ಮೇಟಿ ರಾಸಲೀಲೆ: ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಬಾಂಬ್
ಅಬಕಾರಿ ಸಚಿವ ಎಚ್ ವೈ ಮೇಟಿಯವರ ಸೆಕ್ಸ್ ಹಗರಣದ ಟೇಪ್ ಬಗ್ಗೆ ತಿಂಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಹಿತಿಯಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, ಡಿ 14: ಇಡೀ ರಾಜ್ಯ ತಲೆತಗ್ಗಿಸುವಂತಹ 'ಮೇಟಿ' ಸೆಕ್ಸ್ ವಿಡಿಯೋದ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ತಿಂಗಳ ಹಿಂದೆಯೇ ಮಾಹಿತಿ ಇತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಲ್ಲಿ ಅಬಕಾರಿ ಸಚಿವರ ಕಾಮಕಾಂಡದ ಸೆಕ್ಸ್ ವಿಡಿಯೋ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಸಚಿವರ ವಿರುದ್ದ ಆರೋಪ ಕೇಳಿಬಂದಾಗಲೇ ರಾಜೀನಾಮೆ ಪಡೆದಿದ್ದರೆ ಸರಕಾರದ ಮತ್ತು ಸಿದ್ದರಾಮಯ್ಯನವರ ಮಾನವೂ ಉಳಿಯುತ್ತಿತ್ತು ಎಂದು ಎಚ್ಡಿಕೆ ಕಿಡಿಕಾರಿದ್ದಾರೆ. (ವಿಡಿಯೋ ಬಹಿರಂಗ: ಮೇಟಿ ರಾಜೀನಾಮೆ ಅಂಗೀಕಾರ)
ಒಂದು ತಿಂಗಳ ಹಿಂದೆಯೇ ವಿಡಿಯೋ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿಯಿತ್ತು. ರಾಜ್ಯದ ಜನತೆ ಈ ವಿಡಿಯೋ ನೋಡಿ ಮಜಾ ಮಾಡಲಿ ಎಂದು ಸಿದ್ದರಾಮಯ್ಯನವರು ಸುಮ್ಮನಿದ್ರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಡಿಯೋ ಬಹಿರಂಗಗೊಂಡರೆ ಮುಲಾಜಿಲ್ಲದೇ ಎಚ್ ವೈ ಮೇಟಿಯವರ ರಾಜೀನಾಮೆ ಪಡೆಯಲಾಗುವುದು ಎಂದು ಹೇಳಿ ಮುಖ್ಯಮಂತ್ರಿಗಳು ದೇಶದ ಮುಂದೆ ರಾಜ್ಯ ತಲೆತಗ್ಗಿಸುವಂತೆ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಸಿದ್ದರಾಮಯ್ಯನವರಿಗೆ ಮಾಹಿತಿ ಇತ್ತು, ಆಗಲೇ ಸಚಿವರನ್ನು 'ಮನೆಗೆ ಹೋಗಯ್ಯಾ' ಎಂದು ಕಳುಹಿಸಿದ್ದರೆ ಈ ರೀತಿಯ ಅವಮಾನ ಮುಖ್ಯಮಂತ್ರಿಗಳು ಎದುರಿಸುವುದನ್ನು ತಪ್ಪಿಸಬಹುದಾಗಿತ್ತು ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಮೇಟಿಯಂತಹ ಅಯೋಗ್ಯರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೋ ದೇವರೇ ಬಲ್ಲ, ಮಹಿಳೆಯೊಬ್ಬಳ ಅಸಹಾಯಕತೆಯನ್ನು ಬಳಸಿಕೊಂಡ ಸಚಿವರು ನೈತಿಕತೆಯನ್ನು ಮೀರಿ ನಡೆದಿದ್ದಾರೆ.
ಸಚಿವರಿಂದ ರಾಜೀನಾಮೆ ಪಡೆದು, ಪ್ರಕರಣವನ್ನು ಮುಚ್ಚಿಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಟಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಘನತೆಗೆ ಧಕ್ಕೆಯುಂಟಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.