ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು, ತಮ್ಮ ಅಕ್ಷರಾಭ್ಯಾಸ ಆರಂಭಿಸಿದ್ದೇ ವಿಶಿಷ್ಟವಾಗಿ!
ತ್ರಿವಿಧ ದಾಸೋಹಿ, ಕಾಯಕ ಯೋಗಿ, ತುಮಕೂರಿನ ಸಿದ್ದಗಂಗಾ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ (111) ಸೋಮವಾರ ಲಿಂಗೈಕ್ಯರಾಗಿದ್ದಾರೆ. ಪೂಜ್ಯ ಶ್ರೀಗಳು, ಹನ್ನೆರಡನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮಾರ್ಚ್ 3, 1930ರಲ್ಲಿ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ, ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದ ಅಕ್ಷರ ದಾಸೋಹಿ, ಸಿದ್ದಗಂಗಾ ಶ್ರೀಗಳು, ತಮ್ಮ ಶೈಕ್ಷಣಿಕ ಜೀವನ ಆರಂಭಿಸಿದ್ದು ವಿಶಿಷ್ಟವಾಗಿ.
ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠಾಧೀಶರಾಗಿದ್ದು ಹೀಗೆ
ಬಡಮಕ್ಕಳಿಗಾಗಿ 1975ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದ ಸಿದ್ದಗಂಗಾ ಶ್ರೀಗಳು, ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1908ರಲ್ಲಿ 13ನೇ ಮಗು ಶಿವಣ್ಣನವರಾಗಿ (ಪೂರ್ವಾಶ್ರಮದ ಹೆಸರು) ಜನಿಸಿದವರು. ಹೊನ್ನೇಗೌಡ ದಂಪತಿಗಳಿಗೆ ಎಂಟು ಜನ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು,
ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ ಎಂದು ತಮ್ಮ ಪ್ರವಚನಗಳಲ್ಲಿ ಹೇಳುತ್ತಿದ್ದ ಸಿದ್ದಗಂಗಾ ಶ್ರೀಗಳು, ತಮ್ಮ ಸ್ವಂತ ಊರಿನಲ್ಲೇ ಇದ್ದ ಮಠವೊಂದರಲ್ಲಿ ಅಕ್ಷರಾಭ್ಯಾಸ ಮಾಡಿದವರು.
ಎಲ್ಲರಿಗಿಂತಲೂ ಕಿರಿಯರಾದ ಸಿದ್ದಗಂಗಾ ಶ್ರೀಗಳು
ಹೊನ್ನೇಗೌಡ ದಂಪತಿಗಳಿಗೆ ಎಲ್ಲರಿಗಿಂತಲೂ ಕಿರಿಯರಾದ ಸಿದ್ದಗಂಗಾ ಶ್ರೀಗಳು (ಪೂರ್ವಾಶ್ರಮದ ಹೆಸರು ಶಿವಣ್ಣ) ಎಂದರೆ ಅವರ ತಂದೆ ತಾಯಿಗೆ ಅಪಾರ ಪ್ರೀತಿ. ಮಾಗಡಿ ತಾಲೂಕು, ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶ್ರೀಗಳ ಶೈಕ್ಷಣಿಕ ಜೀವನ ಆರಂಭವಾಯಿತು ಎನ್ನುವುದು ವಿಶೇಷ.
ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು
ಪ್ರಾಥಮಿಕ ಶಾಲೆಗಾಗಿ ಪಕ್ಕದಲ್ಲಿಯೇ ಇದ್ದ ಶಾಲೆಗೆ ದಾಖಲಾದ ಶ್ರೀಗಳು, ತಮ್ಮ ಪ್ರಾಥಮಿಕಾ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಆನಂತರ ಅಕ್ಕನ ಆಸರೆಯಲ್ಲಿ ಬೆಳೆದ ಶ್ರೀಗಳು, ಜಿಲ್ಲಾಕೇಂದ್ರ ತುಮಕೂರು ಬಳಿ ಇರುವ ಶಾಲೆಯೊಂದರಲ್ಲಿ ಮುಂದಿನ ಶಿಕ್ಷಣವನ್ನು ಮುಗಿಸಿದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಉದ್ದಾನ ಶಿವಯೋಗಿ ಶ್ರೀಗಳ ಜೊತೆ ಅವರ ಒಡನಾಟ ಆರಂಭವಾಯಿಯಿತು.
ಹುಟ್ಟಿದ ಊರಿನಿಂದ 25 ವರ್ಷ ದೂರವಿದ್ದ ಸಿದ್ದಗಂಗಾ ಸ್ವಾಮೀಜಿ
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ
ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಶಿಕ್ಷಣ ಮುಂದುವರಿಸಿದ ಶ್ರೀಗಳು, ಸಿದ್ದಗಂಗಾ ಮಠಕ್ಕೆ ಬಂದು ಹೋಗುತ್ತಿದ್ದರು. 1930ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾದ ಮರುಳಾರಾಧ್ಯರು ಶಿವೈಕ್ಯರಾಗುತ್ತಾರೆ. ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಸಿದ್ದಗಂಗಾ ಶ್ರೀಗಳನ್ನು, ಉದ್ಧಾನ ಹಿರಿಯ ಸ್ವಾಮೀಜಿಗಳು, ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದರು.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ
ಹಲವು ದಶಕಗಳಿಂದ ವಿದ್ಯಾದಾನ
ಸಾವಿರಾರು ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ವಿದ್ಯಾದಾನ ಮಾಡುತ್ತಾ, ತ್ರಿವಿಧ ದಾಸೋಹಿಗಳು ಎನಿಸಿಕೊಂಡ ಶ್ರೀಗಳು, ತಮ್ಮ, ಸೇವಾ ಮನೋಭಾವ, ಶ್ರಮದಿಂದ ಸಿದ್ದಗಂಗಾ ಮಠವನ್ನು ಆಗಸದೆತ್ತರಕ್ಕೆ ಬೆಳೆಸಿದವರು, ಸೋಮವಾರ ಮಧ್ಯಾಹ್ನ (ಜ 21) ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನಕ್ಕೆ ಮಂಗಳವಾರ ಮಧ್ಯಾಹ್ನ 3 ಗಂಟೆ ತನಕ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಂದೇ ವಿರಕ್ತ ಮಠದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ.
ನಡೆದಾಡುವ ದೇವರ ಶ್ರೀವಾಣಿ: ದೇಹಕ್ಕೆ ಹಸಿವಾದರೆ ಪ್ರಸಾದ, ಮನಸ್ಸಿನ ಹಸಿವಿಗೆ ಪ್ರಾರ್ಥನೆ