Covid-19 4th wave : ಕರ್ನಾಟಕದಲ್ಲಿ ಕೊರೊನಾವೈರಸ್ 4ನೇ ಅಲೆ ನಿಯಂತ್ರಣಕ್ಕೆ ಏನು ಮಾಡುವುದು?
ಬೆಂಗಳೂರು, ಏಪ್ರಿಲ್ 12: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆ ಭೀತಿ ಹುಟ್ಟಿಕೊಂಡಿದೆ. ಕೋವಿಡ್-19 ರೂಪಾಂತರಿ ಎಕ್ಸ್ಇ ತಳಿಯು ಪತ್ತೆ ಆಗಿರುವುದರ ಮಧ್ಯೆ ರಾಜ್ಯದಲ್ಲಿ ನಾಲ್ಕನೇ ಅಲೆಗಳನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಲ್ಕನೇ ಅಲೆಯ ನಿಯಂತ್ರಣಕ್ಕೆ ಲಸಿಕೆಯೊಂದೇ ರಾಜಮಾರ್ಗ ಎಂದರು. ಲಸಿಕೆ ಮೂಲಕ ಕೋವಿಡ್-19 ಅನ್ನು ದೇಶ ಮತ್ತು ರಾಜ್ಯವು ಸಮರ್ಥವಾಗಿ ಎದುರಿಸಿದೆ. ಭವಿಷ್ಯದಲ್ಲಿ 4ನೇ ಅಲೆ ಎದುರಾದರೆ, ಅದಕ್ಕೂ ಲಸಿಕೆಯೇ ಮದ್ದು ಎಂದು ತಿಳಿಸಿದ್ದಾರೆ.
ಈ 8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ: ಡಾ.ಕೆ.ಸುಧಾಕರ್
ಸಾರ್ವಜನಿಕರು ಶೀಘ್ರದಲ್ಲೇ ಸರ್ಕಾರ ನೀಡುವ ಲಸಿಕೆಯನ್ನು ಪಡೆದುಕೊಂಡು ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಮನವಿ ಮಾಡಿದರು. ಕೋವಿಡ್-19 ಸಾಂಕ್ರಾಮಿಕ ಪಿಡುಗು ಹಾಗೂ ದೇಶವು ಅದನ್ನು ಎದುರಿಸಿದ ಪರಿಯ ಬಗ್ಗೆ ಸಚಿವರು ವಿಸ್ತೃತವಾಗಿ ವಿವರಿಸಿ ಹೇಳಿದರು. ಈ ಹಿಂದಿನ ಅಲೆಗಳನ್ನು ದೇಶವು ಹೇಗೆ ಎದುರಿಸಿತು?, ರಾಜ್ಯದಲ್ಲಿ ಕೋವಿಡ್ ನಿಯಮಗಳು ಎಷ್ಟು ಯಶಸ್ವಿಯಾಗಿ ಪಾಲನೆಯಾದವು?, ಜಾಗತಿಕ ಮಟ್ಟದಲ್ಲಿ ಭಾರತ ಸೈ ಎನಿಸಿಕೊಂಡಿದ್ದು ಹೇಗೆ ಎನ್ನುವುದರ ಕುರಿತು ಸುಧಾಕರ್ ವಿವರಿಸಿದ್ದಾರೆ.
ಭಾರತೀಯರೇ ಕೊರೊನಾವೈರಸ್ ಎಕ್ಸ್ಇ ರೂಪಾಂತರದ ಬಗ್ಗೆ ಭಯವೇ ಬೇಡ: ಎನ್ ಕೆ ಅರೋರಾ
ನರೇಂದ್ರ ಮೋದಿ ದೂರದೃಷ್ಟಿಯಿಂದ ಕಡಿಮೆಯಾದ ಸಾವು
ಕೊರೊನಾವೈರಸ್ ನಿಯಂತ್ರಿಸುವ ವಿಷಯದಲ್ಲಿ ಮತ್ತು ರಾಜತಾಂತ್ರಿಕ ಸಂಬಂಧ ಬೆಳಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ತತ್ವಜ್ಞಾನಿ ರೀತಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ದೂರದೃಷ್ಟಿ ಯೋಚನೆಗಳು ಕೋಟ್ಯಂತರ ಸಾವು ನೋವುಗಳನ್ನು ತಡೆದಿದೆ. ಅನೇಕ ದೇಶಗಳಲ್ಲಿ ಈ ಹಿಂದೆಯೂ ಸಾಂಕ್ರಾಮಿಕ ರೋಗಗಳು ಬಂದ್ದವು . ಸ್ಪಾನಿಷ್ ಫ್ಲೂ, ಪ್ಲೇಗ್ ರೀತಿ ಸಾಂಕ್ರಾಮಿಕ ಕಾಯಿಲೆಗಳು ಮಾರಣಾಂತಿಕವಾಗಿದ್ದವು. ದಾಖಲೆ ಪ್ರಕಾರ ಊರು ಬಿಟ್ಟು ಬೇರೆ ಊರಿಗೆ ಗುಳೆ ಹೋದವರಿದ್ದಾರೆ. ಸ್ಪಾನಿಷ್ ಫ್ಲೂ ಕಾಯಿಲೆಯಿಂದ ಸತ್ತವರಿಗಿಂತ ಹಸಿವಿನಿಂದ ಸತ್ತವರೇ ಹೆಚ್ಚಾಗಿದ್ದಾರೆ. ಆದರೆ ಈ ಬಾರಿ ಪ್ರಧಾನಿ ದೂರದೃಷ್ಟಿಯು ಕೊರೊನಾ ವೇಳೆಯ ಅನಾಹುತಗಳನ್ನು ತಪ್ಪಿಸಿದೆ ಎಂದರು.
ಭಾರತದ ಬಗೆಗಿನ ಅಂದಾಜುಗಳೆಲ್ಲ ಸುಳ್ಳಾದವು
ಭಾರತದಲ್ಲಿ ಕೊರೊನಾವೈರಸ್ ಕಾಣಿಸಿಕೊಂಡ ವೇಳೆ ಜಗತ್ತಿನ ಅನೇಕ ಮುಂದುವರೆದ ದೇಶಗಳು ಒಂದೊಂದು ರೀತಿಯಲ್ಲಿ ಅಂದಾಜು ಹಾಕಿಕೊಂಡಿದ್ದವು. ದೇಶದ ಬೀದಿ ಬೀದಿಯಲ್ಲಿ ಜನರು ಸಾಯುತ್ತಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದವು. ಬಡತನ, ಅನಕ್ಷರತೆಯ ದೇಶವಾದ ಭಾರತದ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದುಕೊಂಡವರ ಅಂದಾಜುಗಳೆಲ್ಲ ಸುಳ್ಳಾದವು. ಎಲ್ಲಾ ರಾಜ್ಯಗಳ ಸಿಎಂ, ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ನಿಕಟ ಸಂಪರ್ಕದಲ್ಲಿದ್ದು, ಪ್ರತಿ ಹಂತದಲ್ಲೂ ಮಾರ್ಗಸೂಚನೆ ನೀಡಿದರು. ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ಲಸಿಕೆ ತಯಾರಿಕಾ ಕಂಪನಿಗಳ ಜೊತೆ ಸಂಪರ್ಕ ಸಾಧಿಸಿದರು. ಭಾರತದಲ್ಲಿ ಲಾಕ್ ಡೌನ್ ವೇಳೆ ಕಟ್ಟುನಿಟ್ಟಾಗಿ ನಿಯಮಗಳ ಪಾಲನೆ ಮಾಡಲಾಯಿತು.
ಕಳೆದ 2021ರ ಜನವರಿ 16ರಂದು ಪ್ರಧಾನಿ ಮೋದಿ ದೂರದೃಷ್ಟಿ ಇಟ್ಟುಕೊಂಡ ಇಡೀ ದೇಶದಲ್ಲಿ ಏಕಕಾಲಕ್ಕೆ ಲಸಿಕೆ ವಿತರಣೆ ಅನ್ನು ಆರಂಭಿಸಿದರು. ಇವತ್ತು ಭಾರತ ವಿಶ್ಚದಲ್ಲೇ ಅತಿಹೆಚ್ಚು ಲಸಿಕೆ ನೀಡಿದ ದೇಶವಾಗಿದೆ. ಭಾರತದಲ್ಲಿ 185.90 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಚೀನಾದ ನಂತರ ಅತಿಹೆಚ್ಚು ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
"ನಮ್ಮ ದೇಶದಲ್ಲಿ ಅನೇಕ ಲಸಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅವುಗಳೆಲ್ಲ ನಮಗೆ ಎಷ್ಟೋ ವರ್ಷಗಳ ಬಳಿಕ ಸಿಕ್ಕಿದ್ದವು. ಹೆಪಟೈಟಿಸ್ ಬಿ 1985ರಲ್ಲಿ ವಿಶ್ವಕ್ಕೆ ಸಿಕ್ಕರೂ ಭಾರತಕ್ಕೆ 2005ರಲ್ಲಿ ಲಭ್ಯವಾಗಿತ್ತು. ಬಿಸಿಜಿ 45 ವರ್ಷ ತಡವಾಗಿ ಬಂದಿದ್ದರೂ, ಜಪಾನಿಸ್ ಎನ್ಸೆಫಲಿಟಿಸ್ ಭಾರತಕ್ಕೆ 85 ವರ್ಷಗಳ ಬಳಿಕ ಸಿಕ್ಕಿತ್ತು. ಆದರೆ ಕೊರೊನಾವೈರಸ್ ಲಸಿಕೆಯು ವಿಶ್ವಕ್ಕೆ 2020 ಡಿಸೆಂಬರ್ ತಿಂಗಳಿನಲ್ಲಿ ಸಿಕ್ಕಿದ್ದರೆ, ಅದು ಭಾರತಕ್ಕೆ 2021ರ ಜನವರಿ ತಿಂಗಳಿನಲ್ಲೇ ಬಂದಿತ್ತು," ಎಂದು ಸಚಿವ ಸುಧಾಕರ್ ತಿಳಿಸಿದರು.
ದೇಶದಲ್ಲಿ 10 ಕೋವಿಡ್-19 ಲಸಿಕೆಗಳಿಗೆ ಪರವಾನಗಿ
ಭಾರತೀಯ ಮೂಲದ ಲಸಿಕೆಯನ್ನು ತಯಾರಿಸಿದ್ದು ನಮ್ಮ ಹೆಮ್ಮೆ ಆಗಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಮತ್ತು ಪುಣೆಯಿಂದ ಸೇರಮ್ ಇನ್ಸ್ ಟಿಟ್ಯೂಟ್ ಕೋವಿಶೀಲ್ಡ್ ಲಸಿಕೆ ಭಾರತದಲ್ಲಿ ಸರ್ವಾಜನಿಕರಿಗೆ ಸಿಕ್ಕಿತ್ತು. ಇವತ್ತು ಒಟ್ಟು 10 ವಿಧದ ಲಸಿಕೆಗಳಿಗೆ ಭಾರತ ಸರ್ಕಾರ ಪರವಾನಗಿ ಕೊಟ್ಟಿದೆ. ಸೇರಮ್ ಇನ್ಸ್ ಟಿಟ್ಯೂಟ್ ಕೋವಿಶೀಲ್ಡ್ ಜೊತೆ ಕೋವ್ಯಾಕ್ಸಿನ್ ಇದೆ. ಬಯೋಲಾಜಿಕಲ್ ಇ ಲಿಮಿಟೆಡ್ ನ ಕಾರ್ಬೊವ್ಯಾಕ್ಸ್ 12 ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಝೈಡಸ್ ಕ್ಯಾಡಿಲಾ ಸಂಸ್ಥೆ ಮೊದಲ ಡಿಎನ್ಎ ವ್ಯಾಕ್ಸಿನ್ ತಯಾರಿಸಿದೆ. ವಿಶ್ವದ ಮೊದಲ ಡಿಎನ್ ವ್ಯಾಕ್ಸಿನ್ ಝೈಕೋ-ಡಿ ಕೂಡಾ ಭಾರತದಲ್ಲಿ ತಯಾರಾಗಿದೆ. ಮಾಡೆರ್ನಾ ಸಂಸ್ಥೆ ಸ್ಪೈಕ್ ವ್ಯಾಕ್ಸ್ ತಯಾರಿಸಿದರೆ, ಗಮಾಲೆಯಾಗೆ ಸ್ಪುಟ್ನಿಕ್ ಲೈಟ್ ಮತ್ತು ಸ್ಪುಟ್ನಿಕ್-ವಿ ಲಸಿಕೆ ನೀಡಿದೆ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ಎಡಿ 26 ಕೋವಿಡ್ 2.7 ಎಸ್ ಅನ್ನುವ ಲಸಿಕೆ ತಯಾರಿಸಿದೆ. ಸೀರಂ ವ್ಯಾಕ್ಸ್ ಝನೆರಿಯಾ ಅನ್ನು ಲಸಿಕೆಯನ್ನು ತಯಾರಿಸಿದೆ. ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅನ್ನು ನೀಡುತ್ತಿದೆ.
ದೇಶೀಯ ಕೋವಿಡ್-19 ಲಸಿಕೆ ಬಳಸಲು ಸರ್ಕಾರದ ನಿರ್ಧಾರ
ಅಮೆರಿಕದಲ್ಲಿ ಮಾಡೆರ್ನಾ ಮತ್ತು ಫೈಝರ್ ಎಂಬ ಎರಡು ಕೊರೊನಾವೈರಸ್ ಲಸಿಕೆಗೆ ಅನುಮೋದನೆ ನೀಡಲಾಗಿತ್ತು. ಭಾರತವು ಅಮೆರಿಕಾವನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಲಸಿಕೆ ನೀಡುವುದಕ್ಕೆ ಅದು ಒಪ್ಪಿಕೊಂಡಿತು. ಆದರೆ ಅದರಿಂದ ಆಗುವ ತೊಂದರೆಗೆ ಜವಾಬ್ದಾರಿ ಅಲ್ಲ ಅಂತ ಹೇಳಿತ್ತು. ಈ ಹಿನ್ನೆಲೆ ಜನರ ಜೀವದ ಜೊತೆ ಆಟ ಆಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಬಳಸಲು ಅನುಮತಿ ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಕಾರ್ಯದ ಬಗ್ಗೆ ಸುಧಾಕರ್ ಹೊಗಳಿಕೆ
"ಅನೇಕ ಮುಂದೆವರೆದ ದೇಶಗಳಲ್ಲಿ ಜನ ಲಸಿಕೆ ತೆಗೆದಯಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕೆನಡಾದಲ್ಲಿ ಜನರು ಲಸಿಕೆ ತೆಗೆದುಕೊಳ್ಳಿ ಅಂದಿದ್ದ ಅಧ್ಯಕ್ಷರ ವಿರುದ್ಧ ದಂಗೆ ಎದ್ದಿದ್ದರು. ಆದರೆ ಒಕ್ಕೂಟ ವ್ಯವಸ್ಥೆಯ ನಮ್ಮ ದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರಗಳ ಜೊತೆ ಕೈ ಜೋಡಿಸಿ ಎಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡಲು ಪ್ರೋತ್ಸಾಹಿಸಿದರು."
"ಜನರು ಹಸಿವಿನಿಂದ ಸಾಯಬಾರದು ಅನ್ನುವ ಕಾರಣದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅನ್ನು ಜಾರಿಗೊಳಿಸಲಾಗಿತ್ತು. ಒಂದೂವರೆ ವರ್ಷ ಉಚಿತವಾಗಿ ಆಹಾರ ಧಾನ್ಯ ಕೊಟ್ಟರು. 80 ಕೋಟಿ ಜನರ ಮತ್ತು ಕುಟುಂಬಗಳಿಗೆ ಯೋಜನೆ ನೆರವಾಯಿತು. ಈಗ ಅದನ್ನು ಇನ್ನೂ ಆರು ತಿಂಗಳು ಮುಂದುವರೆಸಲಾಗಿದೆ. ವಿಶ್ವದ ಯಾವ ದೇಶದಲ್ಲೂ ಈ ರೀತಿ ಮಾಡಲು ಸಾಧ್ಯವಾಗಿಲ್ಲ. ಭಾರತದ ಯೋಜನೆಗಳ ಮೂಲಕ ಎಲ್ಲಾ ವರ್ಗದ ಜನರು ಸಮಾನ ಬದುಕು ಕಟ್ಟಿಕೊಳ್ಳುವಂತಾಗಿದೆ," ಎಂದು ಸುಧಾಕರ್ ಹೇಳಿದರು.
ರಾಜ್ಯದಲ್ಲಿನ ಕೊರೊನಾವೈರಸ್ ಲಸಿಕೆ ವಿತರಣೆ ಮಾಹಿತಿ
ರಾಜ್ಯದಲ್ಲಿ ಇಲ್ಲಿತನಕ 10.54 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಶೇ.100ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್ ನೀಡಿದ್ದರೆ, ಶೇ.98 ಮಂದಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಲಾಗಿದೆ. 12-14 ವರ್ಷದವರಿಗೆ ಶೇ.70.2ರಷ್ಟು ಮತ್ತು 15 ರಿಂದ 17 ವರ್ಷ ವಯೋಮಾನದವರಿಗೆ ಶೇ. 79.2ರಷ್ಟು ಹಾಗೂ 18 ರಿಂದ 44 ವರ್ಷದ ಶೇ.97.40ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಕೋವಿಡ್ ಅಂತ್ಯವಾಗಿಲ್ಲ ಬೇರೆ ಬೇರೆ ಪ್ರಬೇಧದ ಮೂಲಕ ಬರಬಹುದು ಅನ್ನುವ ಎಚ್ಚರಿಕೆ ನೀಡಲಾಗಿದೆ. ಎಕ್ಸ್.ಇ ಮತ್ತು ಎಂ.ಇ ಎಂಬ ತಳಿಗಳು ಬರುತ್ತಿವೆ. ಆದರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಲಸಿಕೆ ಒಂದೇ ಉಪಾಯವಾಗಿದೆ. ಸರ್ಕಾರ ನೀಡುವ ಉಚಿತ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಸುಧಾಕರ್ ಮನವಿ ಮಾಡಿದರು.
ಆತ್ಮನಿರ್ಭರ್ ಭಾರತ್ ಕುರಿತು ಉಲ್ಲೇಖಿಸಿದ ಸುಧಾಕರ್
"ವಿಶ್ವದ ಬೇರೆ ದೇಶಗಳಲ್ಲಿ ಕೊರೊನಾವೈರಸ್ ಲಸಿಕೆಗೆ 2 ರಿಂದ 5 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಭಾರತದಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ವಿಶ್ವದ 50 ದೇಶಗಳು ಭಾರತ ಬಳಸುವ ಕೋವಿನ್ ಅಪ್ಲಿಕೇಷನ್ ನೆರವನ್ನು ಕೇಳಿವೆ. ಸುಮಾರು 40 ದೇಶಗಳಿಗೆ ಭಾರತವೇ ಲಸಿಕೆಯನ್ನು ಉಚಿತವಾಗಿ ನೀಡಿದೆ. ಆ ಮೂಲಕ ಬೇರೆ ದೇಶಗಳಲ್ಲೂ ಪ್ರಾಣ ಹಾನಿಯನ್ನು ತಪ್ಪಿಸಿದೆ. ಆತ್ಮನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ಕೇವಲ 3-4 ತಿಂಗಳಲ್ಲಿ 18 ರಿಂದ 20 ಕಂಪನಿಗಳು ಪಿಪಿಇ ಕಿಟ್, ವೆಂಟಿಲೇಟರ್, ಮಾಸ್ಕ್, ಆಕ್ಸಿಜನ್ ಬೆಡ್, ಐಸಿಯು ಎಲ್ಲವನ್ನೂ ಉತ್ಪಾದನೆ ಮಾಡಿವೆ. ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಆತ್ಮನಿರ್ಭರ್ ಭಾರತ್ ಕಡಿಮೆ ಮಾಡಿದೆ," ಎಂದರು.
ಭಾರತ ಮತ್ತು ಕರ್ನಾಟಕವು ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯುತವಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 243 ಆಕ್ಸಿಜನ್ ಘಟಕಗಳು ಸಿಕ್ಕಿದ್ದು, ಈ ಪೈಕಿ 42 ಈಗಾಗಲೇ ಬಂದಿವೆ. 234 ಘಟಕಗಳು ಕಮಿಷನ್ ಆಗಿವೆ, 9 ಘಟಕಗಳ ಕಾಮಗಾರಿ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಮತ್ತು ಶೇಖರಣೆ ಪ್ರಮಾಣ ಹೆಚ್ಚಾಗಿದೆ ಎಂದರು.