ನೀವೇ ನನ್ನನ್ನು ಹುಡುಕಿಕೊಂಡು ಬರ್ತೀರಿ ಅಂದ್ರು ಹುಚ್ಚ ವೆಂಕಟ್!
ಬೆಂಗಳೂರು, ಜೂನ್ 1: ತಮ್ಮ ಸಿಟ್ಟು, ಆಕ್ರೋಶ, ಸಂತೋಷ, ನೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳುವ 'ಯೂಟ್ಯೂಬ್ ಸ್ಟಾರ್' ಹುಚ್ಚ ವೆಂಕಟ್, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ ಬಳಿಕ ಮತ್ತೆ ವಿಡಿಯೋದಲ್ಲಿ ನೋವು ಹಂಚಿಕೊಂಡಿದ್ದಾರೆ.
ಪ್ರತಿ ಬಾರಿಯೂ ಭಾವೋದ್ವೇಗದಿಂದ ಮಾತನಾಡುವ ವೆಂಕಟ್, ಈ ವಿಡಿಯೋದಲ್ಲಿ ಸಂಯಮದಿಂದ ಮಾತನಾಡಿದ್ದಾರೆ. ತಮ್ಮ ಸೋಲಿಗೆ ಬೇಸರವಿಲ್ಲ. ಯಾರಿಗೂ ಹಣ ಹಂಚಲು ಹೋಗಿಲ್ಲ ಎಂದಿರುವ ಅವರು, ತಮಗೆ ಮತ ಹಾಕಿರುವವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜರಾಜೇಶ್ವರಿ ನಗರ ಫಲಿತಾಂಶ : ಪಕ್ಷೇತರರಲ್ಲಿ ವೆಂಕಟ್ ಅವರೇ ಬೆಸ್ಟ್
ತಮ್ಮನ್ನು ಗೆಲ್ಲಿಸದೆಯೇ ಮಾಡಿರುವ ತಪ್ಪು ನಿಮಗೆ ಮುಂದೆ ಅರಿವಾಗಲಿದೆ. ಆಗ ನೀವೇ ತನ್ನನ್ನು ಹುಡುಕಿಕೊಂಡು ಬರುತ್ತೀರ. ತಾನು ಮಾಡುತ್ತಿರುವ ಸಮಾಜಮುಖಿ ಕೆಲಸಗಳಿಂದ ಎರಡು ತಿಂಗಳು ದೂರವಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಫಲಿತಾಂಶದ ಬಳಿಕ ನೊಂದು ವಿಡಿಯೋದಲ್ಲಿ ಮಾತನಾಡಿರುವ ಹುಚ್ಚ ವೆಂಕಟ್ ಮಾತಿನ ಕೆಲವು ಝಲಕ್ಗಳು ಇಲ್ಲಿವೆ.
ಹುಚ್ಚ ವೆಂಕಟ್ ಸೇನೆಗೆ ಸೇರಿಕೊಳ್ಳಿ
ಯಾರು ನನಗೆ ಓಟ್ ಹಾಕಿದ್ದೀರೋ ಅವರು ಹುಚ್ಚ ವೆಂಕಟ್ ಸೇನೆ ಸೇರಿಕೊಳ್ಳಿ. ಯಾಕೆಂದರೆ ಕೆಲವೊಂದನ್ನು ಪ್ರೀತಿಯಿಂದ, ಇನ್ನು ಕೆಲವೊಂದನ್ನು ಮಾತಿನಿಂದ ಹೇಳಬೇಕು. ಆದರೆ ಎರಡೂ ಕೇಳಿಲ್ಲ ಎಂದರೆ, ಯಾವ ರೀತಿ ಹೇಳಬೇಕು ಎನ್ನುವುದು ಹುಚ್ಚ ವೆಂಕಟ್ ಸೇನೆ ಮೂಲಕ ಗೊತ್ತಾಗುತ್ತದೆ.
ಎನಿವೇ, ಯಾರು ಓಟು ಹಾಕಿದ್ದೀರೋ ಐ ಲವ್ ಯು ಕಣ್ರೋ. ಯಾರು ಹೆಣ್ಣಮಕ್ಕಳು ಓಟು ಹಾಕಿದ್ದೀರೋ ಥ್ಯಾಂಕ್ಸ್ ಅಮ್ಮಾ. ಮಾಧ್ಯಮದವರು ಪತ್ರಕರ್ತರಿಗೂ ನನ್ನ ಜತೆ ಇದ್ದಿರಿ, ನನ್ನ ಪರವಾಗಿ ಇದ್ರಿ ಎನ್ನುವುದಕ್ಕಿಂತ ನ್ಯಾಯದ ಪರವಾಗಿ ಇದ್ರಿ.
ಆರ್ಆರ್ನಗರ ಚುನಾವಣೆ: ಹುಚ್ಚವೆಂಕಟ್ ಸೋಲಿಗೆ 5 ಕಾರಣಗಳು
800 ಜನರಿಗೆ ಗೊತ್ತಾಗಿದೆ
ನಿಮ್ಮನ್ನು ಬಹಳ ಪ್ರೀತಿಸುತ್ತೇನೆ. ನಾನು ಸೋತಿಲ್ಲ. ನಾನು ಯಾರನ್ನೂ ಕೊಂಡುಕೊಂಡಿಲ್ಲ. 500, 1000 ರೂ. ಕೊಟ್ಟಿಲ್ಲ, ಡ್ರಿಂಕ್ಸ್, ಕುಕ್ಕರ್ ಕೊಟ್ಟಿಲ್ಲ. ನನ್ನನ್ನು ನಾನು ಮಾರಿಕೊಂಡಿಲ್ಲ. ನನಗೆ ಓಟು ಹಾಕಿದ 800 ಜನರನ್ನೂ ನಾನು ಕೊಂಡುಕೊಂಡಿಲ್ಲ ಆ 800 ಜನರಿಗೆ ಗೊತ್ತಾಗಿದೆ ಏನು ಒಳ್ಳೆಯದು, ಯಾರು ಒಳ್ಳೆಯವರು ಎಂದು.
ಎಕ್ಕಡವೂ ಡ್ಯಾನ್ಸ್ ಮಾಡೊಲ್ಲ
ಯಾರು ಒಳ್ಳೆಯವರು ಎಂದು ಮಿಕ್ಕಿದ ಜನರಿಗೆ ಗೊತ್ತಾಗಲಿಲ್ಲ ಎಂದರೆ ನಾನೇನು ಮಾಡಲಿ. ನಾನು ಬೇರೆಯವರ ರೀತಿ ಬಂದು ಭಿಕ್ಷೆ ಬೇಡಬೇಕಾ? ಕೈಮುಗಿಯಬೇಕಾ? ನಾನೇಕೆ ಮುಗಿಬೇಕು? ನಾನು ಕೆಲಸ ಮಾಡೋನು. ಯಾರಾದರೂ ದುಡ್ಡು ಹೊಡೀಬೇಕಾದರೆ ನಿಮಗೆ ಕೈ ಮುಗಿತಾರೆ, ಕಾಲನ್ನೂ ಮುಗೀತಾರೆ. ನಾನೇಕೆ ಅದನ್ನು ಮಾಡಲಿ. ಯಾರನ್ನೋ ಕರೆದುಕೊಂಡು ಬಂದು ತೋರಿಸಿ ನನಗೆ ಓಟು ಹಾಕಿ ಎನ್ನಬೇಕಾ? ತಮಟೆ ಹೊಡೆಯಬೇಕಾ? ಡ್ಯಾನ್ಸ್ ಮಾಡಿಸಬೇಕಾ? ನನ್ನ ಎಕ್ಕಡ ಕೂಡ ಡ್ಯಾನ್ಸ್ ಮಾಡ್ಸೊಲ್ಲ. ಮಾಡ್ಸಿಲ್ಲ.
ಜನರೂ ಕೆಟ್ಟು ಹೋಗಿದ್ದಾರೆ
ನಾನು ಸೋತಿಲ್ಲ; ಸೋತಿರುವುದು ಜನರು. ಇಷ್ಟು ದಿನ ರಾಜಕೀಯ ವ್ಯಕ್ತಿಗಳು ಕೆಟ್ಟವರು ಎಂದು ಅವರ ವಿರುದ್ಧ ಹೋಗುತ್ತಿದ್ದೆ. ಒಂದು ಅರ್ಥವಾಯ್ತು. ರಾಜಕೀಯದ ವ್ಯಕ್ತಿಗಳು ಮಾತ್ರವಲ್ಲ. ಜನರೂ ಕೆಟ್ಟುಹೋಗಿದ್ದಾರೆ. ಜನರೂ ಐನೂರು- ಸಾವಿರ ಸಿಕ್ಕರೆ, ಡ್ರಿಂಕ್ಸ್ ಸಿಕ್ಕರೆ ರಾಜ್ಯ ಹಾಳು ಮಾಡಲು ರೆಡಿ ಆಗಿದ್ದಾರೆ. ಮಾರಿಕೊಳ್ಳಿ. ಆದರೆ ಒಳ್ಳೆಯವರನ್ನು ಮಾರುವ ಅಧಿಕಾರ ನಿಮಗಿಲ್ಲ. ನಿಮ್ಮನ್ನು ನೀವು ಮಾರಿಕೊಳ್ಳಿ. ಆಲ್ರೆಡಿ ಮಾರಿಕೊಂಡಿದ್ದೀರ.
ಎರಡು ತಿಂಗಳು ತಲೆ ಹಾಕೊಲ್ಲ
ನನಗೆ ನ್ಯಾಯ ಸಿಕ್ಕಿಲ್ಲ. ನನ್ನ ಬೆಲೆ ಯಾವಾಗ ಅರಿವಾಗುತ್ತದೆ ಗೊತ್ತಾ? ಯಾವಾಗ ನಾವು ಕೆಲಸ ಮಾಡುವುದು ನಿಲ್ಲಿಸುತ್ತೀವೋ ಆಗ ಗೊತ್ತಾಗುತ್ತದೆ.
ಹುಚ್ಚ ವೆಂಕಟ್ ಇನ್ನು ಮುಂದೆ ಎರಡು ತಿಂಗಳು ಸಮಾಜದ ವಿಚಾರಕ್ಕೆ ತಲೆ ಹಾಕುವುದಿಲ್ಲ. ಎರಡು ತಿಂಗಳಲ್ಲಿ ಸಮಾಜ ಏನಾಗುತ್ತದೆ? ಕರ್ನಾಟಕ ಏನಾಗುತ್ತದೆ ನೋಡಿ. ನಾನು ಯಾರು ಅಲ್ವಾ ತಲೆ ಹಾಕಿಲ್ಲ ಅಂದ್ರ? ಏನಾಗುತ್ತದೆ? ಏನೂ ಆಗುವುದಿಲ್ಲ. ನಡೆಯೋದು ನಡೆಯುತ್ತೆ ಅಲ್ವಾ? ಯಾವ ರೀತಿ ನಡೆಯುತ್ತದೆ ನೋಡಿ. ಆಗ ಹುಚ್ಚ ವೆಂಕಟ್ನ ನೆನೆಸಿಕೊಳ್ಳುತ್ತೀರ. ಹುಚ್ಚ ವೆಂಕಟ್ನನ್ನು ನಾವು ಗೆಲ್ಲಿಸಿಲ್ಲ ಎಂದಲ್ಲ. ಹುಚ್ಚ ವೆಂಕಟ್ ಮಾತು ಕೇಳಿಲ್ಲ ಎಂಬ ಪಶ್ಚಾತ್ತಾಪ ನಿಮ್ಮಲ್ಲಿ ಇರುತ್ತದೆ. ನೀವೆ ಹಿಂದೆ ಬರ್ತೀರ. ಆದರೆ ನಾನು ವಾಪಸ್ ಬರ್ತೀನ ನಿಮ್ಮ ಹತ್ತಿರ? ಗೊತ್ತಿಲ್ಲ.
ಎಷ್ಟೋ ಜನರಿಗೆ ದುಡ್ಡುಕೊಟ್ಟಿದ್ದೀನಿ
ಈ ಜನ, ಸಮಾಜಕ್ಕಾಗಿ ಇಷ್ಟು ವರ್ಷ ದುಡಿದು ದುಡಿದು, ಮನೆ ಮರೆತೆ, ಇಷ್ಟದ ಸಿನಿಮಾಗಳನ್ನು ಮರೆತೆ. ಪ್ರಾಣವನ್ನು ಒತ್ತೆ ಇಟ್ಟೆ. ನಮ್ಮ ಅಪ್ಪನ ಪ್ರಾಣ ಒತ್ತೆ ಒಟ್ಟೆ. ನಾನು ಬರೀ ಮಾತುಗಳನ್ನು ಕೊಟ್ನಾ. ದುಡ್ಡು ಕೊಡಲಿಲ್ಲವಾ ಯಾರಿಗೂ? ಸರ್ಕಾರದ ದುಡ್ಡು ಕೊಟ್ನಾ? ನಮ್ಮಪ್ಪನ ಆಸ್ತಿ ಮಾರಿ ದುಡ್ಡುಕೊಟ್ಟೆ ತಾನೆ?
ನನ್ನ ದುಡ್ಡುಕೊಟ್ಟೆ. ಇವತ್ತು ಹುಚ್ಚ ವೆಂಕಟ್ ಎಷ್ಟು ಜನಕ್ಕೆ ದುಡ್ಡುಕೊಟ್ಟಿದ್ದಾನೆ. ಇಲ್ಲಿ ನಿಮ್ಮ ದುಡ್ಡು ನಿಮಗೆ ಕೊಡೋಕೆ ಅವರ ಮನೆಯಿಂದ ದುಡ್ಡು ಕೊಡೋ ಹಾಗೆ ಆಡ್ತಾರೆ. ಅಥವಾ ಅವರು ಫ್ರೀಯಾಗಿ ನಿಮಗೆ ಕೆಲಸ ಮಾಡೋ ಹಾಗೆ ಆಡ್ತಾರೆ. ಅವರಿಗೆ ಸಂಬಳ ಸಿಗೊಲ್ವಾ? ಸಂಬಳದೊಂದಿಗೆ ಏನೆಲ್ಲ ಬರುತ್ತದೆ ಗೊತ್ತಾ?
ಜನ ತಪ್ಪು ಮಾಡಿದ್ದಾರೆ
ನಾನು ಸೋತಿಲ್ಲ. ಸೋತಿರೋದು ನೀವು. ನನಗೆ ನೋವಾಗುತ್ತಿರುವುದು ಇಲ್ಲಿನ ಜನ ತಪ್ಪು ಮಾಡಿದ್ದಾರೆ ಎಂದು. ಒಬ್ಬರು ಇಬ್ಬರು ತಪ್ಪು ಮಾಡಿದರೆ ಹೊಡೆದು, ಬೈದು ಹೇಳಬಹುದು. ಇಲ್ಲಿ ಲಕ್ಷಗಟ್ಟಲೆ ಜನ ತಪ್ಪು ಮಾಡಿದ್ದಾರೆ. ಮುಂದೆ ಏನು ಮಾಡಬೇಕು ಎನ್ನುವುದು ನಾನು ಯೋಚನೆ ಮಾಡ್ತೀನಿ. ಆದರೆ ಎರಡು ತಿಂಗಳು ಈ ಹುಚ್ಚ ವೆಂಕಟ್ ಸಮಾಜದ ಕಡೆ ತಲೆಹಾಕೊಲ್ಲ.
ಎನಿವೇ ಚೆನ್ನಾಗಿರಿ. ನಿಮ್ಮನ್ನು ಬೈಯೊಲ್ಲ. ಏಕೆಂದರೆ ಒಂದು ದಿನ ನೀವು ವಾಪಸ್ ಬರ್ತೀರ. ಆ ದಿನಕ್ಕೆ ನಾನು ಕಾಯೊಲ್ಲ. ಬೇರೆ ರಾಜ್ಯದವರು ಕಾಯುತ್ತಾರೆ.