ಪೇಜಾವರ ಶ್ರೀಗಳಿಗೆ ಕೃಷ್ಣನ ಜೊತೆ ಒಲಿದ ಆಧುನಿಕ ಕುಬೇರ!
ಬೆಂಗಳೂರು, ಏ 3: ನಾಡಿನ ಪ್ರಮುಖ ಮಧ್ವಪೀಠಗಳಲ್ಲೊಂದಾದ ಉಡುಪಿಯ ಪೇಜಾವರ ಅಧೋಕ್ಷಜ ಮಠಕ್ಕೆ ಹೈದರಾಬಾದಿನ ದಾನಿಯೊಬ್ಬರು ಭಾರೀ ದೇಣಿಗೆ ನೀಡಲು ಮುಂದಾಗಿದ್ದಾರೆ.
ಹೈದರಾಬಾದಿನ ಸತಿ ಗೋಪಾಲಕೃಷ್ಣ ರೆಡ್ಡಿ ಫೌಂಡೇಷನ್ ಟ್ರಸ್ಟ್, ಪೇಜಾವರ ಮಠ ನಡೆಸುತ್ತಿರುವ ವಿವಿಧ ಸಮಾಜ ಸೇವಾ ಕಾರ್ಯಕ್ಕೆ 600 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿದೆ ಎಂದು ಪೇಜಾವರ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ನಗರದ ವಿದ್ಯಾಪೀಠದಲ್ಲಿ ಮಾಧ್ಯಮದವರಿಗೆ (ಏ 2) ತಿಳಿಸಿದ್ದಾರೆ.
ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಶ್ರೀಸತಿ ಗೋಪಾಲಕೃಷ್ಣ ರೆಡ್ಡಿ ಫೌಂಡೇಷನ್ ಟ್ರಸ್ಟ್ ಸಂಸ್ಥಾಪಕರಾದ ಗೋಪಾಲಕೃಷ್ಣ ರೆಡ್ಡಿ ಮಾತನಾಡುತ್ತಾ, ಪೇಜಾವರ ಮಠದಿಂದ ಹಲವು ಸಮಾಜಮುಖಿ ಕೆಲಸಗಳು ನಡೆಯುತ್ತಿದೆ. ಲೋಕ ಕಲ್ಯಾಣ ಮತ್ತು ಸಮಾಜದ ಒಳಿತಿಗಾಗಿ ಟ್ರಸ್ಟ್, ಪೇಜಾವರ ಮಠಕ್ಕೆ ಈ ದೇಣಿಗೆ ನೀಡುತ್ತಿದ್ದೇವೆ ಎಂದಿದ್ದಾರೆ. (ಹಸು ರಾಷ್ಟ್ರೀಯ ಪ್ರಾಣಿಯಾಗಲಿ)
ನಾವು ದೇಣಿಗೆ ನೀಡುತ್ತಿರುವ ಹಣ ಕಪ್ಪುಹಣವಲ್ಲ. ಸರಕಾರಿ ಹುದ್ದೆಯಲ್ಲಿದ್ದ ನನ್ನ ತಂದೆ ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡರು.
ನಾನು ಷೇರು ವಹಿವಾಟು ನಡೆಸುತ್ತಿದ್ದೇನೆ. ನನ್ನ ಮತ್ತು ನನ್ನ ತಂದೆ ಸಂಗ್ರಹಿಸಿಟ್ಟಿದ್ದ ಹಣವನ್ನು ಪೇಜಾವರ ಮಠಕ್ಕೆ ನೀಡುತ್ತಿದ್ದೇನೆಂದು ಗೋಪಾಲಕೃಷ್ಣ ರೆಡ್ಡಿ ಹೇಳಿದ್ದಾರೆ.
ನಾನು ಶ್ರೀಕೃಷ್ಣನ ಪರಮಭಕ್ತ. ಲಂಡನ್ ಬ್ಯಾಂಕಿನಲ್ಲಿರುವ ಈ ಹಣವನ್ನು ರೂಪಾಯಿಗೆ ಪರಿವರ್ತಿಸಿ ಇನ್ನು ಹದಿನೈದು ದಿನದೊಳಗೆ ಆರು ನೂರು ಕೋಟಿ ರೂಪಾಯಿಯನ್ನು ಪೇಜಾವರ ಮಠಕ್ಕೆ ತಲುಪಿಸಲಾಗುವುದು ಎಂದು ರೆಡ್ಡಿ ಹೇಳಿದ್ದಾರೆ.
ಪೇಜಾವರ ಮಠ ನಡೆಸುತ್ತಿರುವ ಶಾಲಾ, ಕಾಲೇಜುಗಳಲ್ಲಿ ಎಲ್ಲಾ ವರ್ಗದವರಿಗೂ ಮತ್ತು ಬಡವರಿಗೂ ವಿದ್ಯಾಭ್ಯಾಸ ನೀಡಲಾಗುತ್ತಿದೆ. ನಮ್ಮ ಮಠದ ಆಸ್ಪತ್ರೆಗಳಲ್ಲೂ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ.
ಮಾನ್ಯ ರೆಡ್ಡಿಯವರು ನೀಡಲು ಮುಂದಾಗಿರುವ ದೇಣಿಗೆಯ ಮೂಲಕ ನಮ್ಮ ಸಮಾಜ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
600 ಕೋಟಿ ರೂಪಾಯಿ ದೇಣಿಗೆಯನ್ನು ಉಡುಪಿಯ ಪೇಜಾವರ ಮಠದ ಕಾಲೇಜಿಗೆ 75 ಕೋಟಿ, ಹುಬ್ಬಳ್ಳಿಯಲ್ಲಿರುವ ಶ್ರೀಮಠದ ಕಾಲೇಜಿಗೆ 75 ಕೋಟಿ ರೂಪಾಯಿ, ಸಂಸ್ಕೃತ ವೇದಪಾಠಶಾಲೆ ಮತ್ತು ಕಾಲೇಜುಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ.
ಉಡುಪಿ ಹಾಗೂ ಬೆಂಗಳೂರಿನಲ್ಲಿರುವ ಗೋ ಶಾಲೆಗಳಿಗೆ 100 ಕೋಟಿ ರೂಪಾಯಿ ಮತ್ತು ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಗೆ 250 ಕೋಟಿ ರೂಪಾಯಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಬರುವ ಜನವರಿ 17ರಂದು ಐದನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದೇನೆ. ಇದು ಕೃಷ್ಣ ಮಠದ ಪರಂಪರೆಯಲ್ಲಿ ದಾಖಲೆ. ಪರ್ಯಾಯದ ಸಮಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಕಾರ್ಯಕ್ಕೆ ಹಲವು ಸಂಘ ಸಂಸ್ಥೆಗಳು ನೆರವಾಗಲು ಮುಂದೆ ಬಂದಿದೆ ಎಂದು ಪೇಜಾವರ ಶ್ರೀಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.