ದಿನಪತ್ರಿಕೆಗಳ ಮುಖಪುಟದಲ್ಲಿ 'ಮಂಗಳಯಾನ'
ಬೆಂಗಳೂರು. ಸೆ. 25 : ಮಂಗಳನ ಅಂಗಳಕ್ಕೆ 'ಮಾಮ್' ತೆರಳಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ವಿಜ್ಞಾನಿಗಳೇನೋ ನಿಟ್ಟುಸಿರು ಬಿಟ್ಟರು. ಆದರೆ ಇತ್ತ ಪತ್ರಿಕೆಗಳ ಕಚೇರಿಯಲ್ಲಿ ತಲೆಬಿಸಿ ಆರಂಭವಾಯಿತು. ಹೌದು... ಸೆ. 25 ರ ಪತ್ರಿಕೆ ಮುಖಪುಟ ರೆಡಿಮಾಡುವುದು ಸುಲಭದ ಕೆಲಸವಾಗಿರಲಿಲ್ಲ.
ಮಂಗಳಯಾನದ ಯಶಸ್ಸು, ಕಲ್ಲಿದ್ದಲು ಗಣಿ ಕಂಪನಿಗಳಿಗೆ ನೀಡಿದ್ದ ಗುತ್ತಿಗೆ ರದ್ದು, ತೂಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪುಡ್ ಪಾರ್ಕ್ ಉದ್ಘಾಟನೆ, ವೈಭವದ ದಸರಾ ಆರಂಭ ಎಲ್ಲವೂ ಮುಖ್ಯವಾದ ಸುದ್ದಿಗಳೇ. ಆದರೆ ಎಲ್ಲದಕ್ಕಿಂತ ಮುಖ್ಯವಾದ್ದು ಮಂಗಳಯಾನ. ಸರಿ ಅದಕ್ಕೆ ಒಂದು ಉತ್ತಮ ಶೀರ್ಷಿಕೆ ಬೇಕಲ್ಲ!
ಮುಖಪುಟದಲ್ಲಿ ಮೇಲಿನ ಎಲ್ಲ ಸುದ್ದಿಗಳಿಗೆ ಜಾಗ ನೀಡುವ ಸಂದಿಗ್ಧ ಒಂದೆಡೆಯಾದರೆ, ಮಂಗಳಯಾನವನ್ನು ಬೇರೆಲ್ಲರಿಗಿಂತ ಚೆನ್ನಾಗಿ 'ಕವರ್' ಮಾಡಬೇಕೆಂಬ ಪ್ರತಿಷ್ಠೆ ಇನ್ನೊಂದೆಡೆ. ಒಟ್ಟಿನಲ್ಲಿ ಎಷ್ಟೆಷ್ಟೋ ಶೀರ್ಷಿಕೆಗಳು ಚರ್ಚಿತವಾಗಿ ಕೊನೆಗೆ ಉಳಿದ 'ಗಟ್ಟಿ ಕಾಳು'ಗಳನ್ನು ಜನರ ಮುಂದೆ ಪತ್ರಿಕೆಗಳು ಪ್ರಸ್ತುತಪಡಿಸಿವೆ.(ಕನ್ನಡ ದಿನಪತ್ರಿಕೆಗಳಲ್ಲಿ ಕಂಡ 'ಅನಂತ' ಶಕ್ತಿ)
ಕೆಲವು ಸರಳ ಹೆಡ್ಲೈನ್ಗಳಾಗಿದ್ದರೆ, ಕೆಲವಲ್ಲಿ ಸರ್ಕಸ್ ಮಾಡಲು ಹೋಗಿ ನಿಯಂತ್ರಣ ತಪ್ಪಿದೆ. ಒಟ್ಟಿನಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವ ಓದುಗ ದೊರೆಗೆ ಯಾವುದು ಇಷ್ಟವಾಗಿದೆಯೋ ಗೊತ್ತಿಲ್ಲ.
ಎಲ್ಲಾ ದಿನಪತ್ರಿಕೆಗಳನ್ನು ಎಲ್ಲರೂ ನೋಡಿರುತ್ತಾರೆ ಎಂದು ಹೇಳುವಂತಿಲ್ಲ. ವಿವಿಧ ದಿನಪತ್ರಿಕೆಗಳು ಮಂಗಳಯಾನದ ಯಶಸ್ಸು ಕುರಿತು ನೀಡಿದ ಹೆಡ್ಲೈನ್ಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಇದು...
ಇನ್ನು ಸೂರ್ಯ ಶಿಕಾರಿ
ಮಂಗಳಯಾನ ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳು ಘೋಷಿಸಿದ ಸೂರ್ಯನೆಡೆಗೆ ನೌಕೆ ಬಿಡುವ ವಿಚಾರವನ್ನೇ ಹೆಡ್ಲೈನ್ ಮಾಡಿದ ರೀತಿ.
ಮಾಮ್ ರೇ ಮಾಮ್
ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಯನ್ನೇ ವಿಭಿನ್ನವಾಗಿ ಪ್ರಸ್ತುತಪಡಿಸಿದ ಉದಯವಾಣಿ.
ಮಂಗಳಕರ ದಸರಾ
ಮಂಗಳಯಾನದ ಘಟನಾವಳಿಗಳನ್ನು ಚಿತ್ರಿಸಿ ಯಶಸ್ಸನ್ನು 'ಮಂಗಳಕರ' ಎಂದು ಕರೆದ ವಿಜಯ ಕರ್ನಾಟಕ.
ಮಂಗಳಯಾನ ಯಶಸ್ವಿ
ಸರಳವಾದ ಶೀರ್ಷಿಕೆ ನೀಡಿದ ವಾರ್ತಾಭಾರತಿ
ಮಂಗಳಮಯ ನಮೋರಾತ್ರಿ
ನರೇಂದ್ರ ಮೋದಿ ರಾಜ್ಯದ ಆಗಮನವನ್ನೇ 'ಶುಭಕರ' ಎಂದು ಬಿಂಬಿಸಿ ಭಾರತದ ವೈಜ್ಞಾನಿಕ ಸಾಧನೆ ಬಿಂಬಿಸಿದ ಕನ್ನಡ ಪ್ರಭ.
ಶಹಬ್ಬಾಸ್ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆಯನ್ನು ಹೊಗಳಿದ ಹೊಸ ದಿಗಂತ.
ಮಂಗಳಯಾನದಲ್ಲಿ ಇಸ್ರೋ ಇತಿಹಾಸ
ಇಸ್ರೋ ಸಾಧನೆ ಹೇಗೆ ದಾಖಲೆ ಪುಟ ಸೇರಿತು ಎಂಬುದನ್ನು ವಿವರಿಸಿದ ಪ್ರಜಾವಾಣಿಯ ಸರಳ ಶೀರ್ಷಿಕೆ.
ಭೇಷ್ ಇಸ್ರೋ
ವಿಭಿನ್ನ ಡಿಸೈನ್ನಲ್ಲಿ ಹೊರಬಂದ ಸಂಯುಕ್ತ ಕರ್ನಾಟಕ.
ಮಂಗಳನ ಅಂಗಳಕ್ಕೆ ಪ್ರವೇಶ ಪಡೆದ ಭಾರತ
ಮಂಗಳನ ಅಂಗಳಕ್ಕೆ ಹೊಸದಾಗಿ ಪ್ರವೇಶ ಪಡೆದ ಭಾರತ ಎಂಬುದನ್ನು ಹೇಳಿದ ಟೈಮ್ಸ್ ಆಫ್ ಇಂಡಿಯಾ.
ಮಂಗಳನಲ್ಲಿ ಭಾರತದ ಗುರುತು
ಭಾರತದ ಬಾಹ್ಯಾಕಾಶ ನೌಕೆ ಮಂಗಳನಲ್ಲಿ ಹೆಜ್ಜೆ ಇಟ್ಟಿದ್ದನ್ನು ಡೆಕ್ಕನ್ ಹೆರಾಲ್ಡ್ ವಿವರಿಸಿದ ಬಗೆ.
ಹೆಲೊ ಮಾರ್ಸ್
ಮಂಗಳನಿಗೆ ಹೆಲೊ ಎಂದ ಇಂಡಿಯನ್ ಎಕ್ಸ್ ಪ್ರೆಸ್.
ಮಂಹಗಳನಲ್ಲಿ ವಿಶೆಷ ದಿನ
ಮಂಗಳನ ಅಂಗಳಕ್ಕೆ ಕಾಲಿಟ್ಟ ಘಳಿಗೆಯನ್ನು ದಾಖಲಿಸಿದ ದಿ ಹಿಂದು.