಂದು ಗದರಿದರು. ಸ್ಪೀಕರ್ ಸಹ ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ, ನೀವು ಮಾತನಾಡಬಹುದು ಅವರು ಮಾತನಾಡುವ ಹಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಆದರೆ ಗದ್ದಲ ನಿಲ್ಲದಿದ್ದಾಗ ಕಲಾಪವನ್ನು ಭೋಜನ ನಂತರಕ್ಕೆ ಮುಂದೂಡಲಾಯಿತು.