ಮಧ್ಯಪ್ರದೇಶ, ಪುದುಚೇರಿಗೂ ಹರಡಿದ ಕರ್ನಾಟಕದ ಹಿಜಾಬ್ ವಿವಾದದ ಕಿಡಿ
ಬೋಪಾಲ್, ಫೆಬ್ರವರಿ 9: ಕರ್ನಾಟಕದಲ್ಲಿ ಹೊತ್ತಿಕೊಂಡಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಕಿಡಿ ರಾಜ್ಯದ ಗಡಿ ದಾಟಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲೂ ಈ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಿಜಾಬ್ ಪರವಾಗಿ ಐವರು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಕೋರ್ಟ್, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಹಿಜಾಬ್ ವಿವಾದ: ಶಾಂತಿ, ಸುವ್ಯವಸ್ಥೆ ಕಾಪಾಡಲು ಹೈಕೋರ್ಟ್ ಮನವಿ
ಕರ್ನಾಟಕದ ಹಿಜಾಬ್ ವಿವಾದ ಮಧ್ಯಪ್ರದೇಶದಲ್ಲೂ ಸುದ್ದಿ ಆಗಿದ್ದು, ಪ್ರೌಢಶಿಕ್ಷಣ ಸಚಿವ ಇಂದರ್ ಸಿಂಗ್ ಪರಮರ್ ಶಾಲೆಗಳಲ್ಲಿ ಶಿಸ್ತು ಮತ್ತು ಸಮವಸ್ತ್ರಕ್ಕೆ ಗೌರವ ನೀಡುವಂತೆ ಅಭಿಪ್ರಾಯ ತಿಳಿಸಿದ್ದಾರೆ. ಇತ್ತ ಪುದುಚೇರಿಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ ಶಿಕ್ಷಕ ಹಾಗೂ ಘಟನೆ ಕುರಿತಾಗಿ ತನಿಖೆ ನಡೆಸುವಂತೆ ಅರಿಯಕುಪ್ಪಂ ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೂರು ದಿನ ಶಾಲೆ-ಕಾಲೇಜು ರಜೆ ಘೋಷಣೆ
ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಮೂರು ದಿನಗಳವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಘಟನೆ ನಂತರ ರಾಜ್ಯದಲ್ಲಿ ವಿವಾದ ಹುಟ್ಟಿಕೊಂಡಿತು. ಕಳೆದ ತಿಂಗಳು ಹುಟ್ಟಿಕೊಂಡ ವಿವಾದ ಮಂಗಳವಾರದ ಹೊತ್ತಿಗೆ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶದ ಕಿಡಿಯನ್ನು ಹೊತ್ತಿಸಿತು. ಕೆಲವು ಬಲಪಂಥೀಯ ಸಂಘಟನೆಗಳು ಶಾಲಾ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.
ಶಾಲೆಗಳಲ್ಲಿ ಹಿಜಾಬ್ ಬದಲಿಗೆ ಶಿಸ್ತಿಗೆ ಆದ್ಯತೆ ನೀಡಲು ಸಲಹೆ
ಮಧ್ಯಪ್ರದೇಶದ ಪ್ರೌಢಶಿಕ್ಷಣ ಸಚಿವ ಇಂದರ್ ಸಿಂಗ್ ಪರಮರ್ ಹಿಜಾಬ್ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ್ದು, ಸರ್ಕಾರವು ಶಾಲೆಗಳಲ್ಲಿ ಶಿಸ್ತು ಪಾಲನೆಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ. "ಹಿಜಾಬ್ ಎಂಬುದು ಸಮವಸ್ತ್ರದ ಭಾಗವಲ್ಲ, ಶಾಲೆಗಳಲ್ಲಿ ಅದನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಜನರು ಸಂಪ್ರದಾಯವನ್ನು ತಮ್ಮ ಮನೆಯಲ್ಲಿ ಪಾಲಿಸಬೇಕೇ ವಿನಃ ಶಾಲೆಗಳಲ್ಲಿ ಅಲ್ಲ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಧರಿಸುವಂತೆ ನಾವು ಶಿಸ್ತು ಪಾಲನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಸುಮಾರು 1.25 ಲಕ್ಷ ಸರ್ಕಾರಿ ಶಾಲೆಗಳನ್ನು ಹೊಂದಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶಾಲಾ ಸಮವಸ್ತ್ರ ಒದಗಿಸಲಾಗಿದೆ. ಒಂದರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ರಾಜ್ಯ ಸರ್ಕಾರ ಹಣ ನೀಡುತ್ತದೆ.
ಮಧ್ಯಪ್ರದೇಶದಲ್ಲಿ ಶಿಕ್ಷಣ ಸಚಿವ ಆದ್ಯತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆ
ಮಧ್ಯಪ್ರದೇಶದಲ್ಲಿ ಹಿಜಾಬ್ ವಿಚಾರ ಸದ್ದು ಮಾಡುತ್ತಿದ್ದಂತೆ, ಶಿಕ್ಷಣ ಸಚಿವರ ಹೇಳಿಕೆಗೆ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಸ್ ವಿರೋಧ ವ್ಯಕ್ತಪಡಿಸಿದ್ದಾರೆ. "ಶಿಕ್ಷಣ ಸಚಿವರ ಆದ್ಯತೆ ಏನು ಎಂಬುದನ್ನು ಮೊದಲು ನಮಗೆ ತಿಳಿಸಲಿ. ಕೊವಿಡ್-19 ನಂತರದಲ್ಲಿ ಆರಂಭಗೊಂಡಿರುವ ಶಾಲೆಯಲ್ಲಿ ಲಸಿಕೆ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದೋ ಅಥವಾ ತಮ್ಮ ಕೋಮು ವಿಭಜನೆ ಅಜೆಂಡಾವನ್ನು ತರುವುದೋ ಎಂದು ಪ್ರಶ್ನಿಸಿದ್ದಾರೆ.
"ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಅವರ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ. ಆದರೆ ಬಿಜೆಪಿ ಸರ್ಕಾರವು ಶಾಲೆಗೆ ಹೋಗುವ ಮಕ್ಕಳ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ. ಸಿಖ್ಖರು ಪೇಟ ಧರಿಸುವುದು ಮತ್ತು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಮೊದಲಿನಿಂದಲೂ ನಡೆಯುತ್ತಿದೆ. ಆದರೆ ಸರ್ಕಾರವು ಈ ಪ್ರಾಚೀನ ಸಂಪ್ರದಾಯಗಳನ್ನು ನಿರ್ಬಂಧಿಸುವುದಕ್ಕೆ ಬಯಸುತ್ತಿದ್ದು, ಇದು ಅಧಿಕಾರದಲ್ಲಿ ಇರುವವರ ಮಾನಸಿಕ ದಿವಾಳಿತನವನ್ನು ಸೂಚಿಸುತ್ತದೆ," ಎಂದು ಅಬ್ಬಾಸ್ ಹಫೀಸ್ ಹೇಳಿದ್ದಾರೆ.
ಪುದುಚೇರಿಯಲ್ಲೂ ಸುದ್ದಿಯಾದ ಹಿಜಾಬ್ ವಿವಾದ
ಪುದುಚೇರಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯು ತಲೆಗೆ ಸ್ಕಾರ್ಫ್ ಅನ್ನು ಧರಿಸಿರುವುದಕ್ಕೆ ವಿರೋಧಿಸಿದ್ದಾರೆ ಎಂಬ ಬಗ್ಗೆ ವಿದ್ಯಾರ್ಥಿಗಳ ಗುಂಪು ಮತ್ತು ಇತರೆ ಸಂಘಟನೆಗಳು ಶಿಕ್ಷಣ ನಿರ್ದೇಶನಾಲಯದ ವಕ್ತಾರರಿಗೆ ದೂರು ನೀಡಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಅಸಲಿಗೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಶಾಲೆಯಿಂದ ಮಾಹಿತಿ ಕೇಳಿದ್ದೇವೆ. ಅದನ್ನು ತಿಳಿದ ನಂತರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದು, ಈಗ ಆಕ್ಷೇಪಣೆ ಏಕೆ ಬಂದಿತು ಎಂದು ಎಡ-ಪಂಥೀಯ ಬೆಂಬಲಿತ ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾದ ಸ್ಥಳೀಯ ಮುಖ್ಯಸ್ಥರು ಪ್ರಶ್ನಿಸಿದ್ದಾರೆ. ವೀರಂಪಟ್ಟಿನಂ, ಎಂಬಾಲಂ ಮತ್ತು ತಿರುಕನೂರ್ನ ಕೆಲವು ಶಾಲೆಗಳು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ನಡೆಸಿದ ರೀತಿಯ ಕಸರತ್ತನ್ನು ಪ್ರೋತ್ಸಾಹಿಸುತ್ತಿವೆ ಎಂಬ ದೂರುಗಳು ಬಂದಿವೆ ಎಂದು ಅವರು ದೂಷಿಸಿದ್ದಾರೆ.
Recommended Video