ನಾಲ್ಕು ನಿಗಮ ಸಾರಿಗೆ ನೌಕರರಿಗೆ ಮಾನವೀಯ ನ್ಯಾಯ ಕೊಟ್ಟ ಶ್ರೀರಾಮುಲು
ಬೆಂಗಳೂರು, ಡಿ. 22: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರ ಕೈಗೊಂಡು ಸೇವೆಯಿಂದ ವಜಾ ಆಗಿದ್ದ ರಾಜ್ಯ ಸಾರಿಗೆ ನಾಲ್ಕು ನಿಗಮಗಳ ನೌಕರರನ್ನು ಮಾನವೀಯ ನೆಲೆಯಲ್ಲಿ ಸೇವೆಗೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ವಜಾ ಆಗಿರುವ ನೌಕರರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದು, ಸಚಿವರ ಈ ಭರವಸೆ ಮಾತು ಹೊರ ಬೀಳುತ್ತಿದ್ದಂತೆ ವಜಾ ಅಗಿರುವ ಸಾರಿಗೆ ನೌಕರರಲ್ಲಿ ಸಂತಸ ಮನೆ ಮಾಡಿದೆ. ಮೇಲಾಧಿಕಾರಿಗಳ ಏಕ ಪಕ್ಷೀಯ ವರದಿಯನ್ನಾಧರಿಸಿ ವಜಾ ಮಾಡಿ ಆದೇಶ ಹೊರಡಿಸಲಾಗಿತ್ತು. 2500 ಕ್ಕೂ ಹೆಚ್ಚು ನೌಕರರು ಕಳೆದ ಎಂಟು ತಿಂಗಳಿನಿಂದ ಕೆಲಸ, ವೇತನ ಇಲ್ಲದೆ ಪರದಾಡಿದ್ದರು.
ರೋಬೋ ಪಾಪಣ್ಣನ ವರದಿಗೆ ಅಮಾಯಕ BMTC ನೌಕರರು ಸೇವೆಯಿಂದ ವಜಾ!
ನ್ಯಾಯ ಕೋರಿ ಹೋರಾಟ ನಡೆಸಿದ್ದನ್ನೇ ಮುಂದಿಟ್ಟುಕೊಂಡು ಸಾರಿಗೆ ನೌಕರರ ಅನ್ನ ಕಿತ್ತುಕೊಂಡಿದ್ದ ಅಧಿಕಾರಿಗಳ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಾರಿಗೆ ಸಚಿವರು ಕೊಟ್ಟಿರುವ ಮರು ಸೇರ್ಪಡೆ ಭರವಸೆಯಿಂದ ಸಾರಿಗೆ ನೌಕರರು ಸಂತಸಗೊಂಡಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ವಜಾ ಆಗಿರುವ ಸಾರಿಗೆ ನೌಕರರು ಮರು ಸೇರ್ಪಡೆಗೆ ಅವಕಾಶ ಮಾಡಿಕೊಟ್ಟಿರುವ ಸಚಿವ ಶ್ರೀರಾಮುಲು ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನೌಕರರ ಮನವಿ
ಲೋಕ ಅದಾಲತ್ ಹೆಸರಿನಲ್ಲಿ ವಿಳಂಬ ಮಾಡದೇ ಸಾರಿಗೆ ನೌಕರರನ್ನು ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಲೋಕ್ ಅದಾಲತ್ ಹೆಸರಿನಲ್ಲಿ ಕಾಲ ಕಳೆಯದೇ ಅಧಿಕಾರಿಗಳು ಕಾಲಮಿತಿಯಲ್ಲಿ ವಜಾ ಆಗಿರುವ ನೌಕರರ ಮನವಿಗಳನ್ನು ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಸಾರಿಗೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅಮಾನತಿಗೆ ಒಳಗಾಗಿರು ನೌಕರರು ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಮತ್ತು ಸೇವೆಯಿಂದ ಅಮಾನತು:
ನ್ಯಾಯ ಕೋರಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ 2500ಕ್ಕೂ ಹೆಚ್ಚು ನೌಕರರು ಸೇವೆಯಿಂದ ವಜಾ ಆಗಿದ್ದರು. ಹತ್ತು ದಿನದಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದ ಸರ್ಕಾರ ಮಾತು ಬದಲಿಸಿತ್ತು. ಎಂಟು ತಿಂಗಳಿನಿಂದ ವೇತನವಿಲ್ಲದೇ ಬೀದಿ ಪಾಲಾಗಿದ್ದ ನೌಕರರನ್ನು ಮರು ಸೇರ್ಪಡೆ ಮಾಡಿಕೊಳ್ಳುವಂತೆ ನೌಕರರು ಮಾಡಿದ್ದ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಇದೀಗ ನಾಲ್ಕು ನಿಗಮದ ನೌಕರರನ್ನು ಮಾನವೀಯ ನೆಲೆಗಟ್ಟಿನಲ್ಲಿ ನೇಮಕಕ್ಕೆ ಸರ್ಕಾರ ಸೂಚಿಸಿದೆ.
ಮುಷ್ಕರ ಮಾಡಿದ್ದು 1.30 ಲಕ್ಷ ನೌಕರರು:
ಸಾರಿಗೆ ನೌಕರರ ಸಿಟ್ಟು ಅಸಹನೇ ಒಂದೇ ಸಲ ಸ್ಫೋಟಗೊಂಡಿತ್ತು. ವೇತನ ಪರಿಷ್ಕರಣೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಪರಿಗಣಿಸಬೇಕು ಎಂಬ ಬಹು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದಲ್ಲಿ 1.30 ಲಕ್ಷ ಸಾರಿಗೆ ನೌಕರರು ಬೀದಿಗೆ ಇಳಿದಿದ್ದರು. ರಾಜ್ಯದೆಲ್ಲೆಡೆ ಸಾರಿಗೆ ವ್ಯವಸ್ಥೆ ಅಯೋಮಯವಾಗಿತ್ತು. ಹದಿನೈದು ದಿನಗಳ ಹೋರಾಟಕ್ಕೆ ಬಿಜೆಪಿ ಸರ್ಕಾರ ಸ್ಪಂದನೆ ಕೊಡಲಿಲ್ಲ. ನಿಮ್ಮ ನ್ಯಾಯಯುತ ಹೋರಾಟದ ಬಗ್ಗೆ ನೋಡೋಣ, ಮೊದಲು ಕರ್ತವ್ಯಕ್ಕೆ ಹಾಜರಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕೋರ್ಟ್ ಹೇಳಿತ್ತು. ಅಲ್ಲಿಗೆ ಅಂತ್ಯಗೊಂಡಿದ್ದ ಹೋರಾಟದ ಅಸಲಿ ಪ್ರತಿಫಲವೇ ಬೇರೆಯದ್ದು ಆಗಿತ್ತು. ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2700 ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಸಾರಿಗೆ ನಿಗಮಗಳು ಆದೇಶ ಮಾಡಿದ್ದವು.
ಮುಗ್ಧರು ಸೇವೆಯಿಂದ ವಜಾ:
ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದವರೂ ಸಹ ವಜಾ ಶಿಕ್ಷೆಗೆ ಗುರಿಯಾಗಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ರೋಬೋ ಪಾಪಣ್ಣ ನೀಡಿದ್ದ ಪಕ್ಷಪಾತ ವರದಿ ಆಧರಿಸಿ ಸಾವಿರಾರು ಮಂದಿ ಬಿಎಂಟಿಸಿ ನೌಕರರನ್ನು ವಜಾ ಮಾಡಲಾಗಿತ್ತು. ರೋಬೋ ಪಾಪಣ್ಣನ ವರದಿಗೆ ಹೊಡೆತ ತಿಂದವರ ಬಗ್ಗೆ ಒನ್ ಇಂಡಿಯಾ ಕನ್ನಡ ವಿಶೇಷ ವರದಿ ಕೂಡ ಪ್ರಕಟಿಸಿತ್ತು. ಇದೀಗ ಬಹುದೊಡ್ಡ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಸೇವೆಗೆ ಸೇರುವ ತವಕದಲ್ಲಿ ನಾಲ್ಕು ನಿಗಮದ ಸಾರಿಗೆ ನೌಕರರು ಖಷಿಯಾಗಿದ್ದಾರೆ.