ಪುನೀತ್ ಜೀವ ಕಾಪಾಡುವ ಗೋಲ್ಡನ್ ಅವರ್ ಮಿಸ್ ಆಗಿದ್ದು ಹೇಗೆ?
ಬೆಂಗಳೂರು,ನ. 02: ನಟ ಪುನೀತ್ ಅಗಲಿ ಐದು ದಿನ ಕಳೆದಿದೆ. ನಟ ಪುನೀತ್ ಸಾವಿನ ಸುತ್ತ ಇನ್ನೂ ಚರ್ಚೆ ನಡೆಯುತ್ತಿದೆ. ಎದೆ ನೋವು ಕಾಣಸಿಕೊಂಡಾಗ, ಹೃದಾಯಾಘಾತದ ನೋವು ಕಾಣಿಸಿಕೊಂಡ ಕೂಡಲೇ ಒಂದು ತಾಸಿನಲ್ಲಿ ಎಚ್ಚೆತ್ತಿದ್ದರೆ ಜೀವ ಉಳಿಸಬಹುದು. ನಟ ಪುನೀತ್ ವಿಚಾರದಲ್ಲಿ ಗೋಲ್ಡನ್ ಅವರ್ ಸಮಯ ಕೈ ತಪ್ಪಿ ಹೋಗಿತ್ತೇ ? ಪುನೀತ್ಗೆ ಎದೆನೋವು ಕಾಣಿಸಿಕೊಂಡ ಬಳಿಕ ಪ್ರಾಥಮಿಕವಾಗಿ ಅವರಿಗೆ ಸಿಗಬೇಕಾದ ಚಿಕಿತ್ಸೆ ಸಿಗದೇ ಹೋಗಿದ್ದೇ ಈ ಪ್ರಮಾದಕ್ಕೆ ಕಾರಣವಾಯಿತೇ ? ಎಂಬ ಮಾತು ವೈದ್ಯಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
Recommended Video
ಸಾವಿನ ಮುನ್ಸೂಚನೆ? "ಪುನೀತ್ ಸಾವಿಗೂ ಇದಕ್ಕೂ ಸಂಬಂಧವಿಲ್ಲ, ಅಪಾರ್ಥ ಬೇಡ"
ಪುನೀತ್ ಅವರಿಗೆ ಯಾವುದೇ ದುರಾಭ್ಯಾಸ ಇರಲಿಲ್ಲ. ಅವರು ಅವಶ್ಯಕತೆಗಿಂತಲೂ ಹೆಚ್ಚು ಕಾಲ ಜಿಮ್ನಲ್ಲಿ ಕಾಲ ಕಳೆದು ಸುಸ್ತಾಗಿದ್ದರು. ಅವರಿಗೆ ಎದೆ ನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಡಾ. ರಮಣರಾವ್ ಅವರ ಕ್ಲಿನಿಕ್ಗೆ ಕರೆದೊಯ್ದಲಾಗಿದೆ. ಯಾವಾಗಲೂ ಹೃದಯಾಘಾತವಾದಾಗ ಆ ನಂತರದ ಒಂದು ತಾಸನ್ನು ವೈದ್ಯಕೀಯ ಪರಿಭಾಷೆಯಲ್ಲಿ ಗೊಲ್ಡನ್ ಅವರ್ ಎಂದೇ ಕರೆಯುತ್ತೇವೆ. ಪುನೀತ್ಗೆ ಎದೆ ನೋವು ಕಾಣಿಸಿಕೊಂಡ ಕೂಡಲೇ ಎಕೋಸ್ಪ್ರಿನ್ ಸೇರಿದಂತೆ ಹಲವು ಮಾತ್ರೆ ಕೊಡಬೇಕಿತ್ತು. ಡಾ. ರಮಣರಾವ್ ಕ್ಲಿನಿಕ್ ಗೆ ಹೋಗುವ ಬದಲು ಎಚ್ಚೆತ್ತು ಹಾರ್ಡ್ ರಿಸರ್ಚ್ ಸ್ಟೇಷನ್ ಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೃದಯ ಕೆಲಸ ಮಾಡುವ ಪ್ರಯತ್ನ ಮಾಡಲು ಅವಕಾಶವಿತ್ತು. ಆದರೆ, ಪ್ರಾಥಮಿಕ ಚಿಕಿತ್ಸೆ ಕೊಡುವ ವೇಳೆ ಪರೀಕ್ಷೆಗಳಲ್ಲಿ ಒಂದು ತಾಸು ಕಳೆಯಲಾಗಿದೆ. ಪುನೀತ್ ಅವರ ಜೀವ ಉಳಿಸಲು ಇದ್ದ ಬಹುದೊಡ್ಡ ಅವಕಾಶ ಕಳೆದುಕೊಂಡಾಗಿತ್ತು. ಪುನೀತ್ ಅವರನ್ನು ಕುಟುಂಬ ವೈದ್ಯರ ಸಲಹೆ ಬಳಿಕ ವಿಕ್ರಂ ಆಸ್ಪತ್ರೆಗೆ ಸೇರಿಸುವ ಮುನ್ನವೇ ಅವರ ಹೃದಯ ಬಡಿತ ಸ್ಥಗಿತಗೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಹೃದ್ರೋಗ ತಜ್ಞರ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಪುನೀತ್ಗೆ ವಿಕ್ರಂ ಆಸ್ಪತ್ರೆ ಸೇರಿಸುವ ವೇಳೆಗೆ ಸ್ವಲ್ಪ ಉಸಿರಾಟ ಇದ್ದರೂ ಬದುಕಿಸುವ ಪ್ರಯತ್ನ ಮಾಡಲು ಅವಕಾಶವಿತ್ತು. ಆದರೆ, ವಿಕ್ರಂ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಗೋಲ್ಡನ್ ಅವರ್ ಅವಧಿ ಮೀರಿ ಹೋಗಿತ್ತು. ಹೀಗಾಗಿ ಅಲ್ಲಿನ ವೈದ್ಯರು ನಡೆಸಿದ ಯಾವ ಪ್ರಯತ್ನಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಬಂದಾಗ ಜೀವ ಉಳಿಸುವ ವಿಚಾರವಾಗಿ ಒಂದಷ್ಟು ತುರ್ತು ಮಾತ್ರೆ ನೀಡಬೇಕಾಗುತ್ತದೆ. ಆನಂತರ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೃದಯ ಬಡಿದುಕೊಳ್ಳುವಂತೆ ಮಾಡಲು ಸಾಕಷ್ಟು ಅವಕಾಶಗಳಿರುತ್ತವೆ. ಆದರೆ, ಪುನೀತ್ ವಿಚಾರದಲ್ಲಿ ಪ್ರಾಥಮಿಕ ಚಿಕಿತ್ಸೆ, ಹಾರೈಕೆ ಕೊಡುವಲ್ಲಿ ವೈದ್ಯರು ವಿಫಲರಾದರೇ? ಎಂಬ ಪ್ರಶ್ನೆ ವೈದ್ಯನಾಗಿ ನನ್ನನ್ನು ಕಾಡುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಗಲಿಬಿಲಿಗೊಂಡರೆ ಮುಗೀತು:
ಪುನೀತ್ಗೆ ಎದೆ ನೋವು ಕಾಣಿಸಿಕೊಂಡ ಬಳಿಕ ಇಸಿಜಿ ಮಾಡಲಾಗಿದೆ. ಅದರಲ್ಲಿ ಉಸಿರಾಟದಲ್ಲಿ ಏರು ಪೇರಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಮೊದಲು ಅವರನ್ನು ಹೃದಯ ಸಂಬಂಧಿ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಗಂಭೀರವಾಗಿ ಪರಿಗಣಿಸಬೇಕಿತ್ತು. ಎದೆ ನೋವಿನ ಮೂಲ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ರವಾನಿಸಬಹುದಿತ್ತು. ಹೃದಯಾಘಾತದ ಸಂದರ್ಭದಲ್ಲಿ ವೈದ್ಯರು ಗಲಿಬಿಲಿಗೊಳ್ಳುವುದು ಸಹಜ. ಪುನೀತ್ ವಿಚಾರದಲ್ಲಿ ಎಚ್ಚರಿಕೆ ವಹಿಸುವಲ್ಲಿ ವಿಫಲರಾದೆವು ಎಂದೆನಿಸುತ್ತಿದೆ. ಈ ವಿಚಾರ ಇನ್ನು ಆಲೋಚಿಸಿ ಏನು ಪ್ರಯೋಜನ ಅಲ್ಲವೇ ಎಂದು ಹೃದ್ರೋಗ ತಜ್ಞರೊಬ್ಬರು ಪ್ರಶ್ನಿಸಿದ್ದಾರೆ.