ಬಮೂಲ್ ನಲ್ಲಿ ಮಾಗಡಿ ಬಾಲುಗೆ ಕುಮಾರಣ್ಣ-ರೇವಣ್ಣನಿಂದ ಸೋಲಿನ ರುಚಿ
ರಾಮನಗರ, ಮೇ 3: ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷಗಾದಿಗೆ ಏರಲು ಒಂದು ತಿಂಗಳಿಂದ ಬಿರುಸಿನ ಚಟುವಟಿಕೆಗಳು ನಡೆದಿದ್ದವು. ಮಾಗಡಿ ಶಾಸಕ ಬಾಲಕೃಷ್ಣರ ಬಲಗೈ ಬಂಟ ಆಗಲಕೋಟೆ ನರಸಿಂಹಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಶಾಸಕ ಬಾಲಕೃಷ್ಣ ಮತ್ತು ಅವರ ಸೋದರ ಅಶೋಕ್ ನಡೆಸಿದ ಎಲ್ಲ ಪ್ರಯತ್ನಗಳು ಹುಸಿ ಹೋಗಿವೆ.
ಮಾಗಡಿಯ ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಪರವಾಗಿ ಡಿಕೆಶಿ ಸೋದರರು, ಬಾಲಕೃಷ್ಣ ಬ್ರದರ್ಸ್, ಚಲುವರಾಯಸ್ವಾಮಿ, ಜಮೀರ್ ಭಾರೀ ಕಸರತ್ತು ನಡೆಸಿದ್ದರು. ಆದರೆ ಚುನಾವಣೆಯಲ್ಲಿ ಗೆದ್ದಿದ್ದು ಮಾತ್ರ ದೊಡ್ಡಬಳ್ಳಾಪುರದ ಜೆಡಿಎಸ್ ಬೆಂಬಲಿತ ಅಪ್ಪಯ್ಯಣ್ಣ. ಅವರ ಗೆಲುವಿಗೆ ಕಾರಣರಾದದ್ದು ಎಚ್ ಡಿಕೆ ಬ್ರದರ್ಸ್.
ಬಮೂಲ್ನಲ್ಲಿ ಐವರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ಬಿಜೆಪಿ ಬೆಂಬಲಿತ ಮೂವರು ಹಾಗೂ ಜೆಡಿಎಸ್ನ ನಾಲ್ಕು ಮಂದಿ ಹಾಗೂ ಸರಕಾರದ ನಾಮನಿರ್ದೇಶಿತ ನಿರ್ದೇಶಕರಿಗೆ ಮತ ಚಲಾವಣೆ ಹಕ್ಕಿತ್ತು. ಈ ಬಾರಿ ಮಾಗಡಿಯ ನರಸಿಂಹಮೂರ್ತಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಬೆಂಬಲ ಪಡೆದುಕೊಂಡು ಅಧ್ಯಕ್ಷರಾಗುವುದಕ್ಕೆ ಎಲ್ಲಾ ಸಿದ್ಧತೆ ಆಗಿತ್ತು.
ಡಿಕೆಶಿ ಬ್ರದರ್ಸ್ ಜತೆಗೆ ದೋಸ್ತಿ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಶಾಸಕ ಬಾಲಕೃಷ್ಣ ಗ್ಯಾಂಗ್ ಮತ ಚಲಾಯಿಸಿದಾಗಿನಿಂದ ಡಿಕೆಶಿ ಬ್ರದರ್ಸ್ ಜೊತೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಬಮೂಲ್ ಚುನಾವಣೆಯಲ್ಲಿ ನರಸಿಂಹಮೂರ್ತಿ ಗೆಲುವಿಗೆ ಖುದ್ದು ಡಿಕೆಶಿ ಬ್ರದರ್ಸ್ ಮತ್ತು ಬಾಲು ಬ್ರದರ್ಸ್ ಅಖಾಡಕ್ಕಿಳಿದಿದ್ದರು.
ನರಸಿಂಹಮೂರ್ತಿ ಅಧ್ಯಕ್ಷರಾಗಬಾರದು
ಈ ನಡುವೆ ಬಾಲಕೃಷ್ಣ ಬೆಂಬಲಿತ ನರಸಿಂಹಮೂರ್ತಿ ಅವರು ಅಧ್ಯಕ್ಷರಾಗಬಾರದು ಎಂದು ಜೆಡಿಎಸ್ ಸದಸ್ಯರೆಲ್ಲ ಸೇರಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ರೇವಣ್ಣರ ಬಳಿ ಹೇಳಿಕೊಂಡಿದ್ದರು. ಅಲ್ಲಿಂದ ಶುರುವಾಯಿತು ಏಟಿಗೆ ಎದಿರೇಟು ಕೊಡುವ ತಂತ್ರ. ಬಿಜೆಪಿಯ ಹೊಸಕೋಟೆ ಮಂಜುನಾಥ್, ಆಂಜಿನಪ್ಪ ಸೇರಿ ಮೂವರು ನಿರ್ದೇಶಕರನ್ನು ಜೆಡಿಎಸ್ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಮನವೊಲಿಸಲು ಸಫಲರಾದರು.
ಕಾಂಗ್ರೆಸ್ ಮತ ಸೆಳೆದರು
ಕಾಂಗ್ರೆಸ್ ಮತಗಳನ್ನು ಕೂಡ ಸೆಳೆಯಲು ಪ್ಲ್ಯಾನ್ ಮಾಡಿದರು. ಅದರಂತೆ ಕಾಂಗ್ರೆಸ್ ಬೆಂಬಲಿತ ಕೆ.ಎಂ.ಎಫ್ ನಾಗರಾಜ್ ಕೂಡ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸುತ್ತಾರೆಂಬುದು ಖಚಿತವಾಯಿತು. ನಂತರ ಅಧ್ಯಕ್ಷಗಾದಿ ರೇಸ್ ನಲ್ಲಿ ದೊಡ್ಡಬಳ್ಳಾಪುರದ ಅಪಯ್ಯಣ್ಣ ಹಾಗೂ ಚನ್ನಪಟ್ಟಣದ ಲಿಂಗೇಶ್ ಇದ್ದರು.
ಒಡಂಬಡಿಕೆ
ಇಬ್ಬರನ್ನೂ ಕರೆದು ಖುದ್ದು ಎಚ್.ಡಿ.ಕೆ ಬ್ರದರ್ಸ್ ಮಾತುಕತೆ ನಡೆಸಿ, ಮೊದಲ ಅವಧಿಗೆ ಅಪ್ಪಯ್ಯಣ್ಣ, ಎರಡನೇ ಅವಧಿಗೆ ಲಿಂಗೇಶ್ ಅಧ್ಯಕ್ಷರಾಗಲು ಅನುವು ಮಾಡಿಕೊಡಬೇಕೆಂಬ ಒಡಂಬಡಿಕೆಯಾಯಿತು.
ಎದುರಾಳಿಗಳ ತಂತ್ರ ಪಲ್ಟಿ
ಚುನಾವಣೆಯಲ್ಲಿ 16 ಮತಗಳು ಚಲಾವಣೆಗೊಂಡವು. ಅದರಲ್ಲಿ ಜೆಡಿಎಸ್ ಬೆಂಬಲಿತ ದೊಡ್ಡಬಳ್ಳಾಪುರದ ಅಪ್ಪಯ್ಯಣ್ಣ 10 ಮತ ಪಡೆದರೆ, ಮಾಗಡಿಯ ನರಸಿಂಹಮೂರ್ತಿ ಕೇವಲ ಆರು ಮತ ಪಡೆದರು. ಎದುರಾಳಿಗಳ ಎಲ್ಲ ತಂತ್ರವನ್ನು ಒಂದೇ ದಿನಕ್ಕೆ ಉಲ್ಟಾ ಮಾಡಿ ಬಮೂಲ್ ನಲ್ಲಿ ಜೆಡಿಎಸ್ ಬೆಂಬಲಿತ ಪಟ್ಟಕ್ಕೇರುವಂತೆ ಮಾಡಿದರು.