ಆರೋಪಿ ಶಾಸಕ ಗಣೇಶ್ ಪೊಲೀಸರಿಗೆ ಸಿಕ್ಕಿ ಬಿದ್ದದ್ದು ಹೇಗೆ?
ರಾಮನಗರ, ಫೆಬ್ರವರಿ 20: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಒಂದು ತಿಂಗಳಿನಿಂದಲೂ ತಲೆ ಮರೆಸಿಕೊಂಡಿದ್ದ ಶಾಸಕ ಗಣೇಶ್ ಕೊನೆಗೂ ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಒಂದು ತಿಂಗಳಿನಿಂದಲೂ ಪೊಲೀಸರಿಗೆ ತಲೆನೋವಾಗಿದ್ದ ಶಾಸಕ ಗಣೇಶ್ ಅವರನ್ನು ಪತ್ತೆ ಹಚ್ಚಲು ರಾಮನಗರ ಪೊಲೀಸರು ಸತತ ಒಂದು ತಿಂಗಳು ಶ್ರಮ ಪಟ್ಟಿದ್ದಾರೆ.
ಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನ
ಒಬ್ಬ ಶಾಸಕನನ್ನು ಹುಡುಕಲು ಬರೋಬ್ಬರಿ ಒಂದು ತಿಂಗಳು ಹಿಡಿದಿದೆ ಪೊಲೀಸರಿಗೆ. ಆದರೆ ಶಾಸಕ ಗಣೇಶ್ ಅವರನ್ನು ಪತ್ತೆ ಮಾಡುವುದು ಅವರಿಗೆ ಸುಲಭದ ಕೆಲಸವಾಗಿರಲಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ರಾಮನಗರ ಎಸ್ಪಿ ರಮೇಶ್ ಬಾನೋತ್, ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ತಲೆ ಮರೆಸಿಕೊಂಡಿರುವ ಶಾಸಕ ಗಣೇಶ್ ಗೋವಾದಲ್ಲಿದ್ದಾರೆ: ಎಂಬಿ.ಪಾಟೀಲ್
ಶಾಸಕ ಗಣೇಶ್ ಅವರನ್ನು ಗೋವಾ ನಲ್ಲಿ ಬಂಧಿಸಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅದನ್ನು ನಿರಾಕರಿಸಿರುವ ಎಸ್ಪಿ, ಅವರನ್ನು ಗುಜರಾತ್ನ ಸೋಮನಾಥ ಎಂಬುವ ಕಡೆ ಮಧ್ಯಾಹ್ನ ಎರಡು ಗಂಟೆಗೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗೋವಾ, ಮುಂಬೈನಲ್ಲೂ ಇದ್ದ ಗಣೇಶ್
ಶಾಸಕ ಗಣೇಶ್ ಅವರು ಗೋವಾ ಮತ್ತು ಮುಂಬೈನಲ್ಲಿ ಹೋಗಿದ್ದರಂತೆ. ಆದರೆ ಎರಡೂ ಕಡೆ ಅವರು ಹೆಚ್ಚು ದಿನ ಇರದೆ ಎರಡೂ ಸ್ಥಳಗಳಿಂದ ಕಾಲು ಕಿತ್ತಿದ್ದಾರೆ. ಮುಂಬೈನಲ್ಲಿ ಅಂತೂ ಪೊಲೀಸರು ಬಂಧಿಸಲು ಹೋಗುವ ಒಂದು ದಿನ ಮುಂಚೆ ಅಲ್ಲಿಂದ ಕಾಲು ಕಿತ್ತು ಗುಜರಾತ್ಗೆ ಪಲಾಯನ ಮಾಡಿದ್ದರು.
ಫೋನ್ ಕರೆಗಳಿಂದ ಗೊತ್ತಾಯ್ತು ಮಾಹಿತಿ
ಶಾಸಕ ಗಣೇಶ್ ಗುಜರಾತ್ನಲ್ಲಿರುವುದು ಪೊಲೀಸರಿಗೆ ಮೂರು ದಿನಗಳ ಮುಂಚೆ ಗೊತ್ತಾಗಿತ್ತು. ಅವರು ಮಾಡಿದ ಕರೆಗಳ ಆಧಾರದಲ್ಲಿ ಅದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಂತೆಯೇ ಇಂದು ಮಧ್ಯಾಹ್ನ ಅವರು ಸೋಮನಾಥ ಎಂಬಲ್ಲಿ ಸುಖ ಸಾಗರ್ ಹೊಟೆಲ್ಗೆ ಊಟಕ್ಕೆ ಬಂದಿದ್ದಾಗ ಅವರನ್ನು ಸೆರೆ ಹಿಡಿಯಲಾಗಿದೆ. ಅಲ್ಲೇ ಸ್ಥಳೀಯ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದೆ.
ಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆ
ಗಣೇಶ್ ಜೊತೆ ಇದ್ದರು ನಾಲ್ವರು ಚೇಲಾಗಳು
ಬಂಧನ ನಡೆದ ವೇಳೆ ಗಣೇಶ್ ಅವರ ಜೊತೆ ನಾಲ್ಕು ಜನರು ಇದ್ದರಂತೆ, ಮೂರು ಜನ ಕರ್ನಾಟಕದವಾರದೆ, ಒಬ್ಬ ವ್ಯಕ್ತಿ ಗುಜರಾತ್ನವನೇ ಎನ್ನಲಾಗಿದೆ. ಅಷ್ಟೂ ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್ಪಿ ರಮೇಶ್ ಬಾನೋತ್ ಹೇಳಿದ್ದಾರೆ.
ಬಂಧನಕ್ಕೆ ವಿಶೇಷ ತಂಡ ರಚನೆ
ಶಾಸಕ ಗಣೇಶ್ ಅವರನ್ನು ಬಂಧಿಸಲು ರಾಮನಗರ ಪೊಲೀಸರು ಒಂದು ತಿಂಗಳಿನಿಂದಲೂ ಬಲೆ ಹೆಣೆದಿದ್ದರು. ಈ ಕಾರ್ಯಾಚರಣೆಗೆಂದು ಎಸ್ಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಇಬ್ಬರು ವೃತ್ತ ನಿರೀಕ್ಷಕರು, ನಾಲ್ಕು ಎಸ್ಐ ಮತ್ತು ಕಾನ್ಸ್ಟೇಬಲ್ಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಶಾಸಕ
ಶಾಸಕ ಗಣೇಶ್ ಅವರು ಜನವರಿ 19ರಂದು ರಾತ್ರಿ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಜನವರಿ 21 ರಂದು ಅವರ ಮೇಲೆ ಎಫ್ಐಆರ್ ದಾಖಲಾದ ಮೇಲೆ ಅವರು ತಲೆಮರೆಸಿಕೊಂಡಿದ್ದರು.