ವಿಡಿಯೋಗೂ ನನಗೂ ಸಂಬಂಧವಿಲ್ಲ: ಸಿದ್ದರಾಮಯ್ಯ ಯೂಟರ್ನ್
ಬೆಂಗಳೂರು, ಜೂನ್ 30: ಧರ್ಮಸ್ಥಳದ ಶಾಂತಿವನದಲ್ಲಿದ್ದಾಗ ಆಪ್ತರ ಜೊತೆ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದಿದ್ದ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ವಿಡಿಯೋಗೂ ನನಗೂ ಸಂಬಂದವೇ ಇಲ್ಲ ಎಂದಿದ್ದಾರೆ.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ನಾನು ಸರ್ಕಾರದ ವಿರುದ್ಧ ಇದ್ದೇನೆ ಎಂಬುದು ಅಪ್ಪಟ ಸುಳ್ಳು, ಆ ಲೀಕ್ ಆಗಿರುವ ವಿಡಿಯೋಗೂ ನನಗೂ ಸಂಬಂಧವೇ ಇಲ್ಲ, ಅದು ಯಾರೋ ಕಿಡಿಗೇಡಿಗಳ ಕೆಲಸ' ಎಂದಿದ್ದಾರೆ.
ನಾನು ಯಾವ ಸಂದರ್ಭದಲ್ಲಿ ಮತನಾಡಿದ್ದೇನೆ, ನನ್ನ ಮಾತಿಗೆ ಮುಂಚೆ ಎದುರಿನವರ ಮಾತೇನಾಗಿತ್ತು, ಯಾವ ಸನ್ನಿವೇಶದಲ್ಲಿ ನಾನು ಮಾತನಾಡಿದ್ದೇನೆ ಎಂಬುದು ಮಾಧ್ಯಮಗಳಿಗೆ ಗೊತ್ತಿಲ್ಲ ಎಂದಿದ್ದಾರೆ.
'ನಾನು ಲೋಕಾಭಿರಾಮವಾಗಿ ಮಾತನಾಡಿದ್ದನ್ನು ಹಿಂದೆ ಮುಂದೆ ಕತ್ತರಿಸಿ ವಿವಾದ ಆಗುವಂತಹದ್ದುನ್ನೇ ಹೆಕ್ಕಿ, ವಿಇವಾದ ಆಗಲೆಂದೇ ಪ್ರಸಾರ ಮಾಡಲಾಗಿದೆ, ಇದು ಕಿಡಿಗೇಡಿಗಳು ಮಾಡಿರುವ ಕೃತ್ಯ' ಎಂದು ಅವರು ಹೇಳಿದ್ದಾರೆ.
ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಲೆಂದು ಹಾಗೂ ರಾಜ್ಯಕ್ಕೆ ಉತ್ತಮ ಆಡಳಿತ ನಿಡಲೆಂದು ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ ಹಾಗೂ ಈ ಸರ್ಕಾರವು 5 ವರ್ಷ ಸುಭದ್ರವಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.