ವಿಚಾರವಾದಿ ಎಂ.ಎಂ.ಕಲಬುರ್ಗಿ ಕೊಲೆ ನಡೆದಿದ್ದು ಹೇಗೆ? ಏಕೆ?
ಬೆಂಗಳೂರು, ಆಗಸ್ಟ್ 16: ವಿಚಾರವಾದಿ ಎಂಎಂ ಕಲಬುರಗಿ ಅವರು ಹತ್ಯೆಯಾಗಿ ನಾಲ್ಕು ವರ್ಷಗಳ ನಂತರ ಕೊಲೆಗಾರರನ್ನು ಗುರುತಿಸಲು ಸಾಧ್ಯವಾಗಿದ್ದು, ಆ ಮೂಲಕ ಕೊಲೆಯ ಹಿಂದಿನ ರಹಸ್ಯ, ಕೊಲೆಯ ಉದ್ದೇಶ, ಕೊಲೆಗೆ ಮಾಡಿಕೊಳ್ಳಲಾಗಿದ್ದ ತಯಾರಿ ಎಲ್ಲವೂ ಬಹಿರಂಗಗೊಂಡಿದೆ.
ಆಗಸ್ಟ್ 30 , 2015 ರಲ್ಲಿ ಅವರ ಮನೆಯಲ್ಲಿಯೇ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದ ಇಬ್ಬರು ಕಲಬುರ್ಗಿ ಅವರ ಮೇಲೆ ಗುಂಡಿನ ಮಳೆಗರೆದಿದ್ದರು. ಕಳೆದ ತಿಂಗಳು ಎಂ.ಎಂ.ಕಲಬುರ್ಗಿ ಅವರ ಪತ್ನಿ, ಕಲಬುರ್ಗಿ ಅವರಿಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತಿಸಿದರು. ಅಲ್ಲಿಗೆ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ದೊರೆತಿದ್ದು, ನ್ಯಾಯಾಲಯ ವಿಚಾರಣೆ ಮತ್ತು ತೀರ್ಪು ಬಾಕಿ ಇದೆ.
ಎಂ.ಎಂ.ಕಲಬುರ್ಗಿ ಹತ್ಯೆ : ಮಸಾಲಾವಾಲಾ ಸಿಕ್ಕಿಬಿದ್ದಿದ್ದು ಹೇಗೆ?
ಗೌರಿ ಹತ್ಯೆ ಪ್ರಕರಣದಲ್ಲೂ ಸಂಬಂಧ ಹೊಂದಿದ್ದ ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರುಗಳೇ ಕಲಬುರ್ಗಿ ಅವರ ಹತ್ಯೆ ಮಾಡಿದ್ದಾಗಿ ಪೊಲೀಸರು ದೋಷಾರೋಪ ಪಟ್ಟಿ ಈಗಾಗಲೇ ಸಲ್ಲಿಸಿದ್ದಾರೆ. ತಾವು ಹತ್ಯೆ ಮಾಡಿದ್ದ ಬಗ್ಗೆ ಈ ಇಬ್ಬರೂ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಗಿಯೂ ಅವರ ಹೇಳಿಕೆಗಳ ಸಮೇತ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಗೌರಿ ಲಂಕೇಶ್ ಕೊಲೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆಯೇ ಈ ಕೊಲೆಯ ಹಿಂದಿನ ಸೂತ್ರಧಾರಿ ಆಗಿದ್ದು. ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರಿಗೆ ಸೂಕ್ತ ತರಬೇತಿ ನೀಡಿ ಕಲಬುರ್ಗಿ ಅವರ ಕೊಲೆ ಮಾಡಿಸಿದ್ದಾನೆ.
ಒಂದು ಹೇಳಿಕೆಯಿಂದ ಕಲಬುರ್ಗಿಯನ್ನು ಕೊಲ್ಲುವ ನಿರ್ಧಾರ
ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂಎಂ ಕಲಬುರ್ಗಿ ಅವರು, ಅನಂತಮೂರ್ತಿ ಅವರು ಬರೆದಿದ್ದ 'ನಾಗರ ಕಲ್ಲಿನ ಮೇಲೆ ಮೂತ್ರ ಮಾಡಿದ್ದೆ' ಎಂಬ ವಾಕ್ಯವನ್ನು ಉಲ್ಲೇಖ ಮಾಡಿ. ದೇವರ ನಂಬಿಕೆಯನ್ನು ಪ್ರಶ್ನೆ ಮಾಡಿದ್ದರು. ಇದೇ ಮಾತು ಅವರನ್ನು ಕೊಲ್ಲಲು ಈ ಹಂತಕರಿಗೆ ಕಾರಣವಾಯಿತಂತೆ. ಹೀಗೆಂದು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ. ಆ ಕಾರ್ಯಕ್ರಮಕ್ಕೆ ಕಲಬುರ್ಗಿ ಅವರು ಮತ್ತೊಬ್ಬ ವಿಚಾರವಾದಿ ದಾಬೋಲ್ಕರ್ ಅವರ ಸೊಸೆಯೊಂದಿಗೆ ಬಂದಿದ್ದರಂತೆ. ದಾಬೋಲ್ಕರ್ ಅವರನ್ನೂ ಸಹ ಆಗಸ್ಟ್ 2013 ರಲ್ಲಿ ಹತ್ಯೆ ಮಾಡಲಾಯಿತು. ಅದರ ಹಿಂದೆಯೂ ಅಮೋಲ್ ಕಾಳೆ ಕೈವಾಡದ ಶಂಕೆ ಇದೆ.
ಬಂದೂಕು ಚಲಾಯಿಸುವ ತರಬೇತಿ ಕೊಟ್ಟಿದ್ದ ಕಾಳೆ
ಅಮೋಲ್ ಕಾಳೆಯು ಧರ್ಮ ರಕ್ಷಣೆ ಕಾರ್ಯಕ್ರಮವೊಂದರಲ್ಲಿ ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರನ್ನು ಭೇಟಿ ಆಗಿ ಅವರನ್ನು ಕೊಲೆಗೆ ಆಯ್ದುಕೊಂಡನಂತೆ. ನಂತರ ಈ ಇಬ್ಬರಿಗೂ ಬೆಳಗಾವಿ ಸಮೀಪದ ಕಾಡುಗಳಲ್ಲಿ ಬಂದೂಕು ಚಲಾಯಿಸುವುದು, ಬಾಂಬ್ ತಯಾರಿಸುವುದು ಮತ್ತಿತರೆ ವಿಷಯಗಳ ತಾಲೀಮು ನೀಡಿದ್ದಾನೆ.
ಕಲಬುರ್ಗಿ ಹತ್ಯೆ : ಆರೋಪಿ ಪ್ರವೀಣ್ ಚತುರ್ ಗೌರಿ ಹತ್ಯೆಯಲ್ಲಿ ಸಾಕ್ಷಿ!
ಕದ್ದು ಬೈಕ್ ತಂದುಕೊಟ್ಟ ಸೂರ್ಯವಂಶಿ
ನಂತರ ಸೂರ್ಯವಂಶಿ ಎಂಬುವನಿಗೆ ಬೈಕ್ ಒಂದನ್ನು ಕದ್ದು ತರಲು ಹೇಳಿದ್ದಾನೆ ಅಮೋಲ್ ಕಾಳೆ. ಅದರಂತೆ ಹುಬ್ಬಳ್ಳಿಯಲ್ಲಿ ಬೈಕ್ ಒಂದನ್ನು ಕದ್ದು ತಂದ ಸೂರ್ಯವಂಶಿ ಅದನ್ನು ಬೆಳಗಾವಿಯ ಗಣೇಶ್ ವಿಸ್ಕಿನ್ ಫ್ಯಾಕ್ಟರಿ ಬಳಿ ಬಿಟ್ಟುಬರಲು ಹೇಳಿದ್ದಾನೆ. ನಂತರ 2015 ರ ಆಗಸ್ಟ್ 15 ರಿಂದ ಎಂ.ಎಂ.ಕಲಬುರ್ಗಿ ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಕಲಬುರ್ಗಿ ಅವರನ್ನು ಬಹಳ ವಾರದ ವರೆಗೆ ಹಿಂಬಾಲಿಸಿದ್ದಾರೆ.
ವಿದ್ಯಾರ್ಥಿಗಳ ಸೋಗಿನಲ್ಲಿ ಕಲಬುರ್ಗಿ ಮನೆಗೆ ಬಂದ ಹಂತಕರು
ಅಂತಿಮವಾಗಿ ಆಗಸ್ಟ್ 30 ರಂದು ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬುದ್ಧಿ ಅವರುಗಳು ಕಲಬುರ್ಗಿ ಅವರ ಮನೆ ಬಳಿ ಹೋಗಿದ್ದಾರೆ ಬಾಗಿಲು ತೆರೆದ ಕಲಬುರ್ಗಿ ಅವರ ಪತ್ನಿಗೆ 'ನಾವು ಕಲಬರ್ಗಿ ಅವರ ವಿದ್ಯಾರ್ಥಿಗಳು ಅವರನ್ನು ಕಾಣಲು ಬಂದಿದ್ದೇವೆ' ಎಂದು ಹೇಳಿದ್ದಾರೆ, ಕಲಬುರ್ಗಿ ಅವರು ಬಾಗಿಲ ಬಳಿ ಬರುತ್ತಿದ್ದಂತೆ ಮೊದಲಿಗೆ ಗಣೇಶ್ ವಿಸ್ಕಿನ್ ಗುಂಡು ಹೊಡೆದಿದ್ದಾನೆ. ಆ ನಂತರ ಅಮಿತ್ ಬುದ್ದಿ ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಕೊಂದು, ಕದ್ದ ಬೈಕಿನಲ್ಲಿ ಅಲ್ಲಿಂದ ಪರಾರಿ ಆಗಿದ್ದಾರೆ. ನಂತರ ಆ ಬೈಕ್ ಅನ್ನು ಬೇರೊಬ್ಬರ ಸಹಾಯದಿಂದ ನಾಶ ಮಾಡಿದ್ದಾರೆ.