ಉಪ ಚುನಾವಣೆ: ಮೊದಲ ಬಾರಿ ಹಾನಗಲ್ ಕ್ಷೇತ್ರದಲ್ಲಿ ಹರಿದ ಹಣದ ಹೊಳೆ!
ಹಾವೇರಿ, ನ. 02: ಇತಿಹಾಸದಲ್ಲಿ ಮೊದಲ ಬಾರಿ ವಿಧಾನಸಭೆ ಉಪಚುನಾವಣೆ ನಡೆದಿರುವ ಹಾನಗಲ್ ಕ್ಷೇತ್ರದಲ್ಲಿ ಹಣದ ಹೊಳೆಯೆ ಹರಿದಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮತದಾರರಿಗೆ ಹಣವನ್ನು ಹಂಚಲಾಗಿದೆ ಎಂಬ ಆರೋಪಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಹಣದ ಹಂಚಿಕೆ ಬಗ್ಗೆ 'ಒನ್ಇಂಡಿಯಾ ಕನ್ನಡ'ಕ್ಕೆ ಮತದಾದರರೂ ಖಚಿತಪಡಿಸಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರ ಯಾವಾಗಲೂ ಜಿದ್ದಾಜಿದ್ದಿನ ಚುನಾವಣೆಗೆ ಹೆಸರುವಾಸಿ. ಮಾಜಿ ಸಚಿವರಾದ ಮನೋಹರ್ ತಹಶೀಲ್ದಾರ್ ಹಾಗೂ ದಿ. ಸಿ.ಎಂ. ಉದಾಸಿ ಮಧ್ಯೆ ಯಾವಾಗಲೂ ನೇರ ಸ್ಪರ್ಧೆ ಇರುತ್ತಿತ್ತು. ಹೀಗಾಗಿ ಕಳೆದ ಸುಮಾರು ನಾಲ್ಕು ದಶಕಗಳಿಂದ ತಹಶೀಲ್ದಾರ್ ಹಾಗೂ ದಿ. ಉದಾಸಿ ಅವರ ಮಧ್ಯೆ ಒಂದು ರೀತಿಯಲ್ಲಿ ರಾಜಕೀಯ ಜುಗಲ್ಬಂದಿ ನಡೆದಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಕ್ಷೇತ್ರದ ಮತದಾರರು ಅಭಿವೃದ್ಧಿ ನೋಡಿಕೊಂಡು ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದರು.
ಹೀಗಾಗಿ ಒಬ್ಬರೂ ನಾಯಕರು ಪೈಪೋಟಿಗೆ ಬಿದ್ದವರಂತೆ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಆದರಿಂದ ಚುನಾವಣೆಯಲ್ಲಿ ಒಂದು ಸಲ ಸಿ.ಎಂ. ಉದಾಸಿ ಗೆದ್ದರೆ, ಮತ್ತೊಮ್ಮೆ ಮನೋಹರ ತಹಶೀಲ್ದಾರ್ ಅವರು ಗೆಲ್ಲುತ್ತಿದ್ದರು. ಒಂದು ರೀತಿಯಲ್ಲಿ ಆರೋಗ್ಯಕರ ರಾಜಕೀಯ ಯಾವಾಗಲೂ ಕ್ಷೇತ್ರದಲ್ಲಿ ನಡೆದಿರುತ್ತಿತ್ತು. ಆದರೆ ಮಾಜಿ ಸಚಿವರಾಗಿದ್ದ ಸಿ.ಎಂ. ಉದಾಸಿ ಅವರ ನಿಧನದಿಂದ ಹಾನಗಲ್ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ.
ಉಪ ಚುನಾವಣೆಯಿಂದ ಭರ್ಜರಿ ದೀಪಾವಳಿ ಹಬ್ಬ!
ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರು ವಯೋಸಹಜ ಕಾರಣಗಳಿಂದ ನಿಧನರಾದ ಬಳಿಕ ಇದೀಗ ಉಪಚುನಾವಣೆ ನಡೆದು ಫಲಿತಾಂಶವೂ ಬಂದಿದೆ. ಇತಿಹಾಸದಲ್ಲಿಯೇ ಮೊದಲ ಬಾರಿ ಉಪ ಚುನಾವಣೆ ನಡೆಯುವುದರೊಂದಿಗೆ ಹಣದ ಹೊಳೆಯೆ ಕ್ಷೇತ್ರದಲ್ಲಿ ಹರಿದಿದೆ ಎಂಬ ಮಾಹಿತಿಗಳಿವೆ. ಕ್ಷೇತ್ರದ ಮತದಾರರೇ ಹೇಳುವಂತೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳವರು ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಗಳು ಮನೆ ಮನೆಗೆ ಬಂದು ಹಣ ಹಂಚಿದ್ದಾರೆ ಎನ್ನುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ಈ ದೀಪಾವಳಿಯನ್ನು ಖಡಕ್ ಆಗಿ ಆಚರಿಸುವಂತಾಯಿತು ಎನ್ನುತ್ತಿದ್ದಾರೆ. ಅಷ್ಟಕ್ಕೂ ಒಂದು ಮತಕ್ಕೆ ಕ್ಷೇತ್ರದಲ್ಲಿ ಹಂಚಿಕೆಯಾಗಿರುವ ಹಣವೆಷ್ಟು? ಎಂಬುದು ಮುಂದಿದೆ.
ಮೊದಲ ಸಲ ಹಣ ಕಂಡ ಹಾನಗಲ್ ಜನರು?
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯ ಬಳಿಕ ಎದುರಾಗಿದ್ದ ಮೊದಲ ಉಪ ಸಮರವನ್ನು ಗೆಲ್ಲಬೇಕಾದ ಅನಿವಾರ್ಯತೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಬಿಜೆಪಿಗಿತ್ತು. ಹೀಗಾಗಿ ಆಡಳಿತ ಯಂತ್ರ ಸೇರಿದಂತೆ ಎಲ್ಲವನ್ನೂ ರಾಜ್ಯ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆರೋಪಿಸಿದ್ದರು. ಅದು ಬೇರೆ ಮಾತು. ಆದರೆ ಉಪಚುನಾವಣೆಯಲ್ಲಿ ಪ್ರತಿ ಮತದಾರರಿಗೆ ಕನಿಷ್ಠ ಒಂದೂವರೆ ಸಾವಿರ ರೂಪಾಯಿಗಳಿಂದ ಎರಡು ಸಾವಿರ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಮತದಾರರೇ ಕೊಟ್ಟಿದ್ದಾರೆ. ಅದನ್ನು ಹಂಚಿಕೆ ಮಾಡಿದವರನ್ನು ಈ ಹಿಂದೆ ನಾವ್ಯಾರೂ ನೋಡಿಲ್ಲ ಎಂದು ಹಣ ಪಡೆದವರು ಹೇಳುತ್ತಿರುವುದು ಕುತೂಹಲಕ್ಕೆ ಕಾರಣ ಆಗಿದೆ.
ಉಪ ಚುನಾವಣೆಯಲ್ಲಿ ಅಪರಿಚಿತರಿಂದ ಹಣ ಹಂಚಿಕೆ!
ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಹೇಳಿಕೊಂಡು ಬಂದವರು ಮತಕ್ಕೆ ತಲಾ ಐನೂರು ಹಾಗೂ ಅದೇ ರೀತಿ ನಾವು ಬಿಜೆಪಿಯವರು ಎಂದು ಹೇಳಿಕೊಂಡು ಬಂದವರು ಪ್ರತಿ ಮತಕ್ಕೆ ಒಂದು ಸಾವಿರ ರೂಪಾಯಿಗಳಂತೆ ಹಣ ಹಂಚಿಕೆ ಮಾಡಿದ್ದಾರೆ. ಪ್ರತಿ ಗ್ರಾಮದ ಮತದಾರರ ಪಟ್ಟಿಯನ್ನು ನೋಡಿ ಖಚಿತಪಡಿಸಿಕೊಂಡು ಹಣ ಹಂಚಿಕೆ ಮಾಡಿದ್ದಾರೆ. ಆದರೆ ನಾವು ಜೆಡಿಎಸ್ನವರು ಎಂದು ಯಾರೂ ಹೇಳಿಕೊಂಡು ಬಂದಿಲ್ಲ. ಹೀಗಾಗಿ ಪ್ರತಿ ಮತದಾರರಿಗೆ ಕನಿಷ್ಠ 1500 ರೂಪಾಯಿಗಳಷ್ಟು ಹಣ ಸಿಕ್ಕಿದೆ. ನಮಗೆ ಬೇಡ ಎಂದರೂ ಹಣವನ್ನು ಕೊಟ್ಟು ಹೋಗಿದ್ದಾರೆ ಎಂದು ಮತದಾರರು ತಿಳಿಸಿದ್ದಾರೆ. ಹಣ ಹಂಚಿಕೆ ಮಾಡಿದವರನ್ನು ನಾವು ಈ ಹಿಂದೆ ನೋಡಿರಲಿಲ್ಲ ಎಂದೂ ಮತದಾರರು ಮಾಹಿತಿ ಕೊಟ್ಟಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಹರಿದ ಹಣದ ಹೊಳೆ!
ಸರಿಯೋ ತಪ್ಪೋ ಗೊತ್ತಿಲ್ಲ. ಈ ಉಪ ಚುನಾವಣೆಯಿಂದಾಗಿ ನಾವು ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಮಾಡುವಂತಾಗಿದೆ. ಈ ಹಿಂದೆ ಯಾವುದೇ ಚುನಾವಣೆಯಲ್ಲಿಯೂ ನಮಗೆ ಯಾರೂ ಇಷ್ಟೊಂದು ಹಣವನ್ನು ಕೊಟ್ಟಿರಲಿಲ್ಲ. ಈಗ ಕೊಟ್ಟಿದ್ದಾರೆ. ಜೊತೆಗೆ ಊರಿಗೆ ಒಂದು ಲಕ್ಷ ರೂಪಾಯಿಗಳವರೆಗೆ ಹಣವನ್ನು ಹಂಚಿದ್ದಾರೆ. ಪಾರ್ಟಿ ಮಾಡಲೂ ಹುಡುಗರ ಗುಂಪಿಗೆ ತಲಾ 75 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದಾರೆ. ಈ ಹಣ ತಲುಪಿರುವ ಬಗ್ಗೆಯೂ ಬೇರೆ ಯಾರ್ಯಾರೋ ಬಂದು ಖಚಿತಪಡಿಸಿಕೊಂಡರು ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಶೀಗಿಹಳ್ಳಿ ಶಿಂಗಾಪುರದ ಯುವಕರೊಬ್ಬರು. ವಿಪರ್ಯಾಸ ಎಂದರೆ ಈ ಹಿಂದೆ ಯಾವತ್ತೂ ಹೀಗಾಗಿರಲಿಲ್ಲ. ಆದರೆ ನಮಗೂ ಹಣದ ಅವಶ್ಯಕತೆಯಿತ್ತು ಎನ್ನುತ್ತಾರೆ. ದಯವಿಟ್ಟು ನಮ್ಮ ಹೆಸರು ಬರಿಯಬೇಡಿ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
Recommended Video