ನನ್ ಮಗಂದ್ ವೆಂಕಟ್ ಬುಧವಾರ ಜೈಲಿನಿಂದ ಬಿಡುಗಡೆ?
ಬೆಂಗಳೂರು, ಡಿಸೆಂಬರ್ 01 : ನಟ, ನಿರ್ದೇಶಕ ಹುಚ್ಚ ವೆಂಕಟ್ ಬುಧವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಕ್ಕಲಿಗರ ಹಿತಕರಕ್ಷಣಾ ಸೇನೆಯ ಅಧ್ಯಕ್ಷರು ವೆಂಕಟ್ ಬಿಡುಗಡೆಗೆ ಅಗತ್ಯವಿರುವ ಶ್ಯೂರಿಟಿ ಸಲ್ಲಿಸುವುದಾಗಿ ಹೇಳಿದ್ದಾರೆ.
ನವೆಂಬರ್ 25ರಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ವೆಂಕಟ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ, ಶ್ಯೂರಿಟಿ ಸಲ್ಲಿಸದಿರುವ ಕಾರಣ ಅವರು ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. [ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಹುಚ್ಚಾಟ ನಡೆಸಿದ ವೆಂಕಟ್.!]
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಒಕ್ಕಲಿಗರ ಹಿತಕರಕ್ಷಣಾ ಸೇನೆಯ ಅಧ್ಯಕ್ಷರಾದ ಮಂಜೇಗೌಡ ಅವರು, 'ವೆಂಕಟ್ಗೆ ಶ್ಯೂರಿಟಿ ನೀಡುತ್ತೇನೆ, ಬುಧವಾರ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, ವೆಂಕಟ್ ಅವರನ್ನು ಬಿಡುಗಡೆ ಮಾಡಿಸುತ್ತೇನೆ' ಎಂದು ಹೇಳಿದರು. [ಜಾಮೀನು ಪಡೆದ ವೆಂಕಟ್ ]
ಬಂಧನವೇಕೆ? : ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್ನನ್ನು ನವೆಂಬರ್ 19ರಂದು ಬಂಧಿಸಿದ್ದರು. ಮೊದಲು ವೆಂಕಟ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ, ಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. [ವೆಂಕಟ್ ಬಂಧನ]
ಗಾಯಗೊಂಡ ವೆಂಕಟ್?: ತನಗೆ ಯಾರೂ ಶ್ಯೂರಿಟಿ ನೀಡಿ ಬಿಡಿಸಿಕೊಂಡು ಹೋಗಿಲ್ಲ ಎಂದು ಕೋಪಗೊಂಡ ವೆಂಕಟ್ ಸೋಮವಾರ ಕಾರಾಗೃಹದ ಸರಳುಗಳಿಗೆ ಹಣೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಇವೆ.