ಗಂಡನ ಅನೈತಿಕ ಸಂಬಂಧ, ಹೆಂಡತಿಯ ಸಂಶಯಾಸ್ಪದ ಸಾವು
ಚಾಮರಾಜನಗರ, ಮೇ 19 : ಅತ್ತಿಗೆಯೊಂದಿಗೆ ಗಂಡ ಅನೈತಿಕ ಸಂಬಂಧ ಹೊಂದಿದ್ದರಿಂದ ಬೇಸತ್ತ ಹೆಂಡತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದ್ದು, ಮೃತಳ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.
ಕಾವ್ಯಾ(22) ಎಂಬಾಕೆಯೇ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನಿವಾಸಿ ಪ್ರಭುಸ್ವಾಮಿ ಎಂಬುವರ ಪುತ್ರಿಯಾದ ಈಕೆಯನ್ನು ಅಂಬಳೆ ಗ್ರಾಮದ ಚಂದ್ರು ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಮದುವೆಯಾಗಿ ಒಂದು ವರ್ಷವಷ್ಟೆ ಕಳೆದಿತ್ತು. ಈ ನಡುವೆ ಪತಿ ಚಂದ್ರು ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಪತಿಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]
ಬುಧವಾರ ಕಾವ್ಯಾ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಮನೆಯವರು ತಿಳಿಸಿದ್ದಾರೆ. ಮಹಿಳೆಯ ತಂದೆ ಪ್ರಭುಸ್ವಾಮಿ ಹಾಗೂ ಸಂಬಂಧಿಕರು ಅಂಬಳೆ ಗ್ರಾಮಕ್ಕೆ ಭೇಟಿ ನೀಡಿ ಕಾವ್ಯಾಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆಕ್ರೋಶಿತರಾದ ಕೆಲವರು ಕಿಟಿಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿರುವ ಕಾವ್ಯ ಕುಟುಂಬದವರು, ಕಾವ್ಯಳ ಪತಿ ಚಂದ್ರು ತನ್ನ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಘಟನೆ ಬಳಿಕ ಪತಿ ಚಂದ್ರು ಹಾಗೂ ಸಹೋದರ ಕುಮಾರ ತಲೆಮರೆಸಿಕೊಂಡಿದ್ದಾರೆ. ಮೃತ ಕಾವ್ಯಾಳ ತಂದೆ ಪ್ರಭುಸ್ವಾಮಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. [ಮೂರುವರೆ ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲು!]