ಭ್ರಷ್ಟಾಚಾರ ಕುರಿತ ಚರ್ಚೆಯಿಂದ ಹಿಂದೆ ಸರಿಯಲ್ಲ: ಡಿಕೆಶಿ
ಬೆಂಗಳೂರು, ಜುಲೈ 25: "ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ ಯಾರ ಜತೆ ಚರ್ಚೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವುದು ನಮ್ಮ ಆದ್ಯತೆಯಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೋಮವಾರ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, "ಭ್ರಷ್ಟಾಚಾರ ವಿಚಾರವಾಗಿ ಚರ್ಚೆಗೆ ಸಿದ್ಧ ಎಂಬ ಸಿ. ಟಿ. ರವಿ ಹೇಳಿಕೆ ಉತ್ತರಿಸಿದ ಅವರು, ನಾನು ಭ್ರಷ್ಟಾಚಾರದ ಚರ್ಚೆಯಿಂದ ವಾಪಸ್ ಹೋಗಲ್ಲ. ಈ ಚರ್ಚೆಯನ್ನು ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿಗಳ ಜತೆ ಮಾಡಬೇಕೋ ಎಂದು ತೀರ್ಮಾನ ಮಾಡುತ್ತೇನೆ" ಎಂದರು.
Breaking: ಲೋಕಸಭೆಯಿಂದ 4 ಕಾಂಗ್ರೆಸ್ ಸಂಸದರ ಅಮಾನತು
"ರಾಜ್ಯ ಸರ್ಕಾರ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಈಶ್ವರಪ್ಪ ಅವರ ಪ್ರಕರಣ ಮುಚ್ಚಿ ಹಾಕಿದ್ದರ ಕುರಿತು ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹಸಚಿವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿ ರಿಪೋರ್ಟ್ ಸಲ್ಲಿಕೆ ಮೂಲಕ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಪ್ರಾರಂಭದಿಂದ ಪ್ರಯತ್ನ ಪಟ್ಟಿದ್ದನ್ನು ಸಾಬೀತುಪಡಿಸಿದೆ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನ್ಯಾಯಾಂಗ ತನಿಖೆಗೆ ಆಗ್ರಹ
"ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂಬ ಅನುಮಾನದಿಂದಲೇ ವಿರೋಧ ಪಕ್ಷದ ನಾಯಕರು ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಗುತ್ತಿಗೆದಾರನ ಸಂತೋಷ ಪಾಟೀಲ್ ಆತ್ಮಹತ್ಯ ಬಳಿಕ ನಡೆದ ಬೆಳವಣಿಕೆ, ನಾಯಕರ ಹೇಳಿಕೆ ನೋಡಿದರೆ ಪ್ರಕರಣ ಮುಚ್ಚಿಹಾಕುವ ಯತ್ನ ಹೇಗೆ ನಡೆಯುತ್ತಿದೆ ಎಂಬುದು ತಿಳಿಯುತ್ತದೆ. ಭ್ರಷ್ಟಾಚಾರದ ತಾಂಡವಕ್ಕೆ ಯುವಕ ಬಲಿಯಾಗಿದ್ದು, ಇದೇ ರೀತಿ ಬೇರೆ ಇಲಾಖೆಗಳಲ್ಲೂ ಹಲವು ದೂರುಗಳು ಬಂದಿವೆ" ಎಂದರು.
ಭ್ರಷ್ಟಾಚಾರ ಪ್ರಕರಣ ದಾಖಲಾಗಬೇಕಿತ್ತು
"ಸರ್ಕಾರ ಆರಂಭದಲ್ಲೇ ಕ್ಲೀನ್ ಚಿಟ್ ನೀಡಿದರೆ ಪೊಲೀಸ್ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ?. ಈ ವಿಚಾರವಾಗಿ ನಾವು ಸಾಕಷ್ಟು ಮಾಹಿತಿ ಪಡೆದು ಪರಿಶೀಲಿಸಿದ್ದೇವೆ. ಮೊದಲು ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಈ ಕುರಿತು ಹೋರಾಟ ರೂಪಿಸುವ ಚಿಂತನೆಯಲ್ಲಿದ್ದೇ" ಎಂದು ಹೇಳಿದರು.
ಐ ಆಮ್ ನಾಟ್ ಗೋ ಬ್ಯಾಕ್
"ಈಶ್ವರಪ್ಪ ಪ್ರಕರಣ ಕುರಿತು ಕಾಂಗ್ರೆಸ್ ತಜ್ಞರ ಜತೆ ಚರ್ಚಿಸಿದೆ. ಆತ್ಮಹತ್ಯೆ ಕುರಿತು ಈಶ್ವರಪ್ಪ ಅವರ ವಿರುದ್ಧ ಮಾತು ಕೇಳಿ ಬರುತ್ತಿದಂತೆ ಎಸಿಬಿ ಅವರು ದೂರು ದಾಖಲಿಸಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟಚಾರಾ ತಾಂಡವವಾಡುತ್ತಿದೆ. ಹೀಗಿದ್ದರು. ಸಿ. ಟಿ. ರವಿ ಚರ್ಚೆ ಸಿದ್ಧ ಎಂದಿದ್ದು, ಸಿ. ಟಿ. ರವಿ ಜತೆಗೆ ಚರ್ಚೆ ಮಾಡಬೇಕೋ ಅಥವಾ ಮಾಜಿ ಮುಖ್ಯಮಂತ್ರಿ ಜತೆ ಚರ್ಚೆ ಮಾಡಬೇಕೋ ಎಂಬುದು ಗೊತ್ತಿದೆ. ಐ ಆಮ್ ನಾಟ್ ಗೋ ಬ್ಯಾಕ್" ಎಂದು ಅವರು ತಿರುಗೇಟು ನಿಡಿದ್ದಾರೆ.
ವಿವಿಧ ವಿಚಾರಗಳು ಬಗೆಹರಿಯಲಿ
"ಚರ್ಚೆಗೂ ಮೊದಲು 40 ಪರ್ಸೆಂಟ್ ಭ್ರಷ್ಟಾಚಾರ ಪ್ರಕರಣದ ಬಗ್ಗೆ ತೀರ್ಮಾನ ಆಗಬೇಕು. ಕೋವಿಡ್ ಸಮಯದಲ್ಲಿನ ಭ್ರಷ್ಟಾಚಾರ ತೀರ್ಮಾನ ಆಗಬೇಕು. ಮಾಧ್ಯಮಗಳಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿರುವ ಪಟ್ಟಿಯ ವರದಿ ಬಗ್ಗೆ ತೀರ್ಮಾನ ಆಗಬೇಕು. ತೋಟಗಾರಿಕಾ ಇಲಾಖೆ ಪಟ್ಟಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರದ ವಿಚಾರ ಇತ್ಯರ್ಥ ಆಗಬೇಕು. ಗುತ್ತಿಗೆದಾರರನ್ನು ಹೆದರಿಸುವ ಪ್ರಯತ್ನ ಮಾಡಿದರು. ಇದೆಲ್ಲವೂ ಮೊದಲು ಬಗೆಹರಿಯಲಿ" ಎಂದು ಡಿ. ಕೆ. ಶಿವಕುಮಾರ್ ಅವರು ಕಿಡಿ ಕಾರಿದರು.