ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ
ಬೆಂಗಳೂರು ಮೇ 3; ಲಾಕ್ಡೌನ್ ನಿಂದ ತಮ್ಮ ಊರುಗಳಿಗೆ ತೆರಳಲಾಗದೇ ಬೆಂಗಳೂರಿನ ವಿವಿದೆಡೆ ತೊಂದರೆಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರವರ ಊರಿಗೆ ಕಳಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.
ನಿನ್ನೆ 120 ಬಸ್ ಗಳು ಸುಮಾರು 3600 ಜನರನ್ನು ತುಂಬಿಕೊಂಡು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ವಿವಿದೆಡೆ ಪ್ರಯಾಣ ಬೆಳಸಿದ್ದವು. ಇಂದು ಬೆಳಿಗ್ಗೆ ಕೂಡ ಕಾರ್ಮಿಕರು ಅವರವರ ಊರಿಗೆ ತೆರಳಲು ಕೊರೊನಾ ಭಯ ಬಿಟ್ಟು, ಸಾಮಾಜಿಕ ಅಂತರ ಮರೆತು ಮೆಜೆಸ್ಟಿಕ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನೂಕು ನುಗ್ಗಲು ನಡೆಸಿದ್ದಾರೆ.
ಹೊರ ರಾಜ್ಯದಲ್ಲಿರುವ ಕರ್ನಾಟಕದ ಕಾರ್ಮಿಕರಿಗಾಗಿ ಸಹಾಯವಾಣಿ
ಎಲ್ಲರಿಗೂ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದರೂ ಜನ ಮಾತ್ರ, ಸಾಮಾಜಿಕ ಅಂತರ ಮರೆತು ಬಸ್ ಗಳಿಗಾಗಿ ನೂಕು ನುಗ್ಗಲು ನಡೆಸಿದ್ದಾರೆ.
ಬಸ್ ಟರ್ಮಿನಲ್ ಬದಲಾವಣೆ
ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಗೆ ತಂಡೋಪತಂಡವಾಗಿ ಜನ ಬರುತ್ತಿರುವುದು ಕಂಡು ಬರುತ್ತಿದೆ.
ಹೀಗಾಗಿ ಇಂದು ಬಿಎಂಟಿಸಿ, ಕೆಎಸ್ ಆರ್ ಟಿಸಿ ಟರ್ಮಿನಲ್ 1 ರಿಂದ ಬಸ್ ಸೇವೆಯನ್ನು ಆರಂಭಿಸಲಾಗಿದೆ. ನಿನ್ನೆ ಕೆಎಸ್ ಆರ್ ಟಿಸಿ ಟರ್ಮಿನಲ್ 3 ರಿಂದ ಮಾತ್ರ ಬಸ್ ಸಂಚಾರ ಮಾಡಿದ್ದವು. ಜಾಗ ಕಮ್ಮಿಯಾದ ಕಾರಣ ಸಾಮಾಜಿಕ ಅಂತರ ಪಾಲನೆಯಾಗಿರಲಿಲ್ಲ. ಈ ಹಿನ್ನಲೆ ಇಂದು ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಟರ್ಮಿನಲ್ 1 ರಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಬಲ್ಕ್ ಬುಕ್ಕಿಂಗ್ ಸಹ ರದ್ದು, ಇಟಿಎಂ ಮೆಷಿನ್ ನಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ.
ಕಾರ್ಮಿಕರು ಸಹಕರಿಸಬೇಕು
ಕೆ ಎಸ್ ಆರ್ ಟಿ ಸಿ ಯು ಇಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ, ಕಾರ್ಮಿಕರಿಗಾಗಿ ಕೆಂಪೇಗೌಡ ಬಸ್ ನಿಲ್ದಾಣ ( ಮೆಜೆಸ್ಟಿಕ್) ನಿಂದ ಬಸ್ಸುಗಳನ್ನು ಕಾರ್ಯಚರಣೆಯನ್ನು , ಬಿ ಎಂ ಟಿ ಸಿ ಬಸ್ ನಿಲ್ದಾಣ ( ಮೆಜೆಸ್ಟಿಕ್) ಗೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಈ ಬಸ್ ವ್ಯವಸ್ಥೆಯು (ಕೆಂಪು ವಲಯ ಹೊರತು ಪಡಿಸಿ) ಬೇರೆ ಸ್ಥಳಗಳಿಗೆ ಕಾರ್ಯಚರಣೆಯಾಗಲಿದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು. ಬಸ್ಸುಗಳ ನಿರಂತರ ಪೂರೈಕೆ ಇರುತ್ತದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಬಸ್ಸುಗಳಿಗೆ ತೆರಳುವ ಮುನ್ನ ಸೂಕ್ತ ಆರೋಗ್ಯ ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಬಸ್ಸುಗಳ ನಿರ್ಗಮನದ ಮಾಹಿತಿಯನ್ನು ಸಂಬಂದಪಟ್ಡ. ನಿಗಮದ ವಿಭಾಗಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ. ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಇಳಿಸುವುದಿಲ್ಲ, designated ಬಸ್ ನಿಲ್ದಾಣಗಳಲ್ಲಿಯೇ ಇಳಿಸಲಾಗುತ್ತಿದ್ದು, ಅಲ್ಲಿ ಅವರಿಗೆ ಮತ್ತೊಮ್ಮೆ ಜಿಲ್ಲಾಡಳಿತದಿಂದ ಆರೋಗ್ಯ ತಪಾಸಣೆ ನಡೆಸಿ Home quarantine ಗೆ ಸಂಬಂಧಪಟ್ಡಂತೆ ಮಾಹಿತಿ ನೀಡಲಾಗುತ್ತಿದೆ. ಇಂದು ಪ್ರತಿ ಗಂಟೆಗೊಮ್ಮೆ ಬಸ್ ಕಾರ್ಯಚರಣೆಯ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ. ಸಹಕರಿಸಲು ಕೋರಿದೆ ಎಂದು ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದರ ನೋಡಿ ಕಾರ್ಮಿಕರು ಕಂಗಾಲು
ನಿನ್ನೆ 120 ಬಸ್ಗಳು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸಿವೆ. ಪ್ರತಿ ಬಸ್ನಲ್ಲಿ 30 ಪ್ರಯಾಣಿಕರಂತೆ 3,600 ಜನ ಪ್ರಯಾಣ ಮಾಡಿದ್ದಾರೆ.
ಕಿಲೋ ಮೀಟರ್, ಟೋಲ್ ಶುಲ್ಕ ಎಲ್ಲವನ್ನು ಸೇರಿಸಿ ಒಂದೊಂದು ಜಿಲ್ಲೆಗೆ ಒಂದು ದರವನ್ನು ಕೆಎಸ್ಆರ್ಟಿಸಿ ನಿಗದಿ ಮಾಡಿದೆ. ಬೀದರ್ಗೆ ತೆರಳುವ ಬಸ್ ಬುಕ್ ಮಾಡಲು ₹59,510, ಕಲಬುರ್ಗಿಗೆ ₹48,580, ವಿಜಯಪುರಕ್ಕೆ ₹45,720 ಹೀಗೆ ಒಂದೊಂದು ದರವಿದೆ. ರಾಮನಗರಕ್ಕೆ ಪ್ರಯಾಣಿಸಲು ಅತಿ ಕಡಿಮೆ (₹3,900) ದರವಿದೆ.
ಬೇರೆ ಕ್ಷೇತ್ರದವರೂ ಬಸ್ ನಿಲ್ದಾಣಕ್ಕೆ ದಾಂಗುಡಿ
ಸರ್ಕಾರ ವಲಸೆ ಕಾರ್ಮಿಕರನ್ನು ಕಳುಹಿಸಲು ಬಸ್ ವ್ಯವಸ್ಥೆ ಮಾಡಿದೆ. ಆದರೆ, ಕಾರ್ಮಿಕರ ಸೋಗಿನಲ್ಲಿ ಬೇರೆ ಬೇರೆ ಕ್ಷೇತ್ರದ ಉದ್ಯೋಗಿಗಳು ತಮ್ಮ ಊರಿಗೆ ತೆರಳಲು ಬಸ್ ಗಾಗಿ ತಡಕಾಡುತ್ತಿರಯವುದು ಕಂಡು ಬಂದಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ.