ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಶಾಸಕರೇ ದೇಣಿಗೆ ನೀಡಲಿ!
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಅಧಿಕಾರದ ಅವಧಿಯಲ್ಲಿ ನಿರ್ಮಾಣಗೊಂಡ ವಿಧಾನಸೌಧಕ್ಕೆ ವಜ್ರಮಹೋತ್ಸವದ ಸಂಭ್ರಮ. ಆದರೆ, ವಜ್ರಮಹೋತ್ಸವ ಎನ್ನುವುದಕ್ಕಿಂತ ಹೆಚ್ಚಾಗಿ, ಈ ಸವಿನೆನಪಿಗಾಗಿ ಸರಕಾರ ಮಾಡಲು ಹೊರಟಿರುವ ದುಂದುವೆಚ್ಚ ಸದ್ಯ ಭಾರೀ ಸುದ್ದಿಯಲ್ಲಿದೆ.
ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
ಅಂದು ಸುಮಾರು 1.75 ಕೋಟಿ ರೂಪಾಯಿ ವೆಚ್ಚದಲ್ಲಿ ವಿಧಾನಸೌಧ ನಿರ್ಮಾಣಗೊಂಡಿತ್ತು. ಈಗ, ಅದರ ವಜ್ರಮಹೋತ್ಸವ ಆಚರಣೆಗೆ ಹಣಕಾಸು ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆ 26.87 ಕೋಟಿ ರೂಪಾಯಿ. ಸಾರ್ವಜನಿಕರ ತೆರಿಗೆ ದುಡ್ಡು ಎಂದರೆ ಜನಪ್ರತಿನಿಧಿಗಳಿಗೆ 'ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ' ಆಗೋಯ್ತಾ..
ವಿಧಾನಸೌಧ ವಜ್ರಮಹೋತ್ಸವ, ಶಾಸಕರಿಗೆ ಚಿನ್ನದ ಬಿಸ್ಕತ್ ಭಾಗ್ಯ?
ಸರಕಾರದ ಕೆಲಸ, ದೇವರ ಕೆಲಸ ಎನ್ನುವ ಫಲಕ ವಿಧಾನಸೌಧದಲ್ಲಿದೆ. ಹೀಗಿರುವಾಗ, ಭಕ್ತರು ದೇವಾಲಯಕ್ಕೆ ದೇಣಿಗೆ ನೀಡುವಂತೆ, ಜನಪ್ರತಿನಿಧಿಗಳೇ ದುಡ್ಡು ಹಾಕಿ ವಜ್ರಮಹೋತ್ಸವ ಯಾಕೆ ಆಚರಿಸಬಾರದು ಎನ್ನುವುದು ಇಲ್ಲಿ ಪ್ರಶ್ನೆ ಮತ್ತು ಸಲಹೆ.
ವಿಧಾನಸೌಧ ನಮಗೆ ದೇವಸ್ಥಾನವಿದ್ದಂತೆ ಎಂದು ಜನಪ್ರತಿನಿಧಿಗಳು ಹೇಳುವುದು ಹೊಸದೇನಲ್ಲ. ಅವರ ಹೇಳಿಕೆಗಳು ಬರೀ ಬಾಯಿ ಮಾತಿಗಾ ಅಥವಾ ಕಾರ್ಯರೂಪಕ್ಕೆ ಬರುತ್ತಾ ಎನ್ನುವ ಜನಸಾಮಾನ್ಯರ ಸಂದೇಹ ಬಗೆಹರಿಸಲು ಶಾಸಕರಿಗೆ ಇದೊಂದು ಒಳ್ಳೆಯ ಅವಕಾಶ.
ಹಾಗಾಗಿ, ಪಕ್ಷಬೇಧ ಮರೆತು ಎಲ್ಲಾ ಶಾಸಕರು ಒಂದೊಂದು ಕೋಟಿ ದೇಣಿಗೆ ನೀಡಿದರೆ (ಶಾಸಕರಿಗೆ ಇದೊಂದು ಲೆಕ್ಕನಾ).. ಸಂಗ್ರಹವಾಗುವ 225 ಕೋಟಿ ರೂಪಾಯಿಯಲ್ಲಿ, ವಜ್ರಮಹೋತ್ಸವದ ಸವಿನೆನಪಿಗಾಗಿ ಚಿನ್ನದ ಬಿಸ್ಕತ್, ಬೆಳ್ಳಿತಟ್ಟೆ ಯಾಕೆ.. ವಜ್ರದಲ್ಲೇ ಎಲ್ಲಾ ಶಾಸಕರ ತುಲಾಭಾರ ಮಾಡಿಸಿಬಿಡಬಹುದು. ಮುಂದೆ ಓದಿ
ಕೆಂಗಲ್ ಹನುಮಂತಯ್ಯನವರಿಗೂ ಶ್ರದ್ದಾಂಜಲಿ ನೀಡಿದಂತಾಗುತ್ತದೆ
ಇಂದು ನಾವೇನಾಗಿದ್ದೀವೋ, ಏನು ಹೆಸರು, ಹಣ ಸಂಪಾದಿಸಿದ್ದೇವೋ, ನಮಗೆಲ್ಲಾ ಐಡೆಂಟಿಟಿ ಕೊಟ್ಟ ವಿಧಾನಸೌಧದ ಋಣ ತೀರಿಸಲು ತಾವೇ ದೇಣಿಗೆ ನೀಡಿ ವಜ್ರಮಹೋತ್ಸವ ಆಚರಿಸಿಕೊಂಡರೆ ಹೇಗೆ ಎಂದು ಶಾಸಕರು ಆತ್ಮವಿಮರ್ಶೆ ಮಾಡಿಕೊಂಡು ಕಾರ್ಯರೂಪಕ್ಕೆ ಇಳಿದರೆ, ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರಿಗೂ ಒಂದೊಳ್ಳೆ ಶ್ರದ್ದಾಂಜಲಿ ನೀಡಿದಂತಾಗುತ್ತದೆ.
ವಿಧಾನಸೌಧದ ಘನತೆಗೆ ತಕ್ಕಂತೆ ಕಾರ್ಯಕ್ರಮ ಆಯೋಜನೆ
ಇದೇ ತಿಂಗಳು 25,26ರಂದು ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಬರುತ್ತಿದ್ದಾರೆ. ವಿಧಾನಸೌಧದ ಘನತೆಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಬೇಕು ಎನ್ನುವುದು ಸಚಿವಾಲಯದ ನಿಲುವು. ರಾಷ್ಟ್ರಪತಿಗಳು ಬರುತ್ತಿದ್ದಾರೆಂದು ಕೋಟಿ.. ಕೋಟಿ ಹಣ ಪೋಲು ಮಾಡಬೇಕೆಂದು ಇದೆಯಾ ಎನ್ನುವುದಿಲ್ಲಿ ಪ್ರಶ್ನೆ.
ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳ ಘನತೆ
ವಜ್ರಮಹೋತ್ಸವದ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಿದರೆ ತಪ್ಪೇನು ಎನ್ನುವುದು ಕೆಲವು ಶಾಸಕರ, ಸಚಿವರ ವಾದವಂತೆ, ತೆರಿಗೆದಾರರ ಹಣದಿಂದ ದೇಣಿಗೆ ತೆಗೆದುಕೊಳ್ಳುವ ಬದಲು, ಶಾಸಕರೇ ಈ ಶುಭ ಸಂದರ್ಭದಲ್ಲಿ ವಿಧಾನಸೌಧದ ಇನ್ನಷ್ಟು ಅಭಿವೃದ್ದಿ ಕಾಮಗಾರಿಗೆ ಅಥವಾ ವಜ್ರಮಹೋತ್ಸವಕ್ಕೆ ದೇಣಿಗೆ ನೀಡಿದರೆ, ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳ ಘನತೆ ಇನ್ನಷ್ಟು ಎತ್ತರಕ್ಕೆ ಏರುತ್ತದೆ.
ಐವತ್ತು ಸಾವಿರ ಮೌಲ್ಯದ ಚಿನ್ನದ ಬಿಸ್ಕತ್
ವಜ್ರಮಹೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ವಿಧಾನಸೌಧ ಕಾರ್ಯಾಲಯ ನಿರ್ಧರಿಸಿತ್ತಂತೆ. ಶಾಸಕರು ಮತ್ತು ಸಂಸದರಿಗೆ ಐವತ್ತು ಸಾವಿರ ಮೌಲ್ಯದ ಚಿನ್ನದ ಬಿಸ್ಕತ್ ಮತ್ತು ಸಿಬ್ಬಂದಿಗಳಿಗೆ ಐದು ಸಾವಿರ ಮೌಲ್ಯದ ಬೆಳ್ಳಿತಟ್ಟೆ ನೀಡಲು ತೀರ್ಮಾನಿಸಲಾಗಿತ್ತಂತೆ.
ಚಿನ್ನದ ಬಿಸ್ಕತ್ತೂ ಇಲ್ಲ, ಬೆಳ್ಳಿತಟ್ಟೆನೂ ಇಲ್ಲ
ಇಷ್ಟೂ ಸಾಲದು ಎನ್ನುವಂತೆ ಪಂಚತಾರಾ ಹೊಟೇಲ್ ನಲ್ಲಿ ಊಟ, ಸಂಗೀತ ಸಂಜೆ ಜೊತೆಗೆ ಇದನ್ನೆಲ್ಲಾ ಆಯೋಜಿಸಲು ದೆಹಲಿಯ ಸಂಸ್ಥೆಯೊಂದಕ್ಕೆ ಕಾಂಟ್ರ್ಯಾಕ್ಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಯಾವಾಗ ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಯಿತೋ, ಚಿನ್ನದ ಬಿಸ್ಕತ್ತೂ ಇಲ್ಲ, ಬೆಳ್ಳಿತಟ್ಟೆನೂ ಇಲ್ಲ ಎಂದು ಸ್ಪೀಕರ್ ಕೋಳಿವಾಡ್ ಸಾಹೇಬ್ರು ಮಾತು ಬದಲಾಯಿಸಿದ್ದಾರೆ.
ಯಾವ ನೆನಪಿನ ಕಾಣಿಕೆಯನ್ನು ನೀಡಲಾಗುವುದಿಲ್ಲ ಎಂದು ಸಿಎಂ
ಕಾರ್ಯಕ್ರಮವನ್ನು ಒಂದು ದಿನಕ್ಕೆ ನಿಗದಿ ಮಾಡಿ, 10 ಕೋಟಿ ವೆಚ್ಚದಲ್ಲಿ ಮುಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಹಿಂಡಿದ ನಂತರ, ಸಚಿವಾಲಯ ವಜ್ರಮಹೋತ್ಸವದ ಕಾರ್ಯಕ್ರಮದ ರೂಪುರೇಷೆಗಳನ್ನು ರೀವರ್ಕ್ ಮಾಡುತ್ತಿದೆ. ತಾಜಾ ಮಾಹಿತಿಯ ಪ್ರಕಾರ ಯಾವ ನೆನಪಿನ ಕಾಣಿಕೆಯನ್ನು ನೀಡಲಾಗುವುದಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ. ಈ ಹತ್ತು ಕೋಟಿಯನ್ನೂ ಸಾರ್ವಜನಿಕರ ತೆರಿಗೆ ದುಡ್ಡಿನಿಂದ ಖರ್ಚು ಮಾಡುವ ಬದಲು, ಶಾಸಕರಿಂದಲೇ ದೇಣಿಗೆ ಸಂಗ್ರಹಿಸುವುದು ಸ್ಪೀಕರ್ ಅವರಿಗೆ ದೊಡ್ಡ ಕೆಲಸವೇನೂ ಅಲ್ಲ, ಒಟ್ಟಿನಲ್ಲಿ ಜನರ ದುಡ್ಡನ್ನು ಬೇಕಾಬಿಟ್ಟಿ ಪೋಲು ಮಾಡಬಾರದು ಎನ್ನುವ ಮನಸ್ಸಿರಬೇಕು.