ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಡುವ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಹೊಟ್ಟೆಪಾಡಿಗಾಗಿ ರಣಬಿಸಿಲಲ್ಲಿ ಕುಳಿತು ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು ಹೀಗೆ ಹಲವು ಕಠಿಣ ಶ್ರಮದ ಕೆಲಸ ಮಾಡುವವರು ಬಿಸಿಲೆಂದು ಕೈಕಟ್ಟಿ ಕೂರಲಾಗುವುದಿಲ್ಲ. ಆದರೆ ಬೇಸಿಗೆಯಲ್ಲಿ ಒಂದಷ್ಟು ಕಾಳಜಿ ವಹಿಸುವುದು ಒಳ್ಳೆಯದು.

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಏಪ್ರಿಲ್ 18: ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ನಾಲ್ಕು ಹೆಜ್ಜೆ ನಡೆಯುವಂತಿಲ್ಲ. ಕಠಿಣ ಶ್ರಮದ ಕೆಲಸ ಮಾಡುವಂತಿಲ್ಲ. ನೀರು ಕುಡಿದಷ್ಟು ಸಾಕಾಗುತ್ತಿಲ್ಲ. ತಲೆನೋವು, ಸುಸ್ತು ಹೀಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ.

ಸೆಖೆಯಿಂದಾಗಿ ಮೈಯೆಲ್ಲ ಕೆರೆದುಕೊಳ್ಳುವ ಪರಿಸ್ಥಿತಿ. ಬೀಸುವ ಗಾಳಿಯಲ್ಲೂ ತಂಪು ಕಾಣುತ್ತಿಲ್ಲ. ಹೀಗಾದರೆ ಹೇಗಪ್ಪಾ ಎಂಬುದು ಎಲ್ಲರ ಪ್ರಶ್ನೆ. ಹೊಟ್ಟೆಪಾಡಿಗಾಗಿ ರಣಬಿಸಿಲಲ್ಲಿ ಕುಳಿತು ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು ಹೀಗೆ ಹಲವು ಕಠಿಣ ಶ್ರಮದ ಕೆಲಸ ಮಾಡುವವರು ಬಿಸಿಲೆಂದು ಕೈಕಟ್ಟಿ ಕೂರಲಾಗುವುದಿಲ್ಲ. ತಮ್ಮ ನಿತ್ಯದ ಕೆಲಸವನ್ನು ಮಾಡಲೇ ಬೇಕು. ಆದರೆ ಬೇಸಿಗೆಯಲ್ಲಿ ಯಾರೇ ಆಗಲಿ ಒಂದಷ್ಟು ಕಾಳಜಿ ವಹಿಸುವುದು ಒಳ್ಳೆಯದು.[ಬರಪೀಡಿತ ಪ್ರದೇಶಗಳಲ್ಲಿ ಸರಕಾರದಿಂದ 'ಬೇಸಿಗೆ ಸಂಭ್ರಮ']

ಬೇಸಿಗೆ ಅವಧಿಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವೊಂದು ಗಂಭೀರ ಸ್ವರೂಪದ ರೋಗಗಳೂ ಬರುತ್ತವೆ. ಅಸಹನೀಯವಾದ ಉಷ್ಣಾಂಶವು ತನ್ನೊಡನೆ ಅನೇಕ ರೋಗಗಳನ್ನೂ ಹೊತ್ತುಕೊಂಡೇ ಬರುತ್ತದೆ. ತನ್ಮೂಲಕ ನಿಮ್ಮೆಲ್ಲಾ ಯೋಜನೆಗಳನ್ನು ಹಾಳುಗೆಡವಿ, ಉತ್ಸಾಹ ಹೀನ ಮನಸ್ಥಿತಿಯೊಂದಿಗೆ ನೀವು ಮನೆಯೊಳಗೆಯೇ ಉಳಿದು ಬಿಡುವಂತೆ ಮಾಡುತ್ತದೆ.[ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ]

ರೋಗಾಣುಗಳ ವೃದ್ಧಿಗೆ ಸೂಕ್ತ ಕಾಲ

ರೋಗಾಣುಗಳ ವೃದ್ಧಿಗೆ ಸೂಕ್ತ ಕಾಲ

ರೋಗಗಳಿಗೆ ಕಾರಣವಾಗಿರುವ ಅಸಂಖ್ಯಾತ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಪುಷ್ಕಳವಾಗಿ ಸಂವರ್ಧನೆಗೊಳ್ಳಲು ಬೇಸಿಗೆ ಕಾಲವು ಹೇಳಿ ಮಾಡಿಸಿದಂತಿರುತ್ತದೆ. ಬಿಸಿಲ ಧಗೆಯ ಜೊತೆಗೆ ವಾತಾವರಣವು ಈ ರೋಗಾಣುಗಳ ಬೆಳವಣಿಗೆಯನ್ನು ನೂರ್ಮಾಡಿಗೊಳಿಸುತ್ತದೆ. ಈ ರೋಗಾಣುಗಳು ಪ್ರಾರಂಭದಲ್ಲಿ ಕಡಿಮೆ ತೀವ್ರತೆಯ ಸೋಂಕುಗಳನ್ನಷ್ಟೆ ಹುಟ್ಟುಹಾಕುತ್ತವೆಯಾದರೂ, ನಂತರದ ಘಟ್ಟಗಳಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳಾಗಿ ಪರಿಣಮಿಸುತ್ತದೆ.

ಹೀಟ್ ಸ್ಟ್ರೋಕ್

ಹೀಟ್ ಸ್ಟ್ರೋಕ್

ತಾಪಮಾನ ಹೆಚ್ಚಳದಿಂದ ಹೀಟ್ ಸ್ಟ್ರೋಕ್ ನಂತಹ ಆರೋಗ್ಯ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸುವುದು ಒಳಿತು. ಹೀಟ್ ಸ್ಟ್ರೋಕ್ ಆದಾಗ ದೇಹದ ಉಷ್ಣತೆಯಲ್ಲಿ ಒಮ್ಮೆಲೆ ಹೆಚ್ಚಳ ಉಂಟಾಗುತ್ತದೆ ಹಾಗೂ ವಾಕರಿಕೆ, ತಲೆನೋವು, ಸುಸ್ತು, ವಾಂತಿ ಹಾಗೂ ತಲೆ ತಿರುಗಿ ಬೀಳುವಂತಹ ಸಾಧ್ಯತೆಗಳಿರುತ್ತವೆ.

ತಲೆ, ಮುಖದ ಭಾಗವನ್ನು ಮುಚ್ಚಿಕೊಳ್ಳಿ

ತಲೆ, ಮುಖದ ಭಾಗವನ್ನು ಮುಚ್ಚಿಕೊಳ್ಳಿ

ಬಿಸಿಲಿಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದಲ್ಲಿ, ತಲೆ ಹಾಗೂ ಮುಖದ ಭಾಗವನ್ನು ಮುಚ್ಚಿಕೊಳ್ಳುವುದು ಅವಶ್ಯಕವಾಗಿದೆ. ಇದರ ಜತೆಗೆ ಬೇಸಿಗೆಯಲ್ಲಿ ನಿರ್ಜಲಿಕರಣ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಿರಂತರವಾಗಿ ಶರೀರವನ್ನು ಜಲ ಪೂರಣವಾಗಿರಿಸಿಕೊಂಡಿರುವುದೂ ಕೂಡಾ ಅಷ್ಟೇ ಅವಶ್ಯಕವಾಗಿರುತ್ತದೆ.

 ಬೇಸಿಗೆಯ ಸಮಸ್ಯೆಗಳು

ಬೇಸಿಗೆಯ ಸಮಸ್ಯೆಗಳು

ಬೇಸಿಗೆ ಅವಧಿಯಲ್ಲಿ ಆಹಾರ ಪದಾರ್ಥಗಳು ಬಹುಬೇಗನೆ ಕ್ಷಯಿಸತೊಡಗುತ್ತದೆ. ಇನ್ನು ಬೇಸಿಗೆಯಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ವರ್ಸೆಲ್ಲಾ ಎಂಬ ವೈರಾಣುವು ಸಿಡುಬಿಗೆ ಕಾರಣವಾಗುತ್ತದೆ. ಇದೇ ರೀತಿ ನೀರಿನಿಂದ ಹರಡುವ ರೋಗ ಕಾಮಾಲೆ. ಕರಾವಳಿ ಪ್ರದೇಶಗಳಲ್ಲಿ ಕಾಮಾಲೆಯು ಸರ್ವೇ ಸಾಮಾನ್ಯ. ಬೇಸಿಗೆ ಕಾಲದ ಪ್ರಮುಖ ರೋಗಗಳ ಪಟ್ಟಿಯಲ್ಲಿ ಇದು ಕೂಡಾ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಹೀಗೆ ಹಲವಾರು ರೋಗಗಳು ಈ ಬಿಸಿಲ ಧಗೆಯಿಂದ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ.

 ಹತ್ತಿಯ ಬಟ್ಟೆ ಧರಿಸಿ

ಹತ್ತಿಯ ಬಟ್ಟೆ ಧರಿಸಿ

ಬೇಸಿಗೆಯ ದಿನಗಳಲ್ಲಿ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ ಸೇವಿಸಬೇಕು.

ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೀರು, ಮಜ್ಜಿಗೆ, ಎಳನೀರುಕು ಡಿಯಬೇಕು. ಬೆಚ್ಚಗಿನ ಮಸಾಲೆ ರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು.

ದೇಹ ತಂಪಾಗಿರಲಿ

ದೇಹ ತಂಪಾಗಿರಲಿ

ಬೇಸಿಗೆಯ ಸುಡು ಬಿಸಿಲಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಸದಾ ಉಷ್ಣತೆಯಿಂದ ಕೂಡಿರುವ ದೇಹ ತಂಪನ್ನು ಬಯಸುತ್ತದೆ. ಮನೆಯಿಂದ ಹೊರಗೆ ಹೋಗುವವರು ತಮ್ಮೊಂದಿಗೆ ನೀರನ್ನು ಕೊಂಡೊಯ್ಯುವುದು ಉತ್ತಮ. ಇನ್ನು ಬೇಸಿಗೆಯ ದಿನಗಳಲ್ಲಿ ಬಾಟಲಿ ನೀರನ್ನು ಹೊರತುಪಡಿಸಿ ಸಿಕ್ಕ ಸಿಕ್ಕ ಕಡೆ ನೀರು ಕುಡಿಯುವುದು ಕೂಡ ಅಪಾಯಕಾರಿಯೇ ಸರಿ. ಕೆಲವೊಮ್ಮೆ ಶುದ್ಧೀಕರಣವಿಲ್ಲದ ನೀರನ್ನು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೂ ಅಚ್ಚರಿಪಡಬೇಕಾಗಿಲ್ಲ.

ಎಳನೀರು ಸೇವನೆ ಉಪಯುಕ್ತ

ಎಳನೀರು ಸೇವನೆ ಉಪಯುಕ್ತ

ಬೇಸಿಗೆಯ ದಿನಗಳಲ್ಲಿ ದೇಹ ತಂಪನ್ನು ಬಯಸುವುದರಿಂದ ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಪೇಯವಾಗಿದೆ. ಇದರಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜ ಇದ್ದು, ಇದರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

ವಿಟಮಿನ್, ಪೊಟಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜಗುಣ ಇರುವುದರಿಂದ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಬೇಸಿಗೆಯ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಆಧುನಿಕ ಪೇಯಗಳನ್ನು ಸೇವಿಸದೆ ಎಳನೀರು ಅಥವಾ ಹಣ್ಣುಗಳಿಂದ ತಯಾರಿಸಿದ ತಾಜಾ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು. ಇದರಿಂದ ದೇಹ ತಂಪಾಗಿರಲು ಸಾಧ್ಯವಾಗುತ್ತದೆ.

 ನಿರ್ಜಲೀಕರಣದಿಂದ ಎಚ್ಚರಿಕೆ ವಹಿಸಿ

ನಿರ್ಜಲೀಕರಣದಿಂದ ಎಚ್ಚರಿಕೆ ವಹಿಸಿ

ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ದೇಹವನ್ನು ತಂಪಾಗಿಡಲು ಹಣ್ಣು, ತರಕಾರಿ, ಸೊಪ್ಪುಗಳು, ಸೌತೆಕಾಯಿ ಸೇವನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಇವುಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದಾಹವನ್ನು ಕಡಿಮೆ ಮಾಡಿ ದೇಹವನ್ನು ಕಾಪಾಡುತ್ತವೆ.

ಆಹಾರ ಸೇವನೆಯತ್ತ ಗಮನ ಹರಿಸಿ

ಆಹಾರ ಸೇವನೆಯತ್ತ ಗಮನ ಹರಿಸಿ

ಕಲ್ಲಂಗಡಿ, ಕರ್ಬೂಜ, ಸೊಗದೆ ಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳಿಗೆ ಆದ್ಯತೆ ನೀಡಬೇಕು. ಬೇಸಿಗೆಯ ತೀವ್ರತೆ ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ. ಹಾಗಾಗಿ ಆಹಾರ ಸೇವನೆಯತ್ತಲೂ ಗಮನಹರಿಸಿ, ಆರೋಗ್ಯಕ್ಕೆ ಸರಿ ಹೊಂದುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.

English summary
Summer is the time when our body and skin needs extra protection. Skin is the most prominent organ of our body. So, during summer, it is essential to take care of the body and skin. Read the article to know how to take care our body during summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X