ಕರ್ನಾಟಕ ಚುನಾವಣೆ ಬಗ್ಗೆ ರಾಹುಲ್ - ಸಿದ್ದು ಫೋನ್ ಸಂಭಾಷಣೆ
ಬೆಂಗಳೂರು, ಜನವರಿ 02: "ನಗರ ಪ್ರದೇಶದ ಮತಗಳನ್ನು ಸೆಳೆಯಲು ಕರ್ನಾಟಕದಲ್ಲಿ ಏನೆಲ್ಲ ಕ್ರಮಕೈಗೊಂಡಿದ್ದೀರಿ..?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಹೊಸ ವರ್ಷಕ್ಕೆ ಶುಭ ಹಾರೈಸಲು ಅವರಿಗೆ ಕರೆ ಮಾಡಿದ್ದ ರಾಹುಲ್ ಗಾಂಧಿ, ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನ ಸ್ಟ್ರಾಟಜಿಗಳೇನು ಎಂದು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿಯಲ್ಲಿ ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ
"ಕಾಂಗ್ರೆಸ್ ಯಾವುದೇ ಕಾರಣಕ್ಕೂ ನಗರ ಪ್ರದೇಶಗಳಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳಬಾರದು. ಆದ್ದರಿಂದ ನಗರ ಪ್ರದೇಶದ ಮತಗಳನ್ನು ಸೆಳೆಯಲು ಗಂಭೀರ ಸ್ತ್ರಾಟಜಿಗಳನ್ನು ಹಾಕಿಕೊಳ್ಳಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ನಗರ ಪ್ರದೇಶದ ಮತದಾರರನ್ನು ಸೆಳೆಯಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಸಾಧನಾ ಯಾತ್ರೆಯ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ನಗರ ಪ್ರದೇಶದ ಯುವಕರು, ಉದ್ಯೋಗಿಗಳನ್ನೂ ಸೆಳೆದಿದ್ದೇವೆ. ಅಲ್ಲದೆ ಇಂದಿರಾ ಕ್ಯಾಂಟೀನ್ ಮತ್ತು ಅನ್ನಭಾಗ್ಯ ಯೋಜನೆಗಳ ಬಗ್ಗೆ ನಗರ ಪ್ರದೇಶದಲ್ಲೂ ಮೆಚ್ಚುಗೆ ಇದೆ" ಎಂದರು.
ವರ್ಷದ ವ್ಯಕ್ತಿ : ಖಡಕ್ ಮಾತು, ಮೃದು ಮನಸಿನ ಸಿದ್ದರಾಮಯ್ಯ
ಕಾಂಗ್ರೆಸ್ ನಗರ ಪ್ರದೇಶದ ಮತಗಳನ್ನು ಸೆಳೆಯುವಲ್ಲಿ ತನಗೆ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ, ನಗರ ಪ್ರದೇಶದಲ್ಲಿರುವ ಬಡವರ ಏಳ್ಗೆಗೂ ಸರ್ಕಾರ ಯೋಜನೆಗಳನ್ನು ರೂಪಿಸಿದೆ ಎಂದರು. ಕಾಂಗ್ರೆಸ್ ಸದ್ಯಕ್ಕೆ ಅಧಿಕಾರದಲ್ಲಿರುವ ಬಹುದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಅಧಿಕಾರವನ್ನು ಮರುಸ್ಥಾಪಿಸುವುದು ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕದ ಕುರಿತು ವಿಶೇಷ ಆಸ್ಥೆ ವಹಿಸಿದ್ದಾರೆ.
ಜನವರಿ 20 ರಿಂದ ರಾಹುಲ್ ಗಾಂಧಿಯವರು ಮೂರು ದಿನಗಳ ಕಾಲ ಕರ್ನಾಟಕ ರಾಜ್ಯ ಪ್ರವಾಸ ಸಹ ಕೈಗೊಳ್ಳಲಿದ್ದಾರೆ.