ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ!
ಬೆಂಗಳೂರು, ಜನವರಿ 24: 1136 ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ಭಾನುವಾರ ಪರೀಕ್ಷೆ ನಡೆಬೇಕಿತ್ತು. ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 14 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 35 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
ಶನಿವಾರ ಸಿಸಿಬಿ ಪೊಲೀಸರು ಚಂದ್ರು ಹಾಗೂ ರಾಚಪ್ಪ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ ಬೆಂಗಳೂರು ಬಿಟ್ಟು ಬೇರೆ ಬೇರೆ ಜಿಲ್ಲೆಗಳಿಗೂ ಹಬ್ಬಿದೆ. ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಲು ಬೆಳಗಾವಿ, ಶಿವಮೊಗ್ಗ, ಅಥಣಿ, ಹಾಸನದಿಂದ ಬಂದಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 10 ಲಕ್ಷ ರೂ.ಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೆಪಿಎಸ್ಸಿ ಮತ್ತೊಂದು ಅಕ್ರಮ ಬಯಲು; ಆಯ್ಕೆ ಪಟ್ಟಿ ರದ್ದು
ಶನಿವಾರ ಸಂಜೆಯೇ ಪೇಪರ್ ಸಿಕ್ಕಿತ್ತು
ಶನಿವಾರ ಸಂಜೆ ಆರೋಪಿ ಚಂದ್ರುಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು. ಉಲ್ಲಾಳ ಬಳಿಯ ಕಟ್ಟಡದಲ್ಲಿ ಪ್ರಶ್ನೆ ಪತ್ರಿಕೆ ನೀಡಲು ಹಲವರನ್ನು ಆತ ಕರೆಸಿಕೊಂಡಿದ್ದ. ಈ ವೇಳೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಅಭ್ಯರ್ಥಿಗಳು ಹಾಗೂ ಡೀಲರ್ಗಳು ಇರುವಂತೆಯೇ ದಾಳಿ ಮಾಡಿದ್ದಾರೆ. ಮೊದಲ ಹಂತದಲ್ಲಿ ಪೊಲೀಸರು ಚಂದ್ರು ಮತ್ತು ರಾಚಪ್ಪ ಕೈಗೆ ಪತ್ರಿಕೆ ಎಲ್ಲಿಂದ ಬಂತು? ಎಂದು ತನಿಖೆಯನ್ನು ಮಾಡುತ್ತಿದ್ದಾರೆ.
ಉಲ್ಲಾಳದ ಉಪಕಾರ್ ಲೇಔಟ್ ಅಪಾರ್ಟ್ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಅಕ್ರಮಮ ಬಯಲಾಗಿದೆ. ಕೆಪಿಎಸ್ಸಿಯ ಅಧಿಕಾರಿಯೇ ಪತ್ರಿಕೆ ಲೀಕ್ ಮಾಡಿರುವ ಶಂಕೆ ಇದೆ. ಪ್ರಥಮ ದರ್ಜೆ ಸಹಾಯಕ ರಮೇಶ್ ಪತ್ರಿಕೆ ಲೀಕ್ ಮಾಡಿ ಆರೋಪಿಗಳಾದ ಚಂದ್ರು , ರಾಜಪ್ಪ ಮೂಲಕ ರಾಜ್ಯದ ಮೂಲೆ ಮೂಲೆ ತಲುಪಿಸಲು ಯೋಜನೆ ರೂಪಿಸಿದ್ದರು. ಒಬ್ಬರಿಗೆ 10 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವ ಶಂಕೆ ಇದ್ದು, ರಮೇಶ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಆರೋಪಿ ಚಂದ್ರು ಗೋಳಾಟ
ಸಿಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಿದ್ದಂತೆ ಆರೋಪಿ ಚಂದ್ರು ಹೈಡ್ರಾಮ ಮಾಡಿದ್ದಾನೆ. ತನ್ನನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾನೆ. ಚಂದ್ರುಗೆ ಮದುವೆ ನಿಶ್ಚಯವಾಗಿದ್ದು, ಇನ್ನೆರಡು ತಿಂಗಳಿನಲ್ಲಿ ಮದುವೆ ನಡೆಯಬೇಕಿತ್ತು. ಉಳ್ಳಾಲದ ಬಳಿ ಪ್ಲಾಟ್ ಖರೀದಿಸಿದ್ದು, ಇನ್ನೂ ನೋಂದಣಿ ಸಹ ಮಾಡಿಕೊಂಡಿರಲಿಲ್ಲ. ಪರೀಕ್ಷೆ ಮುಗಿದ ಮೇಲೆ ಹಣ ಕೊಡಿ ಎಂದು ಕೆಲವು ಅಭ್ಯರ್ಥಿಗಳಿಗೆ ಉತ್ತರ ಪ್ರತಿಯನ್ನು ಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಳಗಾವಿಯಿಂದ ಕಾರಿನಲ್ಲಿ ಬಂದ ಅಭ್ಯರ್ಥಿಗಳ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ
ಪ್ರಶ್ನೆ ಪತ್ರಿಕೆ ಮಾರಾಟದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚಂದ್ರು ಮನೆ ಮೇಲೆ ದಾಳಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಪ್ರಶ್ನೆ ಪತ್ರಿಕೆ ಪ್ರತಿ, ಉತ್ತರ ಪ್ರತಿಗಳು ಸಿಕ್ಕಿವೆ. ಕೂಡಲೇ ಕೆಪಿಎಸ್ಸಿ ಅಧಿಕಾರಿಗಳ ಸಂಪರ್ಕ ಮಾಡಿದ್ದ ಸಿಸಿಬಿ ಅಧಿಕಾರಿಗಳು. ಆ ಬಳಿಕ ಪರೀಕ್ಷೆ ಮುಂದೂಡುವ ಪ್ರಕಟಣೆ ಹೊರಡಿಸಲಾಗಿತ್ತು. ಆರೋಪಿ ಚಂದ್ರು ಬಳಿಯಿದ್ದ ಮೊಬೈಲ್ ವಶಕ್ಕೆ ಪಡೆದ ಅಧಿಕಾರಿಗಳು ಆತನ ಮೂಲಕವೇ ಉಳಿದ ಅಭ್ಯರ್ಥಿಗಳನ್ನು ಕರೆಸಿಕೊಂಡಿದ್ದರು. ಶನಿವಾರ ರಾತ್ರಿಯೇ 6 ಆರೋಪಿಗಳನ್ನು ಬಂಧಿಸಿದರು.
ಎರಡು ಗಂಟೆಗಳ ಕಾರ್ಯಾಚರಣೆ
ಆರೋಪಿ ಚಂದ್ರು ಬಂಧಿಸಲು ಸಿಸಿಬಿ ಪೊಲೀಸರು ಸತತ ಎರಡು ಗಂಟೆಗಳ ಕಾರ್ಯಾಚರಣೆ ಮಾಡಿದ್ದಾರೆ. ಅಪಾರ್ಟ್ಮೆಂಟ್ನ ಯಾವ ಫ್ಲಾಟ್ನಲ್ಲಿ ಆರೋಪಿ ಇದ್ದ ಎಂಬುದು ಖಚಿತವಾಗಿ ಗೊತ್ತಿರಲಿಲ್ಲ. ನಿರಂತರವಾಗಿ ವಾಚ್ ಮಾಡಿದ ಸಿಸಿಬಿ ಪೊಲೀಸರು ನಾಲ್ಕು ಅಂತಸ್ಥಿನ ಅಪಾರ್ಟ್ಮೆಂಟ್ನಲ್ಲಿ ತಲಾಶ್ ಶುರು ಮಾಡಿದ್ದರು. 2ನೇ ಮಹಡಿಯಲ್ಲಿದ್ದ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಆದರೆ, ಆತ ಅಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಮತ್ತೆ ಹೊರಗೆ ಬಂದು ಕಾದು ಕುಳಿತ ಸಿಸಿಬಿ ಪೊಲೀಸರು. ಅದೇ ವೇಳೆ ಹೊರಗೆ ಹೊಗಿದ್ದ ಚಂದ್ರು ಅದೇ ಮನೆ ಒಳಗೆ ಹೋಗಿದ್ದನ್ನು ನೋಡಿದ್ದರು. ಬಳಿಕ ಮನೆಗೆ ನುಗ್ಗಿದ್ದರು.
ಆಕ್ಸಿಡೆಂಟ್ ಕಥೆ ಹೇಳಿದ್ದ ಪೊಲೀಸರು
ಚಂದ್ರು ತಂದೆ-ತಾಯಿಯ ಜೊತೆ ವಾಸವಾಗಿದ್ದ, ಪೊಲೀಸರು ದಾಳಿ ನಡೆಸಿದಾಗ ಮನೆ ಬಾಗಿಲನ್ನು ತಾಯಿ ತೆರೆದರು. ಯಾರು ನೀವು ಎಂದು ಕೇಳಿದ್ದರು. ಈ ವೇಳೆ ಮಫ್ತಿಯಲ್ಲಿದ್ದ ಸಿಸಿಬಿ ಅಧಿಕಾರಿಗಳು ನಿಮ್ಮ ಮಗ ನಮ್ಮ ಗಾಡಿಗೆ ಗುದ್ದಿ ಬಂದಿದ್ದಾನೆ ಎಂದು ಆಕ್ಸಿಡೆಂಟ್ ಕಥೆ ಹೇಳಿದ್ದರು. ಗಾಡಿಗೆ ಡ್ಯಾಮೆಜ್ ಆಗಿದೆ ಎಲ್ಲಿ ಅವನು? ಎಂದು ಪ್ರಶ್ನಿಸಿದ್ದರು. ಆತ ಇಲ್ಲ ಬೇಕಾದರೆ ಹಣ ಕೊಡುತ್ತೇನೆ ಎಂದು ತಾಯಿ ಹೇಳಿದ್ದರು.
ಚಂದ್ರು ಮನೆಯಲ್ಲಿ ಇಲ್ಲ ಎಂದರೂ ಮನೆಯ ರೂಂ ಬಾಗಿಲು ಓಪನ್ ಮಾಡಿದ ಪೊಲೀಸರಿಗೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದ ಚಂದ್ರು ಸಿಕ್ಕಿದ್ದ. ಆಕ್ಸಿಡೆಂಟ್ ಮಾಡಿ ಹಾಗೆ ಬಂದಿದೆಯಾ ಅಂತ ಅಲ್ಲಿಂದ ಹೊರಗೆ ಕರೆದುಕೊಂಡು ಬಂದ ಪೊಲೀಸರು, ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
Recommended Video
ಶಿವಕುಮಾರಯ್ಯ ಜೊತೆ ಸಂಪರ್ಕ
ಆರೋಪಿ ಚಂದ್ರು ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಆಗಿದ್ದ. ಕೋರಮಂಗಲ ಕಚೇರಿ ಇನ್ಸ್ಪೆಕ್ಟರ್ ವಿಜಿಲಿಯನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಲೇ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಮುಂದಾಗಿದ್ದ. ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಗರಣದ ಪ್ರಮುಖ ಕಿಂಗ್ ಪಿನ್ ಆಗಿರುವ ಶಿವಕುಮಾರಯ್ಯ ಅಲಿಯಾಸ್ ಸ್ವಾಮೀಜಿ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಶಿವಕುಮಾರಯ್ಯನ ಕೈವಾಡವಿದೆಯೇ? ಎಂದು ಪೊಲೀಸರ ತನಿಖೆ ಬಳಿಕ ತಿಳಿಯಲಿದೆ.