ರಾಜೀನಾಮೆ ಅಂಗೀಕರಿಸದಿದ್ದರೆ ಶಾಸಕ ಸ್ಥಾನವೂ ಬೇಡ : ವಿಶ್ವನಾಥ್
ಬೆಂಗಳೂರು, ಜೂನ್ 20 : 'ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಶಾಸಕ ಸ್ಥಾನವೂ ಬೇಡ' ಎಂದು ಹುಣಸೂರು ಶಾಸಕ ಎಚ್.ವಿಶ್ವನಾಥ್ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ವಿಶ್ವನಾಥ್ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 'ನನ್ನ ಅನುಭವವನ್ನು ಮುಖ್ಯಮಂತ್ರಿಗಳಾಗಲಿ, ಸಿದ್ದರಾಮಯ್ಯ ಅವರಾಗಲಿ ಉಪಯೋಗಿಸಿಕೊಂಡಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ನಾಯಕರ ವಿರುದ್ಧ ಮತ್ತೆ ಎಚ್.ವಿಶ್ವನಾಥ್ ಗರಂ
'ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಮಾಧ್ಯಮಗಳ ಮೂಲಕ ಎಚ್.ಡಿ.ದೇವೇಗೌಡರಿಗೆ ಮನವಿ ಮಾಡುವೆ. ಪಕ್ಷದ ಹಿತದೃಷ್ಟಿಯಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಉತ್ತಮ' ಎಂದು ವಿಶ್ವನಾಥ್ ಸಲಹೆ ನೀಡಿದರು.
ಎಚ್.ವಿಶ್ವನಾಥ್ ಮನವೊಲಿಸುವ ದೇವೇಗೌಡರ ಪ್ರಯತ್ನಕ್ಕೆ ಫಲವಿಲ್ಲ?
'ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆ ಅಂಗೀಕಾರ ಮಾಡದಿದ್ದಲ್ಲಿ ಹುಣಸೂರು ಕ್ಷೇತ್ರದ ಶಾಸಕ ಸ್ಥಾನವೂ ಬೇಡ' ಎಂದು ವಿಶ್ವನಾಥ್ ಹೇಳಿದರು. ಈ ಮೂಲಕ ರಾಜೀನಾಮೆ ಅಂಗೀಕಾರ ಮಾಡುವಂತೆ ಜೆಡಿಎಸ್ ವರಿಷ್ಠರ ಮೇಲೆ ಒತ್ತಡ ಹಾಕಿದರು.
ಅಚ್ಚರಿ ಮೂಡಿಸಿದ ಎಚ್ ವಿಶ್ವನಾಥ್-ಶ್ರೀನಿವಾಸ್ ಪ್ರಸಾದ್ ಭೇಟಿ
ನೋವುಂಟು ಮಾಡಬೇಡಿ
'ಜೆಡಿಎಸ್ ಕೋಟಾದಲ್ಲಿ ಖಾಲಿ ಇರುವ ಸಚಿವ ಸ್ಥಾನವನ್ನು ಭರ್ತಿ ಮಾಡಿ. ಸಂಪುಟಕ್ಕೆ ಸೇರಿಸಿಕೊಂಡಿರುವ ಇಬ್ಬರು ಪಕ್ಷೇತರ ಶಾಸಕರಿಗೆ ಖಾತೆ ಹಂಚಿಕೆ ಮಾಡಿ. ಯಾವ ಸಮುದಾಯಕ್ಕೂ ನೋವುಂಟು ಮಾಡಬೇಡಿ' ಎಂದು ಎಚ್.ವಿಶ್ವನಾಥ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.
ಕುಮಾರಸ್ವಾಮಿ ಜೊತೆ ಕೆಲಸ ಮಾಡುವ ಆಸೆ ಇತ್ತು
'ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಆದರೆ ಸನ್ನಿವೇಶ ಅದಕ್ಕೆ ಆಸ್ಪದ ಕೊಟ್ಟಿಲ್ಲ' ಎಂದು ಹೇಳುವ ಮೂಲಕ ಎಚ್.ವಿಶ್ವನಾಥ್ ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟರು.
ಖಾತೆಯನ್ನು ನಿರ್ಲಕ್ಷ್ಯ ಮಾಡಬೇಡಿ
'ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ತುರ್ತಾಗಿ ಶಿಕ್ಷಣ ಇಲಾಖೆಗೆ ಸಚಿವರ ಅಗತ್ಯವಿದೆ' ಎಂದು ಎಚ್.ವಿಶ್ವನಾಥ್ ಹೇಳಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸದ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಯಲ್ಲಿದೆ.
ನನಗೂ ಅದೇ ಸ್ಥಿತಿ ಬರುತ್ತಿತ್ತು
'ನನ್ನ ಅನುಭವವನ್ನು ಸಿದ್ದರಾಮಯ್ಯ ಉಪಯೋಗಿಸಿಕೊಂಡಿಲ್ಲ. ನಾನು ಕಾಂಗ್ರೆಸ್ನಲ್ಲಿ ಇದ್ದಿದ್ದರೆ ರೋಷನ್ ಬೇಗ್ ಅವರ ಸ್ಥಿತಿ ನನಗೂ ಬರುತ್ತಿತ್ತು' ಎಂದು ಎಚ್.ವಿಶ್ವನಾಥ್ ಹೇಳಿದರು.