ಬಸನಗೌಡ ಪಾಟೀಲ ಯತ್ನಾಳಗೆ ಆರು ತಿಂಗಳು ಶಿಕ್ಷೆ
ಹುಬ್ಬಳ್ಳಿ, ನವೆಂಬರ್, 17: ವಿಧಾನ ಪರಿಷತ್ ಸದಸ್ಯ ವಿಜಯ ಸಂಕೇಶ್ವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಹುಬ್ಬಳ್ಳಿ 2ನೇ ಜೆಎಂಎಫ್ಸಿ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ 24 ಸಾವಿರ ರೂ ದಂಡ ವಿಧಿಸಿದೆ.
ವಿಆರ್ ಎಲ್ ಸಮೂಹ ಸಂಸ್ಥೆ ಮಾಲೀಕ ಸಂಕೇಶ್ವರ್ ಅವರಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಯತ್ನಾಳಗೆ ಕೋರ್ಟ್ ಆದೇಶಿಸಿದೆ. ಅಕಸ್ಮಾತ್ ದಂಡ ಹಾಗೂ ಪರಿಹಾರ ನೀಡಲು ವಿಫಲರಾದರೆ 1 ತಿಂಗಳು ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹುಬ್ಬಳ್ಳಿ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.[ಸರ್ಕಾರದ ಅನುಮತಿಯಿಲ್ಲದೇ ಎದ್ದೇಳುತ್ತಿದೆ ಕೋರ್ಟ್ ಕಟ್ಟಡ]
ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದೇನು?
ಯತ್ನಾಳ 2004 ರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, 'ಸಂಕೇಶ್ವರರು ಪತ್ರಿಕಾ ಕ್ಷೇತ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಅವರಿಂದ ಸಾಕಷ್ಟು ಲಾಭ ಪಡೆದಿದ್ದಾರೆ. ಸಂಸತ್ ಸದಸ್ಯರಾಗಿ ಸದನಕ್ಕೆ ಬಾರದೆ ತಮ್ಮ ವ್ಯಾಪಾರ ಅಭಿವೃದ್ಧಿಗಾಗಿ ಸುತ್ತಾಡಲು ವಿಮಾನ ಟಿಕೆಟ್ ಸೌಲಭ್ಯ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಖಂಡಿಸಿ ಸಂಕೇಶ್ವರರು ಯತ್ನಾಳ ವಿರುದ್ಧ ಮಾನಹಾನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. 11 ವರ್ಷ ವಿಚಾರಣೆ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.
ಬಸನಗೌಡ ಪಾಟೀಲ ಯತ್ನಾಳ ಅವರು ತೀರ್ಪಿನ ನಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಮಾನಹಾನಿ ಮೊಕದ್ದಮೆ ವಜಾಕ್ಕಾಗಿ ಹೈಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದರು.