MLC ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ
ಬೆಂಗಳೂರು, ಮೇ 26: ಕೊರೊನಾವೈರಸ್ ಲಾಕ್ಡೌನ್ ನಡುವೆ ಆಡಳಿತ ಯಂತ್ರ ಸ್ಥಗಿತವಾಗದಂತೆ ನೋಡಿಕೊಂಡಿರುವ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಈಗ ಎಂಎಲ್ಸಿ ಚುನಾವಣೆ ಎದುರಿಸುವ ಕಾಲ ಎದುರಾಗಿದೆ. ಜೂನ್ ತಿಂಗಳ ಅಂತ್ಯಕ್ಕೆ ಅನೇಕ ಹಿರಿಯ ಶಾಸಕರ ವಿಧಾನಪರಿಷತ್ ಸದಸ್ಯತ್ವ ಅವಧಿ ಮುಕ್ತಾಯವಾಗಲಿದೆ.
ಬಿಜೆಪಿಯಲ್ಲಿಗ ಎಂಎಲ್ಸಿ ಸ್ಥಾನಕ್ಕೆ ಪೈಪೋಟಿ ನಡೆದಿರುವ ಸುದ್ದಿ ಬಂದಿದೆ. ಈ ನಡುವೆ MLC ಸ್ಥಾನಕ್ಕಾಗಿ ಲಾಬಿ ನಡೆಸಿರುವ ಬಗ್ಗೆ ಬಂದಿರುವ ಸುದ್ದಿಗಳನ್ನು ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅಲ್ಲಗೆಳೆದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿವೈ ವಿಜಯೇಂದ್ರ ನೀಡಿರುವ ಪ್ರತಿಕ್ರಿಯೆ: "ಪಕ್ಷದಲ್ಲಿ ನನಗಿಂತ ಹಿರಿಯರು ಅನೇಕ ಮಂದಿ ಇದ್ದಾರೆ. ಹಲವು ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಈಗ ಅವಕಾಶಕ್ಕಾಗಿ ಕಾದಿದ್ದಾರೆ. ನನ್ನ ಆದ್ಯತೆ ಏನಿದ್ದರೂ ಪಕ್ಷದ ಸಂಘಟನೆಯಾಗಿದ್ದು, ಪಕ್ಷದ ಹಿರಿಯ ಮುಖಂಡರು ನೀಡಿದ ಆದೇಶವನ್ನು ಪಾಲಿಸುತ್ತೇನೆ'' ಎಂದಿದ್ದಾರೆ.
ಕೆಲ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿ ವೈ ವಿಜಯೇಂದ್ರ ಅವರು ಎಂಎಲ್ಸಿ ಸ್ಥಾನ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ದುಡಿದು ಯಶಸ್ಸುಗೊಳಿಸಿದ್ದಕ್ಕೆ ಪಕ್ಷದಿಂದ ಈ ಬಹುಮಾನ ಸಿಗಲಿದೆ ಎಂದು ಸುದ್ದಿಹಬ್ಬಿಸಲಾಗಿದೆ. ಜೊತೆಗೆ ಒಂದಿಷ್ಟು ಮಂದಿ ಸಂಭಾವ್ಯ ಹೆಸರುಗಳನ್ನು ಸೇರಿಸಲಾಗಿದೆ. ಆದರೆ, ಇದೆಲ್ಲವೂ ಸುಳ್ಳು ಸುದ್ದಿ, ಪಕ್ಷದಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿಲ್ಲ, ನಾನು ಅಕಾಂಕ್ಷಿಯೂ ಅಲ್ಲ, ಎಂಎಲ್ಸಿ ಸ್ಥಾನಕ್ಕಾಗಿ ಲಾಬಿಯೂ ನಡೆಸಿಲ್ಲ ಎಂದು ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಪರಿಷತ್ ಚುನಾವಣೆ
ವಿಧಾನಪರಿಷತ್ತಿನಲ್ಲಿ ಒಟ್ಟು 6 ಸ್ಥಾನಗಳನ್ನು ತುಂಬಬೇಕಾಗಿದೆ. ಜೂನ್ ಮೊದಲ ವಾರದಲ್ಲಿ ಪರಿಷತ್ ಚುನಾವಣೆ ನಿಗದಿಯಾಗುವ ಸಾಧ್ಯತೆಯಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಕ್ಷೇತ್ರ, ನೈರುತ್ಯ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿದೆ. ಜೂನ್ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಬಹುದು. ಜೂನ್ 30ರೊಳಗೆ ಚುನಾವಣಾ ಆಯೋಗವು ಪ್ರಕ್ರಿಯೆ ಮುಗಿಸಬೇಕಿದೆ.
ಜೂನ್ 21ಕ್ಕೆ ವಿಎಸ್ ಉಗ್ರಪ್ಪ, ಇಕ್ಬಾಲ್ ಅಹಮದ್ ಸರದಗಿ, ಕೆ ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜ, ಡಾ. ಜಯಮಾಲಾ ರಾಮಚಂದ್ರ ನಾಮಾಂಕಿತ ಸದಸ್ಯರ ಎಂಎಲ್ಸಿ ಅವಧಿ ಮುಕ್ತಾಯವಾಗಲಿದೆ.
ಮಿಕ್ಕಂತೆ ಕೆಎಸ್ ಈಶ್ವರಪ್ಪ, ಜಿ ಪರಮೇಶ್ವರ, ಬೊರೆರಾಜು, ಎಚ್ ಎಂ ರೇವಣ್ಣ, ಶರಣಪ್ಪ ಮತ್ತೂರ್, ಪುಟ್ಟಣ್ಣ,ಟಿಎ ಶರವಣ, ಡಿಯು ಮಲ್ಲಿಕಾರ್ಜುನ(ಸ್ವತಂತ್ರ), ಚೌಡರೆಡ್ಡಿ ಮುಂತಾದವರ ಅಧಿಕಾರ ಅವಧಿಯೂ ಮುಕ್ತಾಯವಾಗಲಿದೆ.
ವಿಧಾನಪರಿಷತ್ ಬಲಾಬಲ:
- ಖಾಲಿ ಇರುವ ಸ್ಥಾನ: 6
- ಬಿಜೆಪಿ: 20 + 2 ಸ್ವತಂತ್ರ
- ಕಾಂಗ್ರೆಸ್: 38
- ಜೆಡಿಎಸ್: 15